ಪ್ರಧಾನಿ ಬಳಿ ನಿಯೋಗ: ಸಿದ್ದು, ಬಿಎಸ್ವೈ ಅದೇ ರಾಗ ಅದೇ ಹಾಡು
ರಾಜ್ಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಧಾನಿ ಮೋದಿ ಬಳಿ ನಿಯೋಗ ಕರೆದುಕೊಂಡು ಹೋಗುವ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ನಡುವೆ 'ರಾಜಕೀಯ ಕಲಹ'.
ಬೆಂಗಳೂರು, ಡಿ 11: ಮಹದಾಯಿ ನದಿನೀರು ಹಂಚಿಕೆ ಮತ್ತು ರಾಜ್ಯ ಎದುರಿಸುತ್ತಿರುವ ಭೀಕರ ಬರದ ಪರಿಸ್ಥಿತಿಯನ್ನು ಪ್ರಧಾನಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲು ಸಮಯಾವಕಾಶ ಕೋರಲಾಗಿತ್ತು, ಆದರೆ ಮೋದಿ ರಾಜ್ಯದ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತ ಪಡಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಪ್ರಧಾನಮಂತ್ರಿಗಳನ್ನು ದೂರುವ ಮೊದಲು ರಾಜ್ಯ ಸರಕಾರ ಪೂರ್ವ ತಯಾರಿ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ. (ಸಿದ್ದು ಸಚಿವ ಸಂಪುಟ ಸಭೆ ನಿರ್ಣಯಗಳು)
ನಗರದಲ್ಲಿ ಶನಿವಾರ (ಡಿ 10) ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಿದ್ದರಾಮಯ್ಯ, ಪ್ರಧಾನಮಂತ್ರಿಗಳಿಗೆ ಒಕ್ಕೂಟ ವ್ಯವಸ್ಥೆಯ ಮೇಲೆ ನಂಬಿಕೆಯಿಲ್ಲದಿರುವುದು ದುರಂತ. ರಾಜ್ಯವನ್ನು ಪ್ರಧಾನಿ ನಿರ್ಲಕ್ಷಿಸುತ್ತಿದ್ದಾರೆಂದು ಸಿಎಂ ಆರೋಪಿಸಿದ್ದಾರೆ.
ಡಿಸೆಂಬರ್ 9ರಂದು ರಾಜ್ಯದ ನಿಯೋಗದೊಂದಿಗೆ ಪ್ರಧಾನಿ ಭೇಟಿ ಮಾಡಲು ಸಮಯಾವಕಾಶ ಕೋರಿದ್ದೆವು, ಆದರೆ ಪ್ರಧಾನಿ ಕಾರ್ಯಾಲಯದಿಂದ ಇದುವರೆಗೂ ಉತ್ತರ ಬಂದಿಲ್ಲ. ಒಂದು ರಾಜ್ಯದ ಸಿಎಂ ಜೊತೆ ಪ್ರಧಾನಿ ಈ ರೀತಿ ನಡೆದುಕೊಳ್ಳುತ್ತಿದ್ದಾರೆಂದು ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ನಮ್ಮ ಸರಕಾರದ ವಿರುದ್ದ ಟೀಕೆ ಮಾಡುತ್ತಿರುವ ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಒಕ್ಕೂಟ ವ್ಯವಸ್ಥೆ ಎಂದರೇನು ಎಂದು ಮೊದಲು ಅರ್ಥ ಮಾಡಿಕೊಳ್ಳಬೇಕೆಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
ಇತ್ತ ಸಿಎಂ ಆರೋಪಕ್ಕೆ ಪ್ರತ್ಯುತ್ತರ ನೀಡಿರುವ ಯಡಿಯೂರಪ್ಪ, ಇತ್ತೀಚೆಗೆ ದೆಹಲಿಯಲ್ಲಿ ಕಾಟಾಚಾರಕ್ಕೆ ಮುಖ್ಯಮಂತ್ರಿಗಳು ಸಭೆ ನಡೆಸಿದ್ದರು. ಕೇಂದ್ರ ಇದುವರೆಗೆ ರಾಜ್ಯಕ್ಕೆ ನೀಡಿರುವ 1.65 ಲಕ್ಷ ಕೋಟಿ ರೂಪಾಯಿಯ ಲೆಕ್ಕವನ್ನು ರಾಜ್ಯ ಸರಕಾರ ನೀಡಲಿ ಎಂದಿದ್ದಾರೆ.