ಆರು ಸಾವಿರ ಕೊಟ್ಟು ಅರವತ್ತು ಸಾವಿರ ಕೀಳೋ ಪಿಕ್ ಪಾಕೆಟ್ ಬಿಜೆಪಿ ಸರ್ಕಾರ: ಮಧು ಬಂಗಾರಪ್ಪ ವಾಗ್ದಾಳಿ
ಶಿವಮೊಗ್ಗ, ಮೇ 6: ರೈತರಿಗೆ 6 ಸಾವಿರ ರೂ ಹಣ ನೀಡಿ 60 ಸಾವಿರ ಸುಲಿಗೆ ಮಾಡುತ್ತಾರೆ. ಸಾರ್ವಜನಿಕರ ಜೇಬಿಗೆ ಪಿಕ್ ಪಾಕೆಟ್ ಮಾಡುತ್ತಿರುವುದು ಬಿಜೆಪಿ ಸರ್ಕಾರ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಶ್ರೀನಿವಾಸ್ ಕರಿಯಣ್ಣ ಪರ ಪ್ರಚಾರ ನಡೆಸಿದ ಮಧು ಬಂಗಾರಪ್ಪ ತಮ್ಮ ತಂದೆ ಮಾಡಿರುವಂತಹ ಕೊಡುಗೆಗಳನ್ನು ನೆನೆದು ಕಾಂಗ್ರೆಸ್ ಪಕ್ಷವೇ ಭವಿಷ್ಯಕ್ಕೆ ಬುನಾದಿ ಎಂದರು. ಗ್ರಾಮೀಣ ಭಾಗದ ಜನರು ಹಕ್ಕುಪತ್ರಗಳನ್ನು ಕೇಳಿದ್ದೀರಿ. ಅದನ್ನು ಬರಿ ಮತಕ್ಕೊಸ್ಕರ ನಾನು ಬಳಸಿಕೊಳ್ಳುತ್ತಿಲ್ಲ. ನಾನು ಅಧಿಕಾರಕ್ಕೆ ಬಂದರೆ ಅದನ್ನ ಮಾಡಿಯೇ ತೀರುತ್ತೇನೆ. ಆ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ. ಹಾಗಾಗಿ ಶ್ರೀನಿವಾಸ್ ಕರಿಯಣ್ಣ ಅವರಿಗೆ ಮತ ನೀಡಬೇಕು. ನೀವು ಕಾಂಗ್ರೆಸ್ ಗೆ ಶಕ್ತಿ ನೀಡಲಿಲ್ಲ ಎಂದರೆ ನಾವು ಕೆಲಸ ಮಾಡಲು ಸಾಧ್ಯವಿಲ್ಲ ಎಂದರು.

ಅಯ್ಯೋ ಬಂಗಾರಪ್ಪ ಇದ್ದಿದ್ದರೆ ಹೀಗೆ ಆಗುತ್ತಿರಲಿಲ್ಲ ಎಂದು ಸಾಕಷ್ಟು ಕಡೆ ಜನರು ನನಗೆ ಹೇಳುತ್ತಾರೆ ಯಾಕೆ ಚಿಂತೆ ಮಾಡ್ತೀರಾ ನಾನಿದ್ದೇನೆಲ್ಲ ಎಂದು ಮಧು ಬಂಗಾರಪ್ಪ ಜನರಿಗೆ ಆಶ್ವಾಸನೆ ನೀಡಿದ್ದಾರೆ. ಅಲ್ಲದೇ ಹಾಲು ಉತ್ಪಾದಕರ ಸಮಸ್ಯೆಗಳನ್ನು ಕೇಳಿದೆ. ಸಾಕಷ್ಟು ಮಹಿಳೆಯರು ಹಾಲು ಉತ್ಪಾದಕರಿಗೆ ನೀಡುವ ದರವನ್ನ ಏರಿಸಿ ಎಂದು ಕೇಳುತ್ತಿದ್ದಾರೆ. ಆದರೆ ಬಿಜೆಪಿ ಸರ್ಕಾರ ಏರಿಸುವುದಿಲ್ಲ ಬದಲಿಗೆ GST ಏರಿಸುತ್ತಾರೆ. ನಿಮಗೆ ಹಣ ನೀಡುವುದರ ಬಗ್ಗೆ ಅವರು ಯೋಚನೆ ಮಾಡೋದೇ ಇಲ್ಲ. ನಿಮ್ಮಿಂದ ಏನಾದರೂ ಹಣ ಕಿತ್ತು ಕೊಡಬಹುದಾ ಎಂದು ನೋಡುತ್ತಾರೆ ಎಂದು ಕಿಡಿಕಾರಿದರು.
ಬಿಜೆಪಿ ನಾಯಕರು ಇಲ್ಲಿಗೆ ಬಂದಾಗ ಅವರಿಗೆ ಪ್ರಶ್ನೆಗಳನ್ನು ಕೇಳಿ 1,200 ರೂ ಸಿಲಿಂಡರ್ ಬೆಲೆ ಆಗಿದೆ. ಇವರಿಗೆ ಏನಾದರೂ ಮಾನ ಮರ್ಯಾದೆ ಇದೆಯಾ..? ಹಳ್ಳಿ ಹೆಣ್ಣುಮಕ್ಕಳು ಒಲೆ ಊದಿ ಹೈರಾಣಾಗಿದ್ದಾರೆ. ಅವರ ಕಣ್ಣೀರು ಒರೆಸಲು ಸಿಲಿಂಡರ್ ಉಚಿತವಾಗಿ ನೀಡುತ್ತೇನೆ ಎಂದು ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ, ಒಂದು ಸಿಲಿಂಡರ್ ಉಚಿತ ನೀಡಿ ಇನ್ನುಳಿದ ಸಿಲಿಂಡರ್ ಬೆಲೆಯನ್ನು ಮೂರು ಪಟ್ಟು ಏರಿಸಿದರು. ಇಂತಹ ಸಂಕಷ್ಟದ ಸಮಯದಲ್ಲಿ ಕೂಲಿ ಕಾರ್ಮಿಕರು ಹೇಗೆ ಬದುಕಬೇಕಾಗುತ್ತದೆ.? ಎಂದು ಪ್ರಶ್ನಿಸಿದ್ದಾರೆ.

ನಾವು ಉಚಿತ ಭಾಗ್ಯಗಳನ್ನು ಘೋಷಣೆ ಮಾಡಿದ್ದೇವೆ. ಆದರೆ ನಮ್ಮ ಕೈಯಿಂದ ಏನು ನಾವು ಕೊಟ್ಟಿಲ್ಲ. ನಿಮ್ಮ ತೆರಿಗೆ ಹಣದಲ್ಲೇ ನಾವು ನಿಮಗೆ ಆ ಸೌಲಭ್ಯ ಕೊಡುತ್ತೇವೆ. ಆದರೆ ಬಿಜೆಪಿ ಹಾಗೆ ಮಾಡೋದಿಲ್ಲ. ಅದು ಜನರಿಗೆ ಗೊತ್ತಾಗುತ್ತಿಲ್ಲ. ಇಷ್ಟೊಂದು ಜನ ನೀಡಿಗಾಗಿ ಬೋರ್ ವೆಲ್ ತೋಡಿಸಿದ್ದೀರ. ಯಾರಾದರೂ ಅದರ ಬಿಲ್ ಕಟ್ಟಿದ್ದೀರಾ..? ಎಲ್ಲರೂ ಕೂಡ ಬಂಗಾರಪ್ಪನ ಋಣದಲ್ಲಿದ್ದೇವೆ. 32 ವರ್ಷ ಉಚಿತ ವಿದ್ಯುತ್ ಪಡೆದುಕೊಂಡಿದ್ದೀರಿ. ಬಿಜೆಪಿ ನಿಮ್ಮ ಉಚಿತ ವಿದ್ಯುತ್ ಗೆ ಮೀಟರ್ ಅಳವಡಿಕೆ ಪ್ರಯತ್ನ ನಡೆಸಿದೆ. ಆದರೆ ಕಾಂಗ್ರೆಸ್ ಅವರ ಪ್ರತಿಭಟನೆ ಬಿಸಿಗೆ ನಿಲ್ಲಿಸಿದ್ದಾರೆ ಅಷ್ಟೇ. ಮತ್ತೆ ಅಧಿಕಾರಕ್ಕೆ ಬಂದರೆ ಮಾಡದೇ ಬಿಡುವುದಿಲ್ಲ. ದುಡಿವ ಕೈಗೆ ಭೂಮಿ ಕೊಟ್ಟಿರೋದು ಬಂಗಾರಪ್ಪ ಅದಕ್ಕೆ ನೀರೂ ಕೊಡಬೇಕು ಅದನ್ನ ನಾವು ಉಳಿಸಿಕೊಂಡು ಹೋಗುತ್ತೇವೆ ಎಂದು ಮಧು ಬಂಗಾರಪ್ಪ ಹೇಳಿದರು.












Click it and Unblock the Notifications