ಪ್ರಾಣ ಬಿಡುವುದಕ್ಕೆ ರೆಡಿಯಾಗಿದ್ದೇವೆ, ಮೀಸಲಾತಿ ಬಿಡಲ್ಲ: ವಚನಾನಂದ ಸ್ವಾಮೀಜಿ ಎಚ್ಚರಿಕೆ
ಬೆಂಗಳೂರು, ಡಿಸೆಂಬರ್ 6: ಪಂಚಮಸಾಲಿ ಸಮುದಾಯಕ್ಕೆ ರಾಜ್ಯ ಸರಕಾರ 2 ಎ ಮೀಸಲಾತಿ ಕೊಡದಿದ್ದರೆ ಪ್ರಾಣ ಬಿಡುವುದಕ್ಕೆ ರೆಡಿಯಾಗಿದ್ದೇವೆ, ಮೀಸಲಾತಿ ಬಿಡಲ್ಲ ಎಂದು ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಮಹಾಸ್ವಾಮಿಗಳು ಹೇಳಿದ್ದಾರೆ.
ಈ ಕುರಿತು ಮಂಗಳವಾರ ಮುಖ್ಯಮಂತ್ರಿಗಳ ಸರ್ಕಾರಿ ಗೃಹದಲ್ಲಿ ಲಿಂಗಾಯತ ಪಂಚಮ ಸಾಲಿಗೆ 2 ಎ ಮೀಸಲಾತಿ ಕೊಡಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಚರ್ಚೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿ, ನಾನು ಸಿಎಂಗೆ ಬಹಳ ಸ್ಪಷ್ಟವಾಗಿ ಹೇಳಿದ್ದೇನೆ. ನಾವು ಉಗ್ರ ಆಗಬಾರದಂದ್ರೆ ಶೀಘ್ರವೇ ಮೀಸಲಾತಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಾಣ ಬಿಡುವುದಕ್ಕೆ ರೆಡಿಯಾಗಿದ್ದೇವೆ, ಮೀಸಲಾತಿ ಬಿಡಲ್ಲ. ಮೀಸಲಾತಿ ವಿಚಾರಕ್ಕೆ ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದುವರೆಗೆ ಕೂಡ ಸಮೀಕ್ಷೆ ಆಗಿರಲಿಲ್ಲ, ಹೀಗಾಗಿ ನಾವು ಯಾವುದೇ ನಿರ್ಧಾರವನ್ನು ಕೈಗೊಂಡಿರಲಿಲ್ಲ ಈಗ ಎಲ್ಲಾ ಜಿಲ್ಲೆಯ ಸಮೀಕ್ಷೆ ಆಗಿದೆ. ವಿಧಾನಸಭೆ ಅಧಿವೇಶದ ಒಳಗಾಗಿ ವರದಿಯನ್ನು ತೆಗೆದುಕೊಂಡು ಮೀಸಲಾತಿ ನೀಡಬೇಕು. ಮುಖ್ಯಮಂತ್ರಿಗಳಿಗೆ ಬಹಳ ಸ್ಪಷ್ಟವಾಗಿ ತಿಳಿಸಿದ್ದೇವೆ. ಇಲ್ಲವೇ ಅಂದ್ರೆ ಪಡಿ ಇಲ್ಲವೇ ಮಡಿ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಮೀಸಲಾತಿ ವಿಚಾರದಲ್ಲಿ ನಾವೀಗ ಕೊನೆ ಹಂತದಲ್ಲಿ ಇದ್ದೇವೆ. ಇನ್ನು ಸ್ವಲ್ಪ ದಿನದಲ್ಲಿ ಎಲೆಕ್ಷನ್ ಬರುತ್ತೆ, ಚುನಾವಣೆ ನೀತಿ ಸಂಹಿತೆಯ ನೆಪ ಆಗ್ಬಾರ್ದು. 28 ವರ್ಷಗಳ ಹೋರಾಟ ಮಾಡಿ ಸಾಕಾಗಿದೆ. ಸಚಿವರು, ಶಾಸಕರು ಇಲ್ಲಿಯವರೆಗೆ ಹೋರಾಟ ಮಾಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಅವರು ಮೀಸಲಾತಿ ಕೊಡ್ತಾರಂತೆ ಸಂಪೂರ್ಣ ವಿಶ್ವಾಸ ನಮಗಿದೆ. ಶೀಘ್ರವೇ ವರದಿ ತರಿಸಿಕೊಳ್ಳುತ್ತೇನೆ ಅಂತ ಮುಖ್ಯಮಂತ್ರಿಗಳು ಹೇಳಿದ್ದಾರೆ.

ವರದಿ ನಮಗೂ ಆಧಾರ ಸರ್ಕಾರಕ್ಕೂ ಆಧಾರ. ವರದಿ ಇಲ್ಲಾಂದ್ರೆ ಅನೇಕ ತೊಂದರೆಗಳು ಆಗ್ತಾವೆ, ನಮ್ಮ ಸಮುದಾಯದ ನಾಯಕರು ಅವರ ಕ್ಷೇತ್ರದಲ್ಲಿ ಮೂರು ಬಾರಿ ಬಸವರಾಜ ಬೊಮ್ಮಾಯಿ ಅವರನ್ನು ಶಾಸಕರನ್ನಾಗಿ ಮಾಡಿದ್ದಾರೆ. ಅವರಿಗೆ ಕೂಡ ಸಮಾಜದ ಬಗ್ಗೆ ಅರಿವಿದೆ, ಹೀಗಾಗಿ ಆದಷ್ಟು ಬೇಗ ಪಂಚಮಸಾಲಿ ಮೀಸಲಾತಿ ನೀಡಲಿದ್ದಾರೆ. ಅಕಸ್ಮಾತು ಮೀಸಲಾತಿ ಕೊಡಲಿಲ್ಲ ಅಂದ್ರೆ ಮತ್ತೆ ಸುದ್ದಿ ಗೋಷ್ಠಿ ಮಾಡಿ ಮುಂದಿನ ನಿರ್ಧಾರ ತಿಳಿಸುತ್ತೇನೆ ಎಂದರು.












Click it and Unblock the Notifications