PG Medical: ಸೀಟು ಪಡೆದ ಅಭ್ಯರ್ಥಿಗಳ ಶುಲ್ಕ ಪಾವತಿ ದಿನಾಂಕ ವಿಸ್ತರಣೆ: KEA
ಬೆಂಗಳೂರು, ಫೆಬ್ರವರಿ 05: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ಗಳಿಗೆ ಪ್ರವೇಶ ಪರೀಕ್ಷೆ 2024 ನಡೆಸಿದ ನಂತರ ಸೀಟು ಹಂಚಿಕೆ ಪ್ರಕ್ರಿಯೆಗಳು ಪೂರ್ಣಗೊಂಡಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ತನ್ನ ವೆಬ್ಸೈಟನ್ನಲ್ಲಿ ಫಲಿತಾಂಶ ಪ್ರಕಟಿಸಿದ ನಂತರದ ಇದೀಗ ಪಿಜಿ ಮೆಡಿಕಲ್ ಮಾಪ್ ಆಪ್ ಸುತ್ತಿನಲ್ಲಿ ಸೀಟು ಹಂಚಿಕೆಯಾದವರಿಗೆ ಶುಲ್ಕ ಪಾವತಿಸಲು ಇದ್ದ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ.
ವೈದ್ಯಕೀಯ ಕೋರ್ಸ್ನ ಮಾಪ್ ಆಪ್ ಅಭ್ಯರ್ಥಿಗಳಿಗೆ ಫೆಬ್ರವರಿ 7ರವರೆಗೆ ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಿ ದಿನಾಂಕ ವಿಸ್ತರಣೆ ಮಾಡಲಾಗಿದೆ. ಶುಲ್ಕ ಪಾವತಿಸಿದ ಮರುದಿನ ಫೆಬ್ರವರಿ 8ರೊಳಗೆ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಂಡು, ಹಂಚಿಕೆಯಾದ ಕಾಲೇಜುಗಳಿಗೆ ವರದಿ ಮಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸೂಚನೆ ನೀಡಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಣೆ ಹೊರಡಿಸಿದೆ.

ಸ್ನಾತಕೋತ್ತರ ವೈದ್ಯಕೀಯ ಕೋರ್ಸುಗಳಿಗೆ ಆನ್ ಲೈನ್ ಮಾಪ್-ಅಪ್ ಸೀಟು ಹಂಚಿಕೆ-2024 ಪ್ರಕ್ರಿಯೆ ಮುಗಿದಿದೆ. ಹಂಚಿಕೆಯಾಗಿರುವ ಅಭ್ಯರ್ಥಿಗಳಿಗೆ ಕಾಲೇಜಿನಲ್ಲಿ ವರದಿ ಮಾಡಿಕೊಳ್ಳಲು ತಿಳಿಸಲಾಗಿದೆ. ಈ ಬಗ್ಗೆ ಕರ್ನಾಟಕ ಹೈಕೋರ್ಟ್ ರಿಟ್ ಅರ್ಜಿ 2848/2025 ರಲ್ಲಿ ದಿನಾಂಕ 04-02-2025 ರಂದು ನೀಡಿದ ಆದೇಶ ಸಹ ಅನ್ವಯಿಸುತ್ತದೆ ಎಂದು ತಿಳಿಸಿದೆ.
ಪಿಜಿ ಮೆಡಿಕಲ್ ಸೀಟು ಹಂಚಿಕೆ: ಹೈಕೋರ್ಟ್ ಹೇಳಿದ್ದೇನು?
ಮಾಪ್-ಅಪ್ ಸೀಟು ಹಂಚಿಕೆ ಸಂಬಂಧ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಕೆ ಆಗಿತ್ತು. ಮಾಪ್-ಅಪ್ ಕೌನ್ಸೆಲಿಂಗ್ ಸುತ್ತಿನಲ್ಲಿ ಹಲವಾರು ಸ್ನಾತಕೋತ್ತರ ವೈದ್ಯಕೀಯ ಸೀಟುಗಳ ಹಂಚಿಕೆ ರದ್ದುಗೊಳಿಸಿತು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ತನ್ನದೇ ಆದ ಅರ್ಹತಾ ಮಾನದಂಡಗಳನ್ನು ಉಲ್ಲಂಘಿಸಿದೆ ಎಂದು ಹೈಕೋರ್ಟ್ ಮಂಗಳವಾರ (ಫೆ.4) ನೀಡಿದ ತೀರ್ಪಿನಲ್ಲಿ ತಿಳಿಸಿದೆ.
ಸೀಟು ಹಂಚಿಕೆಯ ಮೂರನೇ ಸುತ್ತಿನಲ್ಲಿ ಈಗಾಗಲೇ ಸೀಟುಗಳನ್ನು ಪಡೆದಿದ್ದ ಅಭ್ಯರ್ಥಿಗಳಿಗೆ ರಾಜ್ಯ ಮಾಪ್-ಅಪ್ ಸುತ್ತಿನಲ್ಲಿ ಭಾಗವಹಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಪ್ಪು ಅವಕಾಶ ಕಲ್ಪಿಸಿದೆ. ಇದು ಪ್ರವೇಶ ಪ್ರಕ್ರಿಯೆಯಲ್ಲಿ ಅಕ್ರಮಕ್ಕೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಹೀಗಾಗಿ ಅಂತಿಮ ಸೀಟ್ ಮ್ಯಾಟ್ರಿಕ್ಸ್ನಲ್ಲಿ ಅಸ್ಪಷ್ಟತೆ ಉಂಟಾಗಿ ಅನರ್ಹ ಅಭ್ಯರ್ಥಿಗಳು ಪ್ರವೇಶ ಪಡೆಯುವಂತಾಯಿತು ಎಂದಿರುವ ನ್ಯಾಯಪೀಠ ಹಲವು ಸ್ನಾತಕೋತ್ತರ ವೈದ್ಯಕೀಯ ಸೀಟುಗಳ ಹಂಚಿಕೆ ರದ್ದು ಮಾಡಿ ಆದೇಶಿಸಿದೆ.
ಕೆಪಿಎಸ್ಸಿ ಪರೀಕ್ಷೆ ಪ್ರಕ್ರಿಯೆ ಮುಂದುವರೆಸಿ: ಕೆಎಟಿ
ಕರ್ನಾಟಕ ಲೋಕಸೇವಾ ಆಯೋಗವು (KPSC) ವಿವಿಧ ಗೆಜೆಟೆಡ್ ಪ್ರೊಬೇಷನರಿ 384 ಕೆಎಎಸ್ ಹುದ್ದೆಗಳಿಗೆ ನೇಮಕಾತಿಗಾಗಿ ಪರೀಕ್ಷೆ ನಡೆಸಿತ್ತು. ಕಳೆದ ಡಿಸೆಂಬರ್ನಲ್ಲಿ ನಡೆಸಿದ ಪರೀಕ್ಷೆಯಲ್ಲೂ ಕನ್ನಡ ಪತ್ರಿಕೆಗಳಲ್ಲಿ ಲೋಪದೋಷಗಳು ಕಂಡು ಬಂದ ಹಿನ್ನೆಲೆಯಲ್ಲಿ ಪ್ರತಿಭಟನೆ, ಪುನಃ ಪರೀಕ್ಷೆ ನಡೆಸಲು ಆಗ್ರಹ ಕೇಳಿ ಬಂದಿದ್ದವು. ಕೊನೆಗೆ ಐದು ಕೃಪಾಂಕ ನೀಡಿ ಕೀ ಉತ್ತರಗಳನ್ನು ಬಿಡುಗಡೆ ಮಾಡಿತ್ತು.
ಈ ವಿಚಾರ ಕರ್ನಾಟಕ ಆಡಳಿತ ನ್ಯಾಯಾಧೀಕರಣ (ಕೆಎಟಿ) ಮುಂದೆ ಬಂದಿತ್ತು. ಕೊನೆಗೆ ಕೆಎಟಿ ಕೆಎಎಸ್ ಹುದ್ದೆಗಳಿಗೆ ನಡೆದ ಪರೀಕ್ಷೆ ಬಳಿಕ ನಂತರದ ನೇಮಕಾತಿ ಪ್ರಕ್ರಿಯೆ ಮುಂದುವರೆಸುವಂತೆ ಕೆಪಿಎಸ್ಸಿಗೆ ಸೂಚನೆ ನೀಡಿದೆ. ಈ ಮೂಲಕ ಗೊಂದಲಗಳಿಗೆ ತೆರೆ ಎಳೆಯಲಾಗಿದೆ.












Click it and Unblock the Notifications