ಕರ್ನಾಟಕಕ್ಕೂ ಕಾಲಿಟ್ಟ ಪ್ಲಾಸ್ಟಿಕ್ ಸಕ್ಕರೆ, ತನಿಖೆಗೆ ಆದೇಶ
ಬೆಂಗಳೂರು, ಜೂನ್ 6: ಪ್ಲಾಸ್ಟಿಕ್ ಮೊಟ್ಟೆ, ಪ್ಲಾಸ್ಟಿಕ್ ಅಕ್ಕಿಯ ನಂತರ ಇದೀಗ ಪ್ಲಾಸ್ಟಿಕ್ ಸಕ್ಕರೆಯೂ ಕರ್ನಾಟಕದ ಮಾರುಕಟ್ಟೆ ಪ್ರವೇಶಿಸಿದೆ. ಒಂದು ವಾರಗಳ ಅಂತರದಲ್ಲಿ ಸಕ್ಕರೆಗೆ ಪ್ಲಾಸ್ಟಿಕ್ ಬೆರೆಸಿರುವ ಪ್ರಕರಣಗಳು ಗದಗ ಮತ್ತು ತುಮಕೂರಿನಿಂದ ವರದಿಯಾಗಿವೆ.
"ನಾನು ಚಹಾ ಮಾಡಲು ಕುದಿಯುವ ನೀರಿಗೆ ಸಕ್ಕರೆ ಹಾಕಿದೆ. ನಂತರ ನಾನು ಅಡುಗೆ ಕೋಣೆಯಿಂದ ಹೊರ ಬಂದೆ. ಸ್ವಲ್ಪ ಹೊತ್ತಿನಲ್ಲಿ ಅಡುಗೆ ಕೋಣೆಯಿಂದ ಹೊಗೆ ಬಂತು. ನಾನು ಏನಾಯ್ತು ಎಂದು ನೋಡಲು ಹೋದರೆ ಪಾತ್ರೆಯ ತಳದಲ್ಲಿ ಪ್ಲಾಸ್ಟಿಕ್ ಕರಗಿ ಹಿಡಿದುಕೊಂಡಿತ್ತು. ಪ್ರತೀ ಬಾರಿ ಕುದಿಯು ನೀರಿಗೆ ಸಕ್ಕರೆ ಹಾಕಿದಾಗಲೂ ಇದೇ ರೀತಿಯಲ್ಲಿ ನೀರಿನ ಮೇಲೆ ಕಣಗಳು ತೇಲುತ್ತವೆ," ಎನ್ನುತ್ತಾರೆ ಸಕ್ಕರೆಯಲ್ಲಿ ಪ್ಲಾಸ್ಟಿಕ್ ಪತ್ತೆ ಹಚ್ಚಿದ ಗದಗದ ನಿವಾಸಿಯೊಬ್ಬರು.

ಈ ರೀತಿಯಾದರೆ ನಮ್ಮ ಆರೋಗ್ಯದ ಪರಿಸ್ಥಿತಿ ಏನು? ಈ ಕಲಬೆರಕೆ ಮಾಡಿದ ಕಂಪೆನಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇನ್ನು ವಾರದ ಹಿಂದೆ ಇದೇ ರೀತಿಯ ಪ್ರಕರಣ ಹಾಸನದಿಂದ ವರದಿಯಾಗಿತ್ತು. ಇದಾದ ನಂತರ ಗ್ರಾಹಕರು ಅಂಗಡಿ ಮುಂದೆ ಪ್ರತಿಭಟನೆ ನಡೆಸಿದ್ದೂ ನಡೆದಿತ್ತು. ಸ್ಥಳಕ್ಕೆ ಭೇಟಿ ನೀಡಿದ್ದ ಸಚಿವ ಎ ಮಂಜು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಜನ ಪ್ರತಿಭಟನೆ ನಿಲ್ಲಿಸಿದ್ದರು.
ತನಿಖೆಗೆ ಆದೇಶ
ಕಲಬೆರಕೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತನಿಖೆಗೆ ಆದೇಶ ನೀಡಲಾಗಿದೆ. ಆಹಾರ ಸುರಕ್ಷಾ ವಿಭಾಗ ಸಕ್ಕರೆಯ ಮಾದರಿಗಳನ್ನು ಪಡೆದುಕೊಂಡು ತನಿಖೆ ನಡೆಸುತ್ತಿದೆ. ಇನ್ನು ಪ್ರಕರಣದ ತನಿಖೆಗೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯೂ ಆದೇಶ ನೀಡಿದೆ.

"ಇದರ ಹಿಂದೆ ದೊಡ್ಡ ಜಾಲವೇ ಇದ್ದಂತೆ ಕಾಣಿಸುತ್ತಿದೆ. ಅಕ್ಕಿ ಮತ್ತು ಸಕ್ಕರೆಯಲ್ಲಿ ಪ್ಲಾಸ್ಟಿಕ್ ಪತ್ತೆಯಾಗಿದೆ. ನಾವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಿದ್ದೇವೆ. ಅಂಗಡಿಯಲ್ಲೇ ಪ್ಲಾಸ್ಟಿಕ್ ಮಿಕ್ಸ್ ಮಾಡುತ್ತಿದ್ದಾರೋ ಅಥವಾ ಫ್ಯಾಕ್ಟರಿಯಲ್ಲೋ ಎಂಬುದರ ತನಿಖೆಗೆ ಆದೇಶ ನೀಡಿಲಾಗಿದೆ," ಎಂದು ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಯುಟಿ ಖಾದರ್ ಹೇಳಿದ್ದಾರೆ.
ಇದೀಗ ಪ್ಲಾಸ್ಟಿಕ್ ಸಕ್ಕರೆಯಿಂದ ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಆತಂಕ ತಲೆದೋರಿದೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications