ಕರ್ನಾಟಕ ಬಿಜೆಪಿಗೆ ಹೊಸ ತಲೆನೋವು ತಂದ ಬಣ ರಾಜಕೀಯ!
ಬೆಂಗಳೂರು, ಸೆಪ್ಟೆಂಬರ್ 22: ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನು ಎದುರಿಸಲು ಪ್ರತಿಪಕ್ಷ ಬಿಜೆಪಿ ಸಮರ್ಥವಾಗಿದೆಯೇ?. ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದಾರೆಯೇ?, ಯಾವುದೇ ಬಣ ರಾಜಕೀಯ ಇಲ್ಲವೇ? ಎಂಬ ಪ್ರಶ್ನೆ ಬಂದರೆ ಇಲ್ಲ ಎಂದು ಹೇಳುವ ಪರಿಸ್ಥಿತಿಯಲ್ಲಿ ಪಕ್ಷದ ಯಾವುದೇ ನಾಯಕರು ಇಲ್ಲ. ಇದಕ್ಕೆ ಪೂರಕ ಎಂಬಂತೆ ಪಕ್ಷದ ನಾಯಕರು ಮಾಧ್ಯಮಗಳ ಮೂಲಕ ದಿನಕ್ಕೊಂದು ಹೇಳಿಕೆ ನೀಡುತ್ತಾರೆ. ಈ ಬಣ ರಾಜಕೀಯ ಬಿಜೆಪಿಯ ಸಂಘಟನೆಗೆ ಹಿನ್ನಡೆ ಉಂಟು ಮಾಡಿದೆ.
ಕರ್ನಾಟಕ ಬಿಜೆಪಿ 'ಭವ್ಯ ಭಾರತದ ಭವಿಷ್ಯಕ್ಕಾಗಿ ಬಿಜೆಪಿ ಸದಸ್ಯತಾ ಅಭಿಯಾನ' ಎಂಬ ಬಹುದೊಡ್ಡ ಅಭಿಯಾನವನ್ನು ದೇಶಾದ್ಯಂತ ನಡೆಸುತ್ತಿದೆ. ಲೋಕಸಭೆ ಚುನಾವಣೆ 2024 ಮುಗಿದ ಬಳಿಕ ಪಕ್ಷ ನಡೆಸುತ್ತಿರುವ ರಾಷ್ಟ್ರ ಮಟ್ಟದ ಅಭಿಯಾನ ಇದು. ಕರ್ನಾಟಕದಲ್ಲಿ 1.5 ಕೋಟಿ ಹೊಸ ಸದಸ್ಯರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಗುರಿಯನ್ನು ಹೊಂದಲಾಗಿದೆ.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್. ಅಶೋಕ ರಾಜ್ಯದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪಕ್ಷದ ಸದಸ್ಯತಾ ಅಭಿಯಾನ ಚುರುಕುಗೊಳಿಸಿದ್ದಾರೆ. ಆದರೆ ಪಕ್ಷದಲ್ಲಿರುವ ಆಂತರಿಕ ಭಿನ್ನಮತ, ಎರಡು ಬಣದ ಕಾರಣಕ್ಕೆ ಸದಸ್ಯತ್ವ ಅಭಿಯಾನಕ್ಕೆ ಹಿನ್ನಡೆ ಆಗಲಿದೆ ಎಂದು ಅಂದಾಜಿಸಲಾಗಿದೆ. ಇದನ್ನು ಪಕ್ಷದ ನಾಯಕರು ಸಹ ಒಪ್ಪಿಕೊಂಡಿದ್ದಾರೆ.
ಕಾರ್ಯಕರ್ತರ ಅಸಮಾಧಾನ: ಕರ್ನಾಟಕದ ಬಿಜೆಪಿ ಘಟಕಕ್ಕೆ ಬಿ. ವೈ. ವಿಜಯೇಂದ್ರರನ್ನು ಅಧ್ಯಕ್ಷರನ್ನಾಗಿ ಮಾಡಿದ ಬಳಿಕ ಪಕ್ಷದ ನಾಯಕರಲ್ಲಿ ಅಸಮಾಧಾನವಿದೆ. ಉತ್ತರ ಕರ್ನಾಟಕ, ಬೆಳಗಾವಿ ಭಾಗದ ನಾಯಕರು ಈಗಾಗಲೇ ಈ ಕುರಿತು ಬಹಿರಂಗವಾಗಿ ಅಸಮಾಧಾನವನ್ನು ಹೊರಹಾಕಿದ್ದಾರೆ. ಪಕ್ಷದಲ್ಲಿನ ಈ ಅಸಮಾಧಾನಗಳು ಪಕ್ಷದ ಕಾರ್ಯಕರ್ತರು, ಸ್ಥಳೀಯ ನಾಯಕರ ನಿರುತ್ಸಾಹಕ್ಕೂ ಕಾರಣವಾಗಿದೆ.
ಕೆಲವು ದಿನಗಳ ಹಿಂದೆ ಆರ್ಎಸ್ಎಸ್ ಕರ್ನಾಟಕ ಬಿಜೆಪಿಯೊಳಗಿನ ಅಸಮಾಧಾನ ಬಗೆಹರಿಸಲು ಸಭೆಯನ್ನು ನಡೆಸಿತ್ತು. ಆದರೆ ಈ ಸಭೆಯ ಬಳಿಕವೂ ಬಿಜೆಪಿ ಘಟಕದಲ್ಲಿ ಎಲ್ಲರೂ ಸರಿಯಾಗಿಲ್ಲ ಎಂಬುದುನ್ನು ಯಾರೂ ಹೇಳಬೇಕಿಲ್ಲ. ಮುಂದೇನು? ಎಂಬ ಪ್ರಶ್ನೆಗೆ ಯಾವ ನಾಯಕರ ಬಳಿಯೂ ಉತ್ತರವಿಲ್ಲ. ಬಿ. ವೈ. ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಬದಲಾವಣೆ ಮಾಡಬೇಕು ಎಂಬ ಪಕ್ಷದೊಳಗಿನ ಕೂಗು ಇನ್ನೂ ಹಾಗೆಯೇ ಇದೆ.
2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದ ಶಾಸಕರಲ್ಲಿ ಅನೇಕರು ಬಿ. ವೈ. ವಿಜಯೇಂದ್ರ ನಾಯಕತ್ವ ಒಪ್ಪುತ್ತಿಲ್ಲ. ಈಗಾಗಲೇ ವಿಧಾನಸಭೆ ಚುನಾವಣೆಯಲ್ಲಿ ಸೋತು ಅಧಿಕಾರ ಕಳೆದುಕೊಂಡಿರುವ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವುದು ಸ್ಥಳೀಯ ಮಟ್ಟದಲ್ಲಿ ಸಣ್ಣಪುಟ್ಟ ಅಸಮಾಧಾನಕ್ಕೆ ಕಾರಣವಾಗಿದೆ.
ಬಿ. ಎಸ್. ಯಡಿಯೂರಪ್ಪ ಮತ್ತು ಅವರ ಮಕ್ಕಳು, ಇವರನ್ನು ವಿರೋಧಿಸುವ ಮತ್ತೊಂದು ಬಣ ಹೀಗೆ ಪಕ್ಷದೊಳಗಿನ ಅಸಮಾಧಾನ ಮುಂಬರುವ ಚುನಾವಣೆಯಲ್ಲಿ ಪಕ್ಷದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ? ಎಂಬುದು ಸದ್ಯದ ಲೆಕ್ಕಾಚಾರವಾಗಿದೆ. ಚನ್ನಪಟ್ಟಣ, ಶಿಗ್ಗಾವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯನ್ನು ಪಕ್ಷ ಎದುರಿಸಬೇಕಿದೆ. ಅಧಿಕಾರದಲ್ಲಿದ್ದು ಪ್ರಬಲವಾಗಿರುವ ಕಾಂಗ್ರೆಸ್ ಎದುರಿಸಲು ಬಿಜೆಪಿಗೆ ಬಣ ರಾಜಕೀಯವೇ ಹಿನ್ನಡೆ ಉಂಟು ಮಾಡುತ್ತಿದೆ.
"ರಾಜ್ಯ ಪ್ರವಾಸದ ಸಂದರ್ಭದಲ್ಲಿ ಆಯಾ ಜಿಲ್ಲೆಗಳಿಗೆ ಹೋದಾಗ ನಾನು ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡುತ್ತಿದ್ದೇನೆ. ಇದು ಕೇವಲ ಒಂದು ದಿನದ ಪ್ರಕ್ರಿಯೆಯಲ್ಲ ಅವರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ" ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಹೇಳಿದ್ದಾರೆ.
ಆದರೆ ಎದುರಾಳಿ ಬಣದ ಹಕ್ಕೋತ್ತಾಯ ಒಂದೇ ಆಗಿದೆ. ಪಕ್ಷದೊಳಗೆ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತು ಅವರ ಕುಟುಂಬದ ಪ್ರಭಾವವನ್ನು ಕಡಿಮೆ ಮಾಡಬೇಕು, ಎಲ್ಲರಿಗೂ ಆದ್ಯತೆ ಸಿಗುವಂತೆ ಆಗಬೇಕು ಎಂಬುದು. ಯಡಿಯೂರಪ್ಪ ಕೇಂದ್ರ ಚುನಾವಣಾ ಸಮಿತಿ ಸದಸ್ಯರು. ಬಿ. ವೈ. ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಾರೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಾತಿಗೆ ಪ್ರತಿಕ್ರಿಯೆ ನೀಡಿರುವ ಬಿ. ವೈ. ವಿಜಯೇಂದ್ರ, "ನಾನು ನನ್ನನ್ನು ದೊಡ್ಡ ನಾಯಕ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ. ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತ. ಬಿಜೆಪಿಯ ಕೇಂದ್ರ ನಾಯಕರು ನನ್ನ ಮೇಲೆ ಭರವಸೆ ಇಟ್ಟು ಜವಾಬ್ದಾರಿಯನ್ನು ನೀಡಿದ್ದಾರೆ. ಅದನ್ನು ನಾನು ನಿರ್ವಹಣೆ ಮಾಡಿಕೊಂಡು ಹೋಗುತ್ತಿದ್ದೇನೆ" ಎಂದು ಹೇಳಿದ್ದಾರೆ.
"ಇದು ಪಕ್ಷದೊಳಗೆ ಇಂತಹ ಸಂಘರ್ಷ ನಡೆಸುವ ಸಂದರ್ಭವಲ್ಲ. ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ದುರಾಡಳಿತ ಮತ್ತು ಹಗರಣದಲ್ಲಿ ತೊಡಗಿದೆ. ಇದರ ವಿರುದ್ಧ ನಾವು ಹೋರಾಟ ಮಾಡಬೇಕು. ಜನರಿಗೆ ಸರ್ಕಾರವ ಆಡಳಿತ ವೈಫಲ್ಯವನ್ನು ನಾವು ತೋರಿಸಬೇಕಿದೆ" ಎಂದು ತಿಳಿಸಿದ್ದಾರೆ.












Click it and Unblock the Notifications