ಭುಗಿಲೇಳಲಿದೆ ಪಂಚಮಸಾಲಿ '2ಎ' ಮೀಸಲಾತಿ ಹೋರಾಟ, ಸರಣಿ ಸಭೆ: ಜಯಮೃತ್ಯುಂಜಯ ಸ್ವಾಮೀಜಿ
ಹುಬ್ಬಳ್ಳಿ, ಆಗಸ್ಟ್ 29: ಲಿಂಗಾಯತ ಸಮುದಾಯಕ್ಕೆ '2ಎ' ಮೀಸಲಾತಿಗಾಗಿ ಈಗಾಗಲೇ ವಿವಿಧ ಹಂತಗಳಲ್ಲಿ ಪಾದಯಾತ್ರೆ, ಹೋರಾಟಗಳು ನಡೆಸಿವೆ. ಇದಕ್ಕೆ ರಾಜಕೀಯ ಬದಿಗಿಟ್ಟು ಒಂದಷ್ಟು ರಾಜಕಾರಣಗಳು ಸಹ ಸಮಾಜದ ಮುಖಂಡರಾಗಿ ಪಾಲ್ಗೊಂಡು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ. ಇದೀಗ ಅದಕ್ಕಿಂತ ಉಗ್ರ ಹೋರಾಟ ಮಾಡುವುದಾಗಿ ಪಂಚಮಸಾಲಿ ಸಮುದಾಯ ಮುಖಂಡರು, ಸ್ವಾಮೀಜಿಗಳು ನಿರ್ಧರಿಸಿದ್ದಾರೆ. ಇದು ರಾಜ್ಯ ಸರ್ಕಾರಕ್ಕೆ ಮತ್ತಷ್ಟು ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ.
ಈ ಕುರಿತು ನಗರದಲ್ಲಿ ಸುದ್ದಿಗಾರರಿಗೆ ಮುಂದಿನ ಹೋರಾಟ ಕುರಿತು ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಸಮಾಜ ಮಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಮಾಹಿತಿ ನೀಡಿದರು. ಪಂಚಮಸಾಲಿ ಸಮುದಾಯಕ್ಕೆ '2ಎ' ಮೀಸಲಾತಿಗಾಗಿ ಒತ್ತಾಯಿಸಿ ಏಳನೇ ಹಂತದ ಹೋರಾಟ ಆರಂಭಿಸಿದ್ದೇವೆ. ಇದೊಂದು ಮಾಡು ಇಲ್ಲವೇ ಮಡಿ ಹೋರಾಟ ಆಗಿದ್ದು ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದರು.

ಬೆಳಗಾವಿಯಲ್ಲಿ ಮಹತ್ವದ ಸಭೆ
ಸಮುದಾಯದ ವಕೀಲರ ಮೂಲಕ ಹೋರಾಟ ನಡೆಸಲು ನಿರ್ಧರಿಸಿದ್ದಾರೆ. ಮುಂದಿನ ತಿಂಗಳು ಸೆಪ್ಟಂಬರ್ 22 ರಂದು ಬೆಳಗಾವಿಯ ಗಾಂಧಿ ಭವನದಲ್ಲಿ ನಡೆಯಲಿರುವ ಲಿಂಗಾಯತ ಪಂಚಮಸಾಲಿ ವಕೀಲರ ಮಹಾ ಪರಿಷತ್ನಲ್ಲಿ ಸಮಾಜವು ಮುಂದಿನ ನಿರ್ಣಯಗಳನ್ನು ಕೈಗೊಳ್ಳಲಿದೆ.
ನಮ್ಮ ಈ ಮನವಿ, ಒತ್ತಾಯಕ್ಕೆ ರಾಜ್ಯ ಸರ್ಕಾರ ಸ್ಪಂದಿಸದಿದ್ದರೆ ಮುಂಬರುವ ಅಧಿವೇಶನ ಸಂದರ್ಭದಲ್ಲಿ ವಕೀಲರು ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. ಈ ಕುರಿತು ಪರಿಷತ್ನಲ್ಲಿ ಚರ್ಚಿಸಿ ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದು ಸ್ವಾಮೀಜಿಗಳು ತಿಳಿಸಿದರು.
ಲಿಂಗಾಯತ ಪಂಚಮಸಾಲಿ ವಕೀಲರ ಒಕ್ಕೂಟ
ಧಾರವಾಡದಲ್ಲಿ ಜಿಲ್ಲೆಯ ಪಂಚಮಸಾಲಿ ವಕೀಲರ ಸಭೆ ನಡೆಸಿ ಧಾರವಾಡ ಜಿಲ್ಲಾ ಲಿಂಗಾಯತ ಪಂಚಮಸಾಲಿ ವಕೀಲರ ಒಕ್ಕೂಟ ರಚಿಸಲಾಗಿದೆ. 21 ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಜಿಲ್ಲಾ ಒಕ್ಕೂಟದ ಅಧ್ಯಕ್ಷರಾಗಿ ಸಿ.ಆರ್.ಮೆಣಸಿನಕಾಯಿ, ಉಪಾಧ್ಯಕ್ಷರಾಗಿ ಬಿ.ಪಿ.ಧನಶೆಟ್ಟಿ ಮತ್ತು ಮಹೇಶ್ವರಿ ಉಪ್ಪಿನ, ಕಾರ್ಯಾಧ್ಯಕ್ಷರಾಗಿ ಸಿ.ಎಸ್.ನೇಗಿನಾಳ, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೇಶ ಎಂ ಹೆಬ್ಬಳ್ಳಿ, ಸಹಕಾರ್ಯದರ್ಶಿಯಾಗಿ ಎಸ್.ಎಸ್.ಕಮತರ ಹಾಗೂ ಖಜಾಂಚಿಯಾಗಿ ಎನ್.ಆರ್.ಮಟ್ಟಿ ಅವರನ್ನು ನೇಮಕ ಮಾಡಲಾಗಿದೆ' ಎಂದು ಅವರು ತಿಳಿಸಿದರು.

ನಾಳೆ ಆಗಸ್ಟ್ 29 ರಂದು ವಿಜಯಪುರ ಜಿಲ್ಲಾ ವಕೀಲರ ಸಭೆ ಜರುಗಿದರೆ, ಇದೇ 30ರಂದು ಕೊಪ್ಪಳ, ಕಲನಬುರಗಿ ಜಿಲ್ಲೆಗಳ ವಕೀಲರ ಸಭೆ ನಡೆಯಲಿದೆ. ಸೆಪ್ಟಂಬರ್ 1ರಂದು ಕೂಡಲಸಂಗಮದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಪದಾಧಿಕಾರಿಗಳಿಗೆ ರುದ್ರಾಕ್ಷಿ ಕಂಕಣ ಕಟ್ಟುವ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಸಭೆ ಕರೆದಿಲ್ಲ: ಸ್ವಾಮೀಜಿ ಬೇಸರ
ಇನ್ನೂ 2ಎ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ಕರೆದಿಲ್ಲ. ಕಳೆದ ಬಾರಿಯ ವಿಧಾನಸಭೆ ಅಧಿವೇಶನದಲ್ಲಿ ಈ ವಿಷಯ ಚರ್ಚೆ ಅವಕಾಶ ನೀಡಿಲ್ಲ. ಚರ್ಚೆಗೆ ಅವಕಾಶ ನೀಡುವಂತೆ ವಿಷಯ ಸಮುದಾಯದ ಶಾಸಕರು ಸ್ಪೀಕರ್ ಅವರನ್ನು ಕೇಳಿದ್ದರೋ? ಇಲ್ಲವೋ ಎಂಬ ಅನುಮಾನ ಮೂಡಿದೆ. ಸಮುದಾಯದ ಶಾಸಕರು ಧ್ವನಿ ಎತ್ತದಿರುವುದು ಸಮುದಾಯದ ಜನರಿಗೆ ನೋವು ತಂದಿದೆ. ಅಲ್ಲದೇ ಸಮಾಜದ ಮೀಸಲಾತಿಗಾಗಿ ಯಾವೊಬ್ಬ ಶಾಸಕರು ಧ್ವನಿ ಎತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.












Click it and Unblock the Notifications