ಕರ್ನಾಟಕದಲ್ಲಿಯೂ ಆರಂಭವಾಯಿತು ಪ್ಲಾಸ್ಮಾ ಥೆರಪಿ; ನಿರೀಕ್ಷೆ ಬಹಳ
ಬೆಂಗಳೂರು, ಏಪ್ರಿಲ್ 25: ಕರೊನಾ ಭೀತಿ ಮಧ್ಯೆ ಸಿಹಿ ಸುದ್ದಿಯೊಂದು ಹೊರ ಬಿದ್ದಿದೆ. ಕೊರೊನಾದಿಂದ ಸಾವು ಸಂಭವಿಸುವುದನ್ನು ತಡೆಹಿಡಿಯುತ್ತದೆ ಎನ್ನಲಾಗಿರುವ ಪ್ಲಾಸ್ಮಾ ಥೆರಪಿಯನ್ನು ಇಂದಿನಿಂದ ರಾಜ್ಯದಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿದೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೊದಲ ಪ್ಲಾಸ್ಮಾ ಥೆರಪಿ ಕ್ಲಿನಿಕಲ್ ಟ್ರಯಲ್ ಗೆ ಇಂದು ಚಾಲನೆ ನೀಡಲಾಗಿದೆ. ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ್ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಅವರು ಚಾಲನೆ ನೀಡಿದರು.
ಈ ವೇಳೆ ಆರೋಗ್ಯ ಸಚಿವ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಮೊದಲ ಪ್ಲಾಸ್ಮಾ ಥೆರಪಿ ಪ್ರಯೋಗ ವೀಕ್ಷಿಸಿದರು.

ಗುಣಮುಖನಾದ ವ್ಯಕ್ತಿಯ ರಕ್ತಕಣ ಬಳಕೆ
ತೀರಾ ಗಂಭೀರ ಇರುವ ಕೊರೊನಾ ಇರುವ ರೋಗಿಗಳಿಗೆ ಪ್ಲಾಸ್ಮಾ ಥೆರಪಿ ನೀಡಲು ನಿರ್ಧರಿಸಲಾಗಿದೆ. ಚಿಕಿತ್ಸೆಗೆ ಕರೊನಾದಿಂದ ಗುಣಮುಖನಾದ ವ್ಯಕ್ತಿಯ ರಕ್ತಕಣ ಬಳಕೆ ಮಾಡಲಾಗುತ್ತದೆ. ಗುಣಮುಖ ವ್ಯಕ್ತಿಯ ರೋಗನಿರೋಧಕ ಶಕ್ತಿ ಆಧರಿಸಿ ಚಿಕಿತ್ಸೆ ನೀಡಲಾಗುತ್ತದೆ. ರೋಗ ನಿರೋಧಕ ಶಕ್ತಿ ರೂಪುಗೊಂಡು 3-7 ದಿನಗಳಲ್ಲಿ ಕೊರೊನಾ ರೋಗಿಗಳು ಗುಣಮುಖರಾಗುವ ನಿರೀಕ್ಷೆ ಈ ಚಿಕಿತ್ಸಾ ಕ್ರಮದ ಮೇಲಿದೆ.

ಬಹಳ ಗಂಭೀರ ಇರುವವರಿಗೆ ಚಿಕಿತ್ಸೆ ನೀಡುತ್ತೇವೆ
ಪ್ಲಾಸ್ಮಾ ಚಿಕಿತ್ಸೆ ಪ್ರಯೋಗ ವೀಕ್ಷಣೆ ಬಳಿಕ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಕೊರೊನಾ ಬಹಳ ಗಂಭೀರ ಇರುವವರಿಗೆ ಚಿಕಿತ್ಸೆ ನೀಡುತ್ತೇವೆ. ಹೀಗಾಗಿ ನಾವು ಈ ಚಿಕಿತ್ಸೆ ಪ್ರಾರಂಭ ಮಾಡಿದ್ದೇವೆ. ಗುಣಮುಖರಾಗಿರೋ ವ್ಯಕ್ತಿ ಸ್ವಯಂ ಪ್ರೇರಿತವಾಗಿ ಬಂದಿದ್ದಾರೆ. ಪ್ರಾರಂಭಿಕವಾಗಿ ಈತನಿಗೆ ಕೆಲವು ಟೆಸ್ಟ್ ಮಾಡಬೇಕು ಸೋಮವಾರದಿಂದ ಈ ಚಿಕಿತ್ಸೆ ಆರಂಭಿಸುತ್ತಿದ್ದೇವೆ ಎಂದರು.

ಕ್ಲಿನಿಕಲ್ ಟ್ರಯಲ್ ಆಗಿದೆ
ಆರೋಗ್ಯ ಸಚಿವ ಬಿ ಶ್ರೀರಾಮುಲು ಮಾತನಾಡಿ, ಪ್ಲಾಸ್ಮಾ ಥೆರಪಿ ಸದ್ಯ ಕ್ಲಿನಿಕಲ್ ಟ್ರಯಲ್ ಆಗಿದೆ. ಬೇರೆ ಕಡೆ ಈ ಪದ್ಧತಿಯಿಂದ ಉತ್ತಮ ಫಲಿತಾಂಶ ಕಂಡು ಬಂದಿದ್ದೆ. ಹೀಗಾಗಿ ಗುಣಮುಖರಾದವರು ಸ್ವಯಂಪ್ರೇರಿತರಾಗಿ ಬಂದು ಪ್ಮಾಸ್ಮಾ ನೀಡಿ. ಪ್ಮಾಸ್ಮಾ ನೀಡುವುದರಿಂದ ಯಾರಿಗೂ ತೊಂದರೆಯಾಗುವುದಿಲ್ಲ ಎಂದು ಮನವಿ ಮಾಡಿದ್ದೇವೆ ಎಂದು ಹೇಳಿದರು.

15 ಹೊಸ ಕೊರೊನಾ ಸೋಂಕಿತ ಪ್ರಕರಣಗಳು
ನಿನ್ನೆ ಸಂಜೆಯಿಂದ ಈವರೆಗೆ ರಾಜ್ಯದಲ್ಲಿ 15 ಹೊಸ ಕೊರೊನಾ ಸೋಂಕಿತ ಪ್ರಕರಣಗಳು ದೃಢವಾಗಿವೆ. ರಾಜ್ಯದಲ್ಲಿ 489ಕ್ಕೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ. ಬೆಂಗಳೂರು 6, ಬೆಳಗಾವಿ 6, ಮಂಡ್ಯ, ಚಿಕ್ಕಬಳ್ಳಾಪುರ ಹಾಗೂ ಮಂಗಳೂರಿನಲ್ಲಿ ತಲಾ ಒಂದು ಸೋಂಕಿತ ಪ್ರಕರಣಗಳು ದೃಢವಾಗಿವೆ. ಈವರೆಗೆ ಒಟ್ಟು 153 ಜನರು ಗುಣಮುಖರಾಗಿದ್ದು, 18 ಜನರ ಸಾವನ್ನಪ್ಪಿದ್ದಾರೆ.












Click it and Unblock the Notifications