ಸಮ್ಮಿಶ್ರ ಸರ್ಕಾರದ ಡಜನ್ಗೂ ಹೆಚ್ಚು ಸಚಿವರು ಟ್ವಿಟ್ಟರ್ ಸ್ನೇಹಿಗಳಲ್ಲ
ಬೆಂಗಳೂರು, ಜೂನ್ 26: ಪ್ರತಿಭಟನೆ, ಹೋರಾಟದಿಂದಾಗದ ಕೆಲಸಗಳು ಫೇಸ್ಬುಕ್, ಟ್ವಿಟ್ಟರ್ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಆಗುತ್ತಿದೆ. ಹೀಗಿರುವಾಗ ಎಷ್ಟು ಮಂದಿ ಸಚಿವರು ಟ್ವಿಟ್ಟರ್ ಖಾತೆಯನ್ನು ಹೊಂದಿದ್ದಾರೆ ಎಂದು ನೋಡಬೇಕಾಗಿದೆ.
ಸಾಮಾಜಿಕ ಜಾಲತಾಣಗಳ ಮೂಲಕ ರಾಜ್ಯದಲ್ಲಿದ್ದ ಈ ಹಿಂದಿನ ಸರ್ಕಾರ ಹಾಗೂ ಈಗಿರುವ ಕೇಂದ್ರ ಸರ್ಕಾರ ಸಾರ್ವಜನಿಕರಿಗೆ ತಕ್ಷಣ ಸ್ಪಂದಿಸುವ ವ್ಯವಸ್ಥೆ ಕಲ್ಪಿಸಿಕೊಂಡಿದೆ. ಪ್ರಧಾನ ನರೇಂದ್ರ ಮೋದಿಯವರೂ ಕೂಡ ಟ್ವಿಟ್ಟರ್ ಮೂಲಕ ಬರುವ ಎಷ್ಟೋ ದೂರುಗಳು, ಎಷ್ಟೋ ಬೇಡಿಕೆಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಮ್ಮಿಶ್ರ ಸರ್ಕಾರದ ಕನಿಷ್ಠ ಕಾರ್ಯಕ್ರಮ ಜೂನ್ 29ರಂದು ಪ್ರಕಟ
ವಿಧಾನಸಭೆ ಚುನಾವಣೆ ವೇಳೆ ಚುನಾವಣಾ ಆಯೋಗವೂ ಕೂಡ ಜನರಿಂದ ದೂರುಗಳನ್ನು ಆಲಿಸಲು ಪ್ರತಿ ಜಿಲ್ಲೆಯಲ್ಲಿ ಪ್ರತ್ಯೇಕ ಟ್ವಿಟ್ಟರ್ ಖಾತೆಯನ್ನು ತೆರೆದಿತ್ತು. ಅಲ್ಲದೆ, ಡಿಜಿಟಲ್ ಆಡಳಿತ ವ್ಯವಸ್ಥೆಗೆ ಟ್ವಿಟ್ಟರ್ ಪ್ರಮುಖ ಮಾಧ್ಯಮವಾಗಿ ಬಳಸಿಕೊಳ್ಳಲಾಗುತ್ತಿದೆ. ಎಷ್ಟೋ ಟ್ವಿಟ್ಟರ್ ಅಭಿಯಾನಗಳು ನಡೆಯುತ್ತಿದೆ.
ನೂತನ ಸರ್ಕಾರದ ಸಚಿವ ಸಂಪುಟದ ಅರ್ಧದಷ್ಟು ಸಚಿವರು ಟ್ವಿಟ್ಟರ್ ಖಾತೆಗಳನ್ನೇ ನಿರ್ವಹಿಸುತ್ತಿಲ್ಲ, ಅವರೆಲ್ಲರೂ ಇನ್ನೂ ಸಾಂಪ್ರದಾಯಿಕ ಪದ್ಧತಿಯನ್ನೇ ಅಳವಡಿಸಿಕೊಂಡಿದ್ದಾರೆ, ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಸಚಿವರು, ಶಾಸಕರುಗಳನ್ನು ಪ್ರತಿಯೊಬ್ಬರೂ ನೇರವಾಗಿ ಭೇಟಿ ಮಾಡಲು ಸಾಧ್ಯವೇ ಇಲ್ಲ ಅಂತಹ ಸಂದರ್ಭದಲ್ಲಿ ತಮ್ಮ ಸಮಸ್ಯೆಯನ್ನು ಟ್ವಿಟ್ಟರ್ ಮೂಲಕ ಹೇಳಿಕೊಳ್ಳಬಹುದಾಗಿತ್ತು ಆದರೆ ಈಗಿರುವ ಬಹುತೇಕ ಸಚಿವರು ಟ್ವಿಟ್ಟರ್ ಖಾತೆಯನ್ನು ಹೊಂದಿಲ್ಲ ಎಂಬುದೇ ವಿಷಾಧನೀಯ ಸಂಗತಿಯಾಗಿದೆ.
ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್, ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಸೇರಿದಂತೆ ಅನೇಕ ಕೇಂದ್ರ ಸಚಿವರು ಅತಿಹೆಚ್ಚು ಟ್ವಿಟ್ಟರ್ ಬಳಕೆ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಸಂಪುಟದ 27 ಸಚಿವರ ಪೈಕಿ 13 ಸಚಿವರ ಬಳಿ ಟ್ವಿಟ್ಟರ್ ಖಾತೆಗಳಿಲ್ಲ, ಅದರಲ್ಲಿ ಜೆಡಿಎಸ್ನ ಸಚಿವರೇ ಹೆಚ್ಚಿದ್ದಾರೆ. 11 ಸಚಿವರ ಪೈಕಿ ಎಂಟು ಸಚಿವರು ಟ್ವಿಟ್ಟರ್ ಖಾತೆಯನ್ನು ಇನ್ನೂ ತೆರೆದಿಲ್ಲ.
ಕಾಂಗ್ರೆಸ್ನ ಮೂವರು ಹಿರಿಯ ಸಚಿವರೂ ಇದೇ ಸ್ಥಿತಿಯಲ್ಲಿದ್ದಾರೆ, ಆದರೆ 8ನೇ ತರಗತಿ ಎಂದು ಹಂಗಿಸಿದ್ದ ವಿರೋಧಿಗಳ ಮಧ್ಯೆ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಟ್ವಿಟ್ಟರ್ ಬಳಕೆಯಲ್ಲಿ ಎಲ್ಲರಿಗಿಂತ ಮುಂದಿದ್ದಾರೆ. ಅವರ ಪೋಸ್ಟ್ಗಳು ಈಗ ಇಂಗ್ಲಿಷ್ ಭಾಷೆಯಲ್ಲೂ ದಾಖಲಾಗುತ್ತಿದೆ.
ಇನ್ನೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್. ಮಹೇಶ್ ಕೂಡ ಸಾಮಾಜಿಕ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಹಿಂದೆ ಇದ್ದಾರೆ. ಅತಿ ಹೆಚ್ಚು ದೂರುಗಳು ಬರುವ ಶಿಕ್ಷಣ ಲಾಖೆಯ ಹಿಂದಿನ ಸಚಿವ ತನ್ವೀರ್ ಸೇಠ್ ಅವರು ಸರಳ ಆಡಳಿತಕ್ಕಾಗಿ ಟ್ವಿಟ್ಟರ್ ಖಾತೆ ಬಳಸಿಕೊಂಡಿದ್ದರು.
ಜೆಡಿಎಸ್ನ ಸಚಿವರಾದ ಎಚ್.ಡಿ. ರೇವಣ್ಣ, ಬಂಡೇಪ್ಪ ಕಾಶೆಂಪುರ್, ಸಿ.ಎಸ್. ಪುಟ್ಟರಾಜು, ಸಾ.ರಾ. ಮಹೇಶ್, ಡಿ.ಸಿ.ತಮ್ಮಣ್ಣ, ಎಂ.ಸಿ. ಮನಗೂಳಿ, ವೆಂಕಟರಾವ್ ನಾಡಗೌಡ, ಎಸ್ಆರ್. ಶ್ರೀನಿವಾಸ್, ಎನ್. ಮಹೇಶ್ ಅವರ ಬಳಿ ಟ್ವಿಟ್ಟರ್ ಖಾತೆಗಳಿಲ್ಲ. ಇನ್ನು ಕಾಂಗ್ರೆಸ್ನ ಶಿವಾನಂದ ಪಾಟೀಲ್, ವೆಂಕಟರಮಣಪ್ಪ, ರಮೇಶ್ ಜಾರಕಿಹೊಳಿ, ಆರ್ ಶಂಕರ್ ಅವರ ಬಳಿಯೂ ಕೂಡ ಟ್ವಿಟ್ಟರ್ ಖಾತೆಗಳಿಲ್ಲ.