BJP Manifesto 2023: ರಾಜ್ಯ ಬಿಜೆಪಿ ಪ್ರಣಾಳಿಕೆಗೆ ಕನ್ನಡದಲ್ಲೇ ಟ್ವೀಟ್ ಮಾಡಿ ಪ್ರಧಾನಿ ಮೋದಿ ಹೇಳಿದ್ದೇನು?
2023ರ ಕರ್ನಾಟಕ ವಿಧಾನಸಭೆ ಚುನಾವಣೆಯ ದಿನಾಂಕ ಹತ್ತಿರವಾಗುತ್ತಲೇ ರಾಜಕೀಯ ಪಕ್ಷಗಳು ತಮ್ಮ ಪ್ರಚಾರವನ್ನು ತೀವ್ರಗೊಳಿಸಿದ್ದಾರೆ. ಇದರ ನಡುವೆಯೇ ಮತದಾರರ ಮನಗೆಲ್ಲಲು ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತಿವೆ.
ಕರ್ನಾಟಕ ವಿಧಾನಸಭೆ ಚುನಾವಣೆ ಅಂಗವಾಗಿ ಬಿಜೆಪಿ ಪಕ್ಷ ಇಂದು (ಸೋಮವಾರ, ಮೇ 1) "ಪ್ರಜಾ ಪ್ರಣಾಳಿಕೆ' ಬಿಡುಗಡೆ ಮಾಡಿತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವು ಭಾಗವಹಿಸಿದ್ದರು.

ಸರ್ವವ್ಯಾಪಿ ಭರವಸೆಗಳಿಂದ ಕೂಡಿರುವ ಬಿಜೆಪಿ ಪ್ರಣಾಳಿಕೆಗೆ ಇದೀಗ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿ, ಕನ್ನಡದಲ್ಲೇ ಟ್ವೀಟ್ ಮಾಡಿ ಗಮನ ಸೆಳೆದಿದ್ದಾರೆ.
ಭಾರತೀಯ ಜನತಾ ಪಾರ್ಟಿಯ ಪ್ರಣಾಳಿಕೆಯು ಅಭಿವೃದ್ಧಿ ಕೇಂದ್ರಿತವಾಗಿದೆ ಮತ್ತು ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ @BJP4Karnataka ಸರ್ಕಾರವು ಮಾಡಿರುವ ಉತ್ತಮ ಕೆಲಸಗಳಿಗೆ ಅನುಗುಣವಾಗಿದೆ. #BJPPrajaPranalike2023 https://t.co/MsIIH7VWPW
— Narendra Modi (@narendramodi) May 1, 2023
"ಭಾರತೀಯ ಜನತಾ ಪಾರ್ಟಿಯ ಪ್ರಣಾಳಿಕೆಯು ಅಭಿವೃದ್ಧಿ ಕೇಂದ್ರಿತವಾಗಿದೆ ಮತ್ತು ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಮಾಡಿರುವ ಉತ್ತಮ ಕೆಲಸಗಳಿಗೆ ಅನುಗುಣವಾಗಿದೆ," ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಇನ್ನು ಮತದಾರರನ್ನು ಓಲೈಸಲು ತಮ್ಮ 16 ಅಂಶಗಳ ಪ್ರಣಾಳಿಕೆಯಲ್ಲಿ ಭರಪೂರ ಯೋಜನೆಗಳ ಭರವಸೆ ನೀಡಿದ್ದಲ್ಲದೆ, ಹಿಂದುತ್ವದ ವಿಚಾರವಾಗಿಯೂ ಹಲವು ಘೋಷಣೆಗಳು ಸೇರಿವೆ.
ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಬಿಪಿಎಲ್ ಕಾರ್ಡ್ದಾರರಿಗೆ ಮೂರು ಅಡುಗೆ ಸಿಲಿಂಡರ್ಗಳು ಹಾಗೂ ಪ್ರತಿನಿತ್ಯ ಅರ್ಧ ಲೀಟರ್ ಹಾಲು ಉಚಿವಾಗಿ ಕೊಡುವ ಘೋಷಣೆಯನ್ನೂ ಮಾಡಲಾಗಿದೆ. ಮೂರು ಸಿಲಿಂಡರ್ಗಳನ್ನು ಪ್ರತಿ ವರ್ಷ ಯುಗಾದಿ ಹಬ್ಬ, ಗಣೇಶ ಹಬ್ಬ ಮತ್ತು ದೀಪಾವಳಿಗೆ ಉಚಿತವಾಗಿ ನೀಡಲಾಗುವುದು ಘೋಷಿಸಿದೆ.
ಬಿಜೆಪಿ ಚುನಾವಣಾ ಪ್ರಣಾಳಿಕೆಯ ಪ್ರಮುಖ 16 ಅಂಶಗಳು
1) ಯುಗಾದಿ, ಗಣೇಶ ಚತುರ್ಥಿ ಮತ್ತು ದೀಪಾವಳಿ ಹಬ್ಬದ ತಿಂಗಳಲ್ಲಿ ಬಿಪಿಎಲ್ ಕುಟುಂಬಗಳಿಗೆ ಮೂರು ಎಲ್ಪಿಜಿ ಸಿಲಿಂಡರ್ಗಳನ್ನು ಉಚಿತವಾಗಿ ನೀಡಲಾಗುವುದು.
2) ರಾಜ್ಯದಾದ್ಯಂತ ಕೈಗೆಟುಕುವ ಮತ್ತು ಗುಣಮಟ್ಟದ ಆಹಾರವನ್ನು ಒದಗಿಸಲು ಪ್ರತಿ ಮುನ್ಸಿಪಲ್ ಕಾರ್ಪೊರೇಷನ್ನ ಪ್ರತಿ ವಾರ್ಡ್ನಲ್ಲಿ ಅಟಲ್ ಆಹಾರ ಕೇಂದ್ರ ಸ್ಥಾಪನೆ.
3) ಪೋಷಣೆ ಯೋಜನೆಯ ಮೂಲಕ ಪ್ರತಿ ಬಿಪಿಎಲ್ ಕುಟುಂಬಗಳಿಗೆ ಪ್ರತಿದಿನ ಅರ್ಧ ಲೀಟರ್ ನಂದಿನಿ ಮತ್ತು ಪ್ರತಿ ತಿಂಗಳು 5 ಕೆಜಿ ಶ್ರೀ ಅನ್ನ-ಸಿರಿಧಾನ್ಯವನ್ನು ಒಳಗೊಂಡ ಪಡಿತರ ಕಿಟ್ ಕೊಡಲಾಗುತ್ತದೆ.
4) ಉನ್ನತ ಮಟ್ಟದ ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ಕರ್ನಾಟಕದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ)ಯನ್ನು ಜಾರಿಗೊಳಿಸಲಾಗುವುದು.
5) ರಾಜ್ಯದಾದ್ಯಂತ ನಿವೇಶನ ರಹಿತ/ವಸತಿ ರಹಿತ ನಿವಾಸಿಗಳಿಗೆ, "ಸರ್ವರಿಗೂ ಸೂರು ಯೋಜನೆ' ಅಡಿಯಲ್ಲಿ ಕಂದಾಯ ಇಲಾಖೆ ಮೂಲಕ 10 ಲಕ್ಷ ಮನೆ ನೀಡಲಾಗುವುದು.
6) ಒನಕೆ ಓಬವ್ವ ಸಾಮಾಜಿಕ ನ್ಯಾಯ ನಿಧಿ ಯೋಜನೆಯಡಿಯಲ್ಲಿ ಎಸ್ಸಿ/ಎಸ್ಟಿ ಮಹಿಳೆಯರು ಮಾಡಿದ ಐದು ವರ್ಷಗಳ ಸ್ಥಿರ ಠೇವಣಿಗಳ ಮೇಲೆ ರೂ 10,000 ವರೆಗೆ ಹೊಂದಾಣಿಕೆಯ ಠೇವಣಿ ನೀಡಲಾಗುವುದು.
7) ಬೆಂಗಳೂರಿನ ಅಪಾರ್ಟ್ಮೆಂಟ್ಗಳಲ್ಲಿ ಸುಲಲಿತ ಜೀವನಕ್ಕಾಗಿ ಕರ್ನಾಟಕ ಅಪಾರ್ಟ್ಮೆಂಟ್ ಮಾಲೀಕತ್ವ ಕಾಯ್ದೆ, 1972 ಅನ್ನು ಸುಧಾರಿಸಲು ಮತ್ತು ಕುಂದುಕೊರತೆ ಪರಿಹಾರ ಕಾರ್ಯವಿಧಾನವನ್ನು ಆಧುನೀಕರಿಸಲು ಕರ್ನಾಟಕ ನಿವಾಸಿಗಳ ಕಲ್ಯಾಣ ಸಮಾಲೋಚನಾ ಸಮಿತಿಯನ್ನು ಅನುಷ್ಠಾನಗೊಳಿಸುವುದು.
8) ವಿಶ್ವೇಶ್ವರಯ್ಯ ವಿದ್ಯಾ ಯೋಜನೆ ಅಡಿಯಲ್ಲಿ ಸರ್ಕಾರಿ ಶಾಲೆಗಳ ಸಮಗ್ರ ಉನ್ನತೀಕರಣಕ್ಕಾಗಿ ಸರ್ಕಾರವು ಪ್ರಸಿದ್ಧ ವ್ಯಕ್ತಿಗಳು ಮತ್ತು ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದಲಿದೆ.
9) ಐಎಎಸ್/ಕೆಎಎಸ್/ಬ್ಯಾಂಕಿಂಗ್/ಸರ್ಕಾರಿ ಉದ್ಯೋಗಗಳಿಗೆ ತರಬೇತಿ ಪಡೆಯಲು ಯುವಕರಿಗೆ ಆರ್ಥಿಕ ಪ್ರೋತ್ಸಾಹ ಧನ ನೀಡಲಾಗುವುದು.
10) ಮಿಷನ್ ಸ್ವಾಸ್ಥ್ಯ ಕರ್ನಾಟಕದ ಅಡಿ ಆಸ್ಪತ್ರೆಗಳ ಮೂಲ ಸೌಕರ್ಯ ಸುಧಾರಿಸುವುದು. ಹಿರಿಯ ನಾಗರಿಕರಿಗೆ ಉಚಿತ ವಾರ್ಷಿಕ ಮಾಸ್ಟರ್ ಆರೋಗ್ಯ ತಪಾಸಣೆ.
11) ರಾಜ್ಯ ರಾಜಧಾನಿ ಪ್ರದೇಶ ಎಂದು ಗೊತ್ತುಪಡಿಸುವ ಮೂಲಕ ಬೆಂಗಳೂರನ್ನು ಅಭಿವೃದ್ಧಿಪಡಿಸಲಾಗುವುದು ಮತ್ತು ಸಮಗ್ರ, ತಂತ್ರಜ್ಞಾನ-ನೇತೃತ್ವದ ನಗರ ಅಭಿವೃದ್ಧಿ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲಾಗುವುದು. ಬೆಂಗಳೂರನ್ನು ಡಿಜಿಟಲ್ ಇನ್ನೋವೇಶನ್ನ ಜಾಗತಿಕ ಕೇಂದ್ರವಾಗಿ ರೂಪಿಸಲು ಪೂರಕ ಪರಿಸರ ವ್ಯವಸ್ಥೆ ಕಲ್ಪಿಸುವುದು.
12) ಕರ್ನಾಟಕವನ್ನು ಎಲೆಕ್ಟ್ರಿಕ್ ವಾಹನಗಳ ಪ್ರಮುಖ ಕೇಂದ್ರವನ್ನಾಗಿ ರೂಪಿಸುತ್ತೆವೆ. ಹಾಲಿ ಇರುವ ಬಿಎಂಟಿಸಿ ಬಸ್ಗಳನ್ನು ಎಲೆಕ್ಟ್ರಿಕ್ ಬಸ್ಗಳಾಗಿ ಪರಿವರ್ತಿಸಲಾಗುವುದು. ಚಾರ್ಜಿಂಗ್ ಸ್ಟೇಷನ್ಗಳನ್ನು ಸ್ಥಾಪಿಸುವ ಮೂಲಕ, 1,000 ಸ್ಟಾರ್ಟ್ಅಪ್ಗಳನ್ನು ಬೆಂಬಲಿಸಲಾಗುವುದು.
13) 30,000 ಕೋಟಿ ರೂ. ಕೆ-ಅಗ್ರಿ ಫಂಡ್ ಮೈಕ್ರೋ-ಕೋಲ್ಡ್ ಸ್ಟೋರೇಜ್ ಸೌಲಭ್ಯಗಳನ್ನು ಸ್ಥಾಪಿಸಲಾಗುವುದು. ಎಲ್ಲಾ ಜಿಪಿಗಳಲ್ಲಿ ಕೃಷಿ ಸಂಸ್ಕರಣಾ ಘಟಕಗಳು, ಐದು ಹೊಸ ಕೃಷಿ-ಕೈಗಾರಿಕೆ ಕ್ಲಸ್ಟರ್ಗಳನ್ನು ಮತ್ತು ಮೂರು ಹೊಸ ಆಹಾರ ಸಂಸ್ಕರಣಾ ಪಾರ್ಕ್ಗಳನ್ನು ಸ್ಥಾಪಿಸಲು.
14) ಅತ್ಯಾದುನಿಕ ಸೌಲಭ್ಯಗಳನ್ನು ಒದಗಿಸಿ ಕರ್ನಾಟಕವನ್ನು ಪ್ರಮುಖ ಪ್ರವಾಸಿ ಕೇಂದ್ರವನ್ನಾಗಿ ಮಾಡಲಾಗುವುದು. ಕಲ್ಯಾಣ ಸರ್ಕ್ಯೂಟ್, ಬನವಾಸಿ ಸರ್ಕ್ಯೂಟ್, ಪರಶುರಾಮ ಸರ್ಕ್ಯೂಟ್ ಮತ್ತು ಗಾಣಗಾಪುರ ಸರ್ಕ್ಯೂಟ್ ಅನ್ನು ಅಭಿವೃದ್ದಿಪಡಿಸಲು 1500 ಕೋಟಿ ರೂಪಾಯಿಗಳನ್ನು ನೀಡಲಾಗುವುದು.
15) ಉತ್ಪಾದನಾ ವಲಯದಲ್ಲಿ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗುವುದು. ಇವುಗಳನ್ನು ಬೆಂಗಳೂರಿನಿಂದ ಹೊರಗೆ ಲಾಜಿಸ್ಟಿಕ್, ಕೈಗಾರಿಕಾ ಕ್ಲಸ್ಟರ್ಗಳಿಗೆ ಸಂಯೋಜಿಸಿ ಉತ್ಪಾದನಾ ವಲಯ ಆಧಾರಿತ ಪ್ರೋತ್ಸಾಹ ಯೋಜನೆಯ ವ್ಯಾಪ್ತಿಯನ್ನು ವಿಸ್ತಿರಿಸಲಾಗುವುದು.
16) ಮಿಷನ್ ಸ್ವಾಸ್ಥ್ಯ ಕರ್ನಾಟಕದ ಅಡಿ ಸರ್ಕಾರ ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರಗಳಲ್ಲಿನ ಮೂಲಸೌಕರ್ಯಗಳನ್ನು ಸುಧಾರಿಸಲಾಗುವುದು.












Click it and Unblock the Notifications