ಕಾಂಗ್ರೆಸ್ ನಾಯಕರಿಂದ ಆಪರೇಷನ್ ಹಸ್ತ; ವಲಸೆ ಬಿಜೆಪಿಗರ ಕುರಿತು ಸಂಸದ ಸದಾನಂದಗೌಡ ಹೇಳಿದ್ದೇನು?
ಬೆಂಗಳೂರು,ಆಗಸ್ಟ್ 20: ಮೂರೇ ತಿಂಗಳಲ್ಲಿ ಕಾಂಗ್ರೆಸ್ನವ್ರ ಕಪಟ ನಾಟಕ ಜನರಿಗೆ ಗೊತ್ತಾಗಿದೆ. ತಮ್ಮಲ್ಲಿರುವ ಗೊಂದಲ ಮುಚ್ಚಿಕೊಳ್ಳಲು ಕೆಲ ಸುದ್ದಿ ಹರಿದಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರ ಆಪರೇಷನ್ ಹಸ್ತದ ಕುರಿತು ಸಂಸದ ಡಿ ವಿ ಸದಾನಂದಗೌಡ ತೀವ್ರ ವಾಗ್ದಾಳಿ ನಡೆಸಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಿದ್ದರಾಮಯ್ಯ, ಡಿಕೆಶಿ ಸಮುದ್ರದ ಮೇಲೆ ಕಲ್ಲೆಸೆಯುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಕೊಟ್ಟ ಭರವಸೆ ಈಡೇರಿಸಿಲ್ಲ, ಅವರ ಶಾಸಕರನ್ನು ಸಮಾಧಾನ ಮಾಡಲು ಆಗಿಲ್ಲ. ನಮ್ಮವರು ಯಾರೂ ಕಾಂಗ್ರೆಸ್ ಗೆ ಹೋಗಲ್ಲ. ನಮ್ಮವರೇನು ಇವರ ತಂಬೂರಿ ಹಿಂದೆ ಹೋಗಲು ಇಲಿಗಳಾ? ಎಂದು ಪ್ರಶ್ನಿಸಿದ್ದಾರೆ.

ನಮ್ಮ ಶಾಸಕರಾದ ಬೈರತಿ ಬಸವರಾಜ್ ಕಾಂಗ್ರೆಸ್ ಗೆ ಹೋಗಲ್ಲ ಅಂದಿದಾರೆ. ಗೋಪಾಲಯ್ಯನವರೂ ಕಾಂಗ್ರೆಸ್ ಗೆ ಹೋಗಲ್ಲ, ಬೇಕಾದರೆ ನೇಣು ಹಾಕ್ಕೋತೇನೆ ಅಂದಿದಾರೆ, ಎಸ್ ಟಿ ಸೋಮಶೇಖರ್ ಕೂಡಾ ನಾನು ಕಾಂಗ್ರೆಸ್ ಸೇರ್ತೀನಿ ಅಂತ ಹೇಳಿಲ್ಲ ಅಂದಿದಾರೆ. ಸೋಮಶೇಖರ್ ಜತೆ ಮೊನ್ನೆ ಕರೆಸಿ ಮಾತಾಡಿದ್ದೇನೆ. ಅವರ ಕ್ಷೇತ್ರದಲ್ಲಿ ಕೆಲ ಆಂತರಿಕ ಸಮಸ್ಯೆ ಇದೆ, ಅದನ್ನು ಬಗೆಹರಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದ ಅವರು, ಸೋಮಶೇಖರ್ ಕಾಂಗ್ರೆಸ್ ಗೆ ಹೋಗಲ್ಲ ಅನ್ನೋದು ನಮ್ಮ ನಂಬಿಕೆ ಎಂದು ಹೇಳಿದರು.
ಸೋಷಿಯಲ್ ಮೀಡಿಯಾದಲ್ಲಿ ಏನೋ ಬರೆದುಕೊಂಡಿದಾರೆ ಅಂತ ನಮ್ಮವರಿಗೆ ಬೆದರಿಕೆ ಹಾಕ್ತಿದಾರೆ, ಅರೆಸ್ಟ್ ಮಾಡಿಸ್ತಿದಾರೆ. ಮುಂದಿನ ಲೋಕಸಭೆ ಚುನಾವಣೆ ಬಗ್ಗೆ ಯಾರಿಗೆ ಟಿಕೆಟ್ ಅಂತ ಇನ್ನೂ ನಮ್ಮಲ್ಲಿ ಪ್ರಕ್ರಿಯೆ ಶುರುವಾಗಿಲ್ಲ. ಆದರೆ, ಇದರ ಬಗ್ಗೆ ಆಗಲೇ ಮಾಧ್ಯಮಗಳಲ್ಲಿ ಏನೇನೋ ಬರ್ತಿದೆ. ನಮ್ಮ ವರಿಷ್ಠರು ಐದು ರಾಜ್ಯಗಳ ಚುನಾವಣೆ ತಯಾರಿಯಲ್ಲಿ ಇದಾರೆಇದಾದ ನಂತರ ಲೋಕಸಭೆ ಚುನಾವಣೆ ಕಡೆ ಗಮನ ಕೊಡುತ್ತಾರೆ ಎಂದು ಹೇಳಿದರು.
ಇನ್ನೂ ಆಪರೇಷನ್ ಹಸ್ತದ ಕುರಿತು ಮಾಜಿ ಸಚಿವ ಡಾ.ಅಶ್ವಥ್ ನಾರಾಯಣ ಮಾತನಾಡಿ, ಕಾಂಗ್ರೆಸ್ ನವ್ರು ಅವರ ಪಕ್ಷದವರನ್ನೇ ಉಳಿಸಿಕೊಳ್ಳಕ್ಕಾಗ್ತಿಲ್ಲ. ಹಲವರು ಸಚಿವರು, ಶಾಸಕರು ಸರ್ಕಾರದ ವಿರುದ್ಧವೇ ಮಾತಾಡ್ತಿದಾರೆ. ಮೂರು ತಿಂಗಳಲ್ಲೇ ಅವರ ಸರ್ಕಾರದಲ್ಲೇ ಹಲವು ಸಮಸ್ಯೆಗಳಿವೆ, ಇಂಥವರು ಆಪರೇಷನ್ ಹಸ್ತ ಮಾಡ್ತಾರೆ ಅಂದ್ರೆ ಇವರ ಯಾವ ನಾಟಕ ವರ್ಕೌಟ್ ಆಗಲ್ಲ, ಇವರ ರಾಜಕೀಯ ತಂತ್ರಗಳು ವರ್ಕೌಟ್ ಆಗಲ್ಲ ಎಂದು ಕಿಡಿಕಾರಿದರು.
ನನಗೆ ಗೊತ್ತಿರುವ ಪ್ರಕಾರ ಬಿಜೆಪಿಯಿಂದ ಯಾರೂ ಬಿಟ್ಟು ಹೋಗಲ್ಲ. ಕಾಂಗ್ರೆಸ್ ಗೆ ಯಾರೂ ಹೋಗಲ್ಲ, ಈ ಸರ್ಕಾರ ಸಂಪೂರ್ಣ ನಿಷ್ಕ್ರಿಯ ಆಗಿದೆ. ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪ ಬಂದಿದೆ, ಕಾಂಗ್ರೆಸ್ ಮುಳುಗುತ್ತಿರುವ ಪಕ್ಷ ಮುಳುಗುತ್ತಿರುವ ಪಕ್ಷಕ್ಕೆ ಯಾರೂ ಹೋಗಲ್ಲ ಎಂದು ಡಾ.ಸಿ.ಎನ್.ಅಶ್ವಥ್ ನಾರಾಯಣ್ ವಾಗ್ದಾಳಿ ನಡೆಸಿದರು.












Click it and Unblock the Notifications