ಫೆ. 19ರಂದು ರಾಜ್ಯಕ್ಕೆ ಮತ್ತೊಮ್ಮೆ ಮೋದಿ, ಮೈಸೂರಿನಲ್ಲಿ ಸಮಾವೇಶ
ಬೆಂಗಳೂರು, ಫೆಬ್ರವರಿ 13: 2018ರ ಕರ್ನಾಟಕ ವಿಧಾನಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಫೆಬ್ರವರಿ 4ರಂದು ಪರಿವರ್ತನಾ ಯಾತ್ರೆಯ ಸಮಾರೋಪದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ದಿನಾಂಕ ಘೋಷಣೆಗೂ ಮುನ್ನ ಕರ್ನಾಟಕಕ್ಕೆ ಇನ್ನೂ ನಾಲ್ಕು ಬಾರಿ ಬರಲಿದ್ದಾರೆ.
ಫೆಬ್ರವರಿ 19ರಂದು ಮೈಸೂರಿನಲ್ಲಿ ಮೊದಲ ಕಾರ್ಯಕ್ರಮ ನಿಗದಿಯಾಗಿದೆ. ಅಂದು ಮೈಸೂರಿಗೆ ಬರಲಿರುವ ಪ್ರಧಾನಿ ನರೇಂದ್ರ ಮೋದಿ ಮೈಸೂರು-ರಾಜಸ್ಥಾನ ನಡುವಿನ ಹಮ್ ಸಫರ್ ಹಾಗೂ ಮೈಸೂರು-ಬೆಂಗಳೂರು ನಡುವಿನ ಎಲೆಕ್ಟ್ರಿಕ್ ಟ್ರೈನ್ ಗೆ ಚಾಲನೆ ನೀಡಲಿದ್ದಾರೆ.
ನಂತರ ನಗರದಲ್ಲಿ ನಿರ್ಮಾಣಗೊಂಡಿರುವ ಇಎಸ್ಐ ಆಸ್ಪತ್ರೆ ಉದ್ಘಾಟಿಸಲಿದ್ದಾರೆ. ಬಳಿಕ ಬೆಂಗಳೂರು - ಮೈಸೂರು ನಡುವೆ ನಿರ್ಮಿಸಲು ಉದ್ದೇಶಿಸಿರುವ ಷಟ್ಪಥ ರಸ್ತೆ ಮತ್ತು ಎರಡು ಸರ್ವಿಸ್ ರಸ್ತೆಗಳ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ.
ಅಂದೇ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬಹಿರಂಗ ಸಭೆ ನಡೆಯಲಿದ್ದು ಇದರಲ್ಲಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ಶ್ರವಣಬೆಳಗೊಳದಲ್ಲಿ ಮಸ್ತಕಾಭಿಷೇಕ ನಡೆಯುತ್ತಿದ್ದು ಮೋದಿ ಅಲ್ಲಿಗೂ ತೆರಳುವ ಸಾಧ್ಯತೆ ಇದೆ.
ಫೆಬ್ರವರಿ 27ರಂದು ದಾವಣಗೆರೆಗೆ ಮೋದಿ
ಇನ್ನು ಫೆಬ್ರವರಿ 27ರಂದು ದಾವಣೆಗೆರೆಯಲ್ಲಿ ಬಿಜೆಪಿ ರೈತರ ಸಮಾವೇಶ ಹಮ್ಮಿಕೊಂಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರ 75ನೇ ಹುಟ್ಟುಹಬ್ಬದಂದೇ ಈ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು ಇದರಲ್ಲೂ ಮೋದಿ ಪಾಲ್ಗೊಳ್ಳಲಿದ್ದಾರೆ.
ಈ ಸಮಾವೇಶದಲ್ಲಿ 2 ಲಕ್ಷಕ್ಕೂ ಹೆಚ್ಚಿನ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ಸಭೆಯಲ್ಲಿ ಮೋದಿ ಕೇಂದ್ರ ಸರಕಾರ ರೈತರಿಗಾಗಿ ಜಾರಿಗೆ ತಂದಿರುವ ಯೋಜನೆಗಳು, ರೈತರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತಾಗಿ ಮಾತನಾಡಲಿದ್ದಾರೆ.
ಮಾ. 4 ವಿಜಯಪುರ, ಮಾ. 13 ರಾಯಚೂರು
ಇದೇ ರೀತಿ ಮಾರ್ಚ್ 4 ರಂದು ವಿಜಯಪುರ ಹಾಗೂ ಮಾರ್ಚ್ 13ರಂದು ರಾಯಚೂರಿನಲ್ಲಿ ನಡೆಯಲಿರುವ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ಈ ಸಮಾವೇಶಕ್ಕೆ ಅಂದಾಜು 2 ಲಕ್ಷ ಜನರು ಸೇರುವ ನಿರೀಕ್ಷೆ ಇದೆ.