ಪಾರ್ಲಿಮೆಂಟ್ಗೆ ನುಗಿದ್ದ ಮೈಸೂರಿನ ಮನೋರಂಜನ್, ಸಂಸದ ಪ್ರತಾಪ್ ಸಿಂಹ ಕಚೇರಿ ಮುಂದೆ ಪ್ರತಿಭಟನೆ
ಮೈಸೂರು, ಡಿಸೆಂಬರ್ 13: ಕಲಾಪ ನಡೆಯುವ ವೇಳೆ ಸಂಸತ್ ಭವನದೊಳಗೆ ನುಗ್ಗಿದ್ದವರ ಪೈಕಿ ಓರ್ವ ಮೈಸೂರಿನ ಮನೋರಂಜನ್ಗೆ ಸಂಸದ ಪ್ರತಾಪ್ ಸಿಂಹ ಅವರಿಂದ ಪಾಸ್ ನೀಡಲಾಗಿತ್ತು ಎಂಬ ಮಾಹಿತಿ ಹೊರ ಬಿದ್ದ ಬೆನ್ನಲ್ಲೇ ಸಂಸದರ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.
ಮನೋರಂಜನ್ ಮೈಸೂರಿನ ಸಂಸದ ಪ್ರತಾಪಸಿಂಹ ಅವರ ಕಚೇರಿಯಿಂದ ಮೂರು ಪಾಸ್ ಪಡೆದುಕೊಂಡಿದ್ದ ಎನ್ನಲಾಗಿದೆ. ಆ ಮೂಲಕ ಸದನ ಪ್ರೇಕ್ಷಕರ ಗ್ಯಾಲರಿಯಲ್ಲಿ ಕೂತುಕೊಳ್ಳುವ ಅವಕಾಶ ಪಡೆದುಕೊಂಡಿದ್ದನು ಎಂದು ವರದಿಗಳು ತಿಳಿಸಿವೆ.

ಇದರಿಂದ ಮೈಸೂರಿನ ಜಲದರ್ಶಿನಿ ಅತಿಥಿಗೃಹದ ಕಚೇರಿ ಎದುರು ಮೈಸೂರು ನಗರ ಹಾಗೂ ಗ್ರಾಮಾಂತರ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ನಡೆದಿದೆ. ಸಂಸದರ ಪ್ರತಾಪ್ ಸಿಂಹ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು ಧಿಕ್ಕಾರದ ಘೋಷಣೆ ಕೂಗಿ ಕಿಡಿಕಾರಿದರು.
ಪಾರ್ಲಿಮೆಂಟಿಗೆ ನುಗ್ಗಿ ಭಯೋತ್ಪಾದನಾ ಕೃತ್ಯ ನಡೆಸುವ ಸಂಚಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ಪ್ರತಾಪ್ ಸಿಂಹರವರೇ ನೇರ ಹೊಣೆ ಎಂದು ಘೋಷಣೆ ಕೂಗಿದರು. ಪ್ರತಾಪ್ ಸಿಂಹ ಪಾಸ್ ಕೊಟ್ಟಿರುದನ್ನು ಖಂಡಿಸಿ ಪ್ರತಿಭಟಿಸಿದ ಕಾಂಗ್ರೆಸ್ ಕಾರ್ಯಕರ್ತರು ಸಂಸದರ ಕಚೇರಿಯ ಕಾಂಪೌಡ್ ಗೋಡೆ ಏರಿ ಒಳಗೆ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದೆ.
ಡಿಕೆಶಿ ಆರೋಪ:
ಪ್ರತಾಪ್ ಸಿಂಹ ಬಹಳ ಬುದ್ಧಿವಂತ. ಅರ್ಯಾಕೆ ಇಂಥವರಿಗೆ ಪಾಸ್ ಕೊಟ್ಟರೋ? ಅವರ ಹೆಸರು ಹೇಳಲು ಇಲ್ಲಿ ನನಗೆ ಇಷ್ಟವಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಾಪ್ ಸಿಂಹ ವಿರುದ್ಧ ಕಿಡಿಕಾರಿದ್ದಾರೆ.
ಎಲ್ಲರೂ ಫೋನ್ ಮಾಡುತ್ತಿದ್ದಾರೆ. ಏನು? ಯಾಕೆ? ಅಂತ ಕೇಳುತ್ತಿದ್ದಾರೆ. ನಾನು ಟಿವಿಯಲ್ಲಿ ನೋಡಿದೆ. ಮೇಲಿಂದಲೇ ಅವರು ಹಾರಿದ್ದಾರೆ. ಸಂಸದರೆಲ್ಲ ಇಲಿಗಳಂತೆ ಬಚ್ಚಿಕೊಳ್ಳುತ್ತಿದ್ದಾರೆ. ನಮ್ಮ ಪ್ರತಿಪಕ್ಷದವರೇ ಇದರ ಹೊಣೆ ತೆಗೆದುಕೊಳ್ಳಬೇಕು. ಅವರು ಏನು ಬುದ್ಧಿವಾದ ಹೇಳುತ್ತಾರೋ ಹೇಳಲಿ ಎಂದು ಹೇಳಿದರು.












Click it and Unblock the Notifications