ಫೋನ್ ಕದ್ದಾಲಿಕೆಯಲ್ಲ, ಬಿಜೆಪಿಯವರು ಹೊತ್ತುಕೊಂಡೇ ಹೋಗಿದ್ದಾರೆ: ದೇವೇಗೌಡ ಕಿಡಿ
Recommended Video
ಬೆಂಗಳೂರು, ಆಗಸ್ಟ್ 15: ಬೆಂಗಳೂರು ನಗರದ ಹಾಲಿ ಪೊಲೀಸ್ ಆಯುಕ್ತ ಭಾಸ್ಕರ ರಾವ್ ಸೇರಿದಂತೆ ಅನೇಕ ರಾಜಕಾರಣಿಗಳ ಫೋನ್ ಸಂಭಾಷಣೆಯನ್ನು ಕದ್ದಾಲಿಕೆ ಮಾಡಲಾಗಿದೆ ಎಂಬ ಆರೋಪ ತೀವ್ರ ಚರ್ಚೆಗೆ ಒಳಗಾಗಿದೆ. ಹಿಂದಿನ ಸಮ್ಮಿಶ್ರ ಸರ್ಕಾರದ ನಾಯಕರು ಮತ್ತು ಬಿಜೆಪಿ ಮುಖಂಡರು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ರಾಜಕೀಯ ನಾಯಕರ ಫೋನ್ ಸಂಭಾಷಣೆಯನ್ನು ಕದ್ದಾಲಿಕೆ ಮಾಡಿಸಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ತಮ್ಮ ಮಗನ ವಿರುದ್ಧ ಕೇಳಿಬಂದಿರುವ ಆರೋಪಕ್ಕೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಆಕ್ರೋಶ ಹೊರಹಾಕಿದ್ದಾರೆ. ಫೋನ್ ಕದ್ದಾಲಿಕೆ ಬಗ್ಗೆ ಎಲ್ಲ ಗೊತ್ತಿದೆ. ಯಾವ ಕಾಲದಲ್ಲಿ ಏನಾಗಿದೆ ಎಂದು ತಿಳಿದಿದೆ. ಆದರೆ ಆ ಬಗ್ಗೆ ಚರ್ಚೆ ಈಗ ಬೇಕಿಲ್ಲ ಎಂದು ಅವರು ಹೇಳಿದ್ದಾರೆ.

'ಬಿಜೆಪಿಯವರಿಗೆ ಮಾನ ಮರ್ಯಾದೆ ಇದೆಯಾ?'
''ಸರ್ಕಾರ ಉಳಿಸಿಕೊಳ್ಳಲು ಕದ್ದಾಲಿಕೆ ಮಾಡಿಲ್ಲ. ಕದ್ದಾಲಿಕೆ ವಿಚಾರವಾಗಿ ನಾನು ತುಂಬಾ ಹೊತ್ತು ಮಾತನಾಡಬಲ್ಲೆ. ಯಾವ ರಾಜ್ಯದಲ್ಲಿ, ಕೇಂದ್ರದಲ್ಲಿ ಮತ್ತು ಇಲ್ಲಿ ಏನು ನಡೆಯುತ್ತಿದೆ ಎಂದು ಎಲ್ಲ ಗೊತ್ತಿದೆ. ಬಿಜೆಪಿಯವರಿಗೆ ಬೇರೆ ಕೆಲಸ ಇಲ್ಲ ಅಲ್ವಾ? ಅವರಿಗೆ ಮಾನಮರ್ಯಾದೆ ಇದೆಯಾ? ಅವರು ಏನು ಮಾಡಿದ್ದಾರೆ ಎಂದು ನಮಗೆ ಗೊತ್ತಿದೆ. ಕದ್ದಾಲಿಕೆ ಏಕೆ, ನೇರವಾಗಿಯೇ ಹೊತ್ತುಕೊಂಡು ಹೋಗಿದ್ದಾರೆ'' ಎಂದು ಸಿಟ್ಟಿನಿಂದ ನುಡಿದರು.

ಆರು ತಿಂಗಳ ಹಿಂದೆಯೇ ಹೇಳಿದ್ದೆ
''ನಾನು ಉಪಮುಖ್ಯಮಂತ್ರಿಯಾಗಿದ್ದವನು. ಫೋನ್ ಕದ್ದಾಲಿಕೆ ಬಗ್ಗೆ ನನಗೆ ಖಚಿತವಾಗಿ ಗೊತ್ತಿದೆ. ಆರು ತಿಂಗಳ ಹಿಂದೆಯೇ ಫೋನ್ ಕದ್ದಾಲಿಕೆ ಬಗ್ಗೆ ಹೇಳಿದ್ದೆ. ಆಗ ನಾನು ಜೋಕ್ ಮಾಡುತ್ತಿದ್ದೇನೆ ಎಂದುಕೊಂಡರು. ಈಗ ಆ ವಿಚಾರ ದೊಡ್ಡದಾಗಿದೆ. ಭಾಸ್ಕರರಾವ್ ಅವರ ಫೋನ್ ಕದ್ದಾಲಿಕೆ ಏಕೆ ಆಗಿದೆ? ಪೊಲೀಸರ ಫೋನ್ ಕದ್ದಾಲಿಕೆ ಆಗಿದೆ ಎಂದರೆ ಏನರ್ಥ? ಅವರು ಫೋನ್ ಕದ್ದಾಲಿಕೆ ಆಗಿಲ್ಲ ಎಂದು ಹೇಳಲಿ. ಹಾಗೆ ಹೇಳಿದರೆ ಅದರ ತನಿಖೆ ಆಗುವುದು ಬೇಡ. ಕದ್ದಾಲಿಕೆ ಆಗಿದೆ ಎಂದರೆ ತನಿಖೆ ಆಗಲಿ'' ಎಂದು ಬಿಜೆಪಿ ನಾಯಕ ಆರ್. ಅಶೋಕ್ ತಿಳಿಸಿದರು.

ನನಗೆ ಮಾಹಿತಿ ಇಲ್ಲ
''ಫೋನ್ ಕದ್ದಾಲಿಕೆ ನನಗೆ ಗೊತ್ತಿಲ್ಲ. ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ಕದ್ದಾಲಿಕೆ ಆರೋಪದ ಬಗ್ಗೆ ರಾಜ್ಯ ಸರ್ಕಾರ ತನಿಖೆ ಮಾಡಿಸಲಿ. ಯಾರೇ ಭಾಗಿಯಾಗಿದ್ದರೂ ಶಿಕ್ಷೆ ಆಗಲಿ'' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದರು.

ನನ್ನ ಫೋನ್ ಕೂಡ ಕದ್ದಾಲಿಸಲಾಗಿತ್ತು
''ಫೋನ್ ಕದ್ದಾಲಿಕೆ ಕಾನೂನು ಬಾಹಿರ ಕೃತ್ಯ. ಸಮಾಜಘಾತುಕ ಶಕ್ತಿಗಳ ಫೋನ್ ಕದ್ದಾಲಿಕೆ ಸಹಜ. ಆದರೆ ರಾಜಕೀಯ ವಿರೋಧಿಗಳ ಫೋನ್ ಕದ್ದಾಲಿಕೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಫೋನ್ ಕದ್ದಾಲಿಕೆ ಮಾಡಲಾಗಿದೆ. ನನ್ನ ಫೋನ್ ಸಹ ಕದ್ದಾಲಿಕೆ ಮಾಡಲಾಗಿತ್ತು. ಕದ್ದಾಲಿಕೆಯಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಬಿಜೆಪಿ ಶಾಸಕ ಜಗದೀಶ್ ಶೆಟ್ಟರ್ ಆಗ್ರಹಿಸಿದರು.

ಕದ್ದಾಲಿಕೆಯನ್ನು ಪಕ್ಷ ಒಪ್ಪುವುದಿಲ್ಲ
''ಕದ್ದಾಲಿಕೆ ಯಾರೇ ಮಾಡಿದ್ದರೂ ತಪ್ಪು. ಯಾರೇ ಈ ರೀತಿ ಮಾಡಿದ್ದರೂ ಶಿಕ್ಷೆ ಆಗಬೇಕು. ಸರ್ಕಾರ ಉಳಿಸಿಕೊಳ್ಳುವ ಸಲುವಾಗಿ ಶಾಸಕರನ್ನು ಹೆದರಿಸಲು ಫೋನ್ ಕದ್ದಾಲಿಕೆ ಮಾಡಿರಬಹುದು. ಫೋನ್ ಕದ್ದಾಲಿಕೆಯ ಕೃತ್ಯವನ್ನು ನಮ್ಮ ಪಕ್ಷ ಒಪ್ಪುವುದಿಲ್ಲ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇನೆ'' ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.












Click it and Unblock the Notifications