ಸಿಎಂ ಕುರ್ಚಿ ಬಳಿಕ ಡಿಕೆಶಿಯ ಕೆಪಿಸಿಸಿ ಪಟ್ಟಕ್ಕೂ ಕಂಟಕ?
ಮುಡಾ ಕೇಸ್ನಲ್ಲಿ ಒಂದೆಡೆ ಸಿಎಂ ಸಿದ್ದರಾಮಯ್ಯ ಅವರ ಕುರ್ಚಿ ಅಲುಗಾಡುತ್ತಿದೆ. ಸಿದ್ದರಾಮಯ್ಯ ಅವರ ರಾಜೀನಾಮೆಗೆ ಪ್ರತಿಪಕ್ಷಗಳು ಪಟ್ಟು ಹಿಡಿದಿವೆ. ಇದೀಗ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೂ ಕುತ್ತು ಬಂದಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ಶುರುವಾಗಿದೆ.
ಇದೇ ವಿಚಾರವನ್ನು ವಿಪಕ್ಷ ನಾಯಕ ಆರ್.ಅಶೋಕ್ ಕೂಡ ಈಗ ಪ್ರಸ್ತಾಪಿಸಿದ್ದಾರೆ. ಮುಡಾ ವಿಚಾರವಾಗಿಯೇ ಡಿ.ಕೆ.ಶಿವಕುಮಾರ್ ಅವರಿಗೆ ಪ್ರಶ್ನೆ ಮುಂದಿಟ್ಟಿರುವ ಆರ್.ಅಶೋಕ್, ನಾಮಕಾವಸ್ತೆ ಅಧ್ಯಕ್ಷಗಿರಿ ಇಟ್ಟುಕೊಂಡು ಏನು ಮಾಡುತ್ತೀರಿ? ಎಂದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅಶೋಕ್, ಡೋಂಗಿರಾಮಯ್ಯನ ಇಡೀ ಜೀವನವೇ ಒಂದು ದೊಡ್ಡ ಡೋಂಗಿ. ಬುರುಡೆ ರಾಮಯ್ಯನ ಬದುಕೆಲ್ಲ ಬರೀ ಬುರುಡೆಯೇ. ಕಾಲಕ್ಕೆ ತಕ್ಕಂತೆ ತಮ್ಮ ಮೂಗಿನ ನೇರಕ್ಕೆ ಬಣ್ಣ ಬದಲಾಯಿಸುವ ಊಸರವಳ್ಳಿ ರಾಮಯ್ಯನ ಬೂಟಾಟಿಕೆ ಬಗ್ಗೆ ದೊಡ್ಡ ಪುಸ್ತಕವೇ ಬರೆಯಬಹುದು ಎಂದು ಲೇವಡಿ ಮಾಡಿದ್ದಾರೆ.
ʼ2011ರಲ್ಲಿ ರಾಜ್ಯಪಾಲರ ಅಧಿಕಾರದ ಬಗ್ಗೆ ಸನ್ಮಾನ್ಯ ಸಿಎಂ ಸಿದ್ದರಾಮಯ್ಯ ಅವರು ನುಡಿದಿರುವ ನುಡಿಮುತ್ತುಗಳನ್ನು ಒಮ್ಮೆ ಕೇಳಿಸಿಕೊಳ್ಳಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ..ಎಂದು ಸಿದ್ದರಾಮಯ್ಯ ಅವರ ಹಳೆಯ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ.

ಮುಡಾ ವಿಚಾರವಾಗಿ ಎರಡೆರಡು ನ್ಯಾಯಾಲಯಗಳು ಛೀಮಾರಿ ಹಾಕಿ, ಲೋಕಾಯುಕ್ತ ಪೊಲೀಸರು ಎಫ್ಐಆರ್ ಹಾಕಿದ್ದರೂ ಮುಖ್ಯಮಂತ್ರಿಗಳ ರಾಜೀನಾಮೆ ಪಡೆಯಲಾಗದಂತಹ ನಿಮ್ಮಂತಹ ದುರ್ಬಲ ಕೆಪಿಸಿಸಿ ಅಧ್ಯಕ್ಷರು ಬಹುಶಃ ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲೇ ಇರಲಿಲ್ಲ. ಇಂತಹ ನಾಮಕಾವಸ್ತೆ ಅಧ್ಯಕ್ಷಗಿರಿ ಇಟ್ಟುಕೊಂಡು ಏನು ಮಾಡುತ್ತೀರಿ? ಎಂದು ವಾಗ್ದಾಳಿ ನಡೆಸಿದ್ದಾರೆ.
ʼಮನೇಲಿ ಇಲಿ ಬೀದೀಲಿ ಹುಲಿʼ ಎಂಬಂತೆ ನಿಮ್ಮ ಪೌರುಷ, ಅಬ್ಬರ ಮಾಧ್ಯಮಗಳ ಮುಂದೆ ಮಾತ್ರಾನಾ? ಅಥವಾ ಸಿದ್ದರಾಮಯ್ಯರನ್ನ ಇಳಿಸಿದರೆ ಅವರು ಕಾಂಗ್ರೆಸ್ ಪಕ್ಷವನ್ನೇ ಮುಳುಗಿಸಿ ಬಿಡುತ್ತಾರೆ ಎಂಬ ಭಯವೋ? ಎಂದು ಡಿ.ಕೆ.ಶಿವಕುಮಾರ್ ಕಾಲೆಳೆದಿದ್ದಾರೆ. ಮುಡಾ ಕೇಸ್ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿರುವ ಡಿ.ಕೆ.ಶಿವಕುಮಾರ್ ಇಬ್ಬರ ವಿರುದ್ಧವೂ ವಾಗ್ದಾಳಿ ನಡೆಸಲು ಬಿಜೆಪಿ ನಾಯಕರಿಗೆ ಅಸ್ತ್ರವಾಗಿದೆ.
ಸಿಎಂ ವಿರುದ್ಧ ಎಫ್ಐಆರ್: ಮುಡಾ ಹಗರಣ ಸಿಎಂ ಸಿದ್ದರಾಮಯ್ಯ ಅವರ ಖುರ್ಚಿಗೆ ಕುತ್ತು ತಂದಿದೆ. ಮುಡಾ ಹಗರಣದ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹಲವು ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಎ1 ಆರೋಪಿಯಾಗಿ ಸಿಎಂ ಸಿದ್ದರಾಮಯ್ಯ, ಎ2 ಆರೋಪಿಯಾಗಿ ಸಿಎಂ ಪತ್ನಿ ಪಾರ್ವತಿ, ಎ3 ಆರೋಪಿಯಾಗಿ ಮಲ್ಲಿಕಾರ್ಜುನ ಸ್ವಾಮಿ, ದೇವರಾಜು ಅವರನ್ನು ಎ4 ಆರೋಪಿಯನ್ನಾಗಿ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಸಿದ್ದರಾಮಯ್ಯ ವಿರುದ್ಧ ಐಪಿಸಿ ಸೆಕ್ಷನ್ 120 ಬಿ, 166, 403, 420, 426, 465, 468, 340, 351 ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಲೋಕಾಯುಕ್ತ ಅಧಿಕಾರಿಗಳು ಎಫ್ಐಆರ್ ದಾಖಲಿಸಿದ್ದಾರೆ.
ಬೇನಾಮಿ ಆಸ್ತಿ ವಹಿವಾಟು ಕಾಯ್ದೆ 1988, ಕರ್ನಾಟಕ ಭೂಮಿ ಕಬಳಿಕೆ ನಿಷೇಧ ಕಾಯ್ದೆ 2011ರ ಅನ್ವಯ ಪ್ರಕರಣ, ಸೆಕ್ಷನ್ 120 ಬಿ ಕ್ರಿಮಿನಲ್ ಪಿತೂರಿ, ಸೆಕ್ಷನ್ 468 ವಂಚನೆ ಉದ್ದೇಶಕ್ಕಾಗಿ ದಾಖಲೆಗಳ ಪೋರ್ಜರಿ, ಸೆಕ್ಷನ್ 340 ಅಕ್ರಮ ಬಂಧನ, ಸೆಕ್ಷನ್ 351, ಸೆಕ್ಷನ್ 166 ಸಾರ್ವಜನಿಕ ಸೇವಕ ಕಾನೂನು ಉಲ್ಲಂಘನೆ ಮಾಡುವುದು, ಸೆಕ್ಷನ್ 403 ಆಸ್ತಿಯ ದುರ್ಬಳಕೆ, ಸೆಕ್ಷನ್ 420 ವಂಚನೆ, ಸೆಕ್ಷನ್ 465 ದುಷ್ಕೃತ್ಯವೆಸಗುವುದು ಸೇರಿದಂತೆ ಹಲವು ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.












Click it and Unblock the Notifications