ಮೋದಿ ಬಲೂನಿನಂತೆ ಉಬ್ಬುತ್ತಿದ್ದಾರೆ: ದೇವೇಗೌಡ
ಕೊಲ್ಲೂರು, ನ. 20: ಅಪ್ಪನಿಂದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನವಗ್ರಹ ಚಂಡಿಕಾಯಾಗ. ಈ ಮಧ್ಯೆ ಹಿರಿಯ ಪುತ್ರನಿಂದ 'ಕೈಯಲ್ಲಿ ನಿಂಬೆ ಹಣ್ಣು ಹಿಡಿದುಕೊಂಡೆ ಬೆಳಗಾವಿ ಅಧಿವೇಶನ ಪ್ರವೇಶಿಸುವೆ. ಸಿದ್ರಾಮಯ್ಯ ಸರಕಾರ ಮೂಢನಂಬಿಕೆ ಪ್ರತಿಬಂಧಕ ಕಾಯಿದೆಯಡಿ ಬೇಕಿದ್ದರೆ ನನ್ನನ್ನು ಬಂಧಿಸಬಹದು' ಎಂಬ ಸರಕಾರಿ ಸವಾಲ್!
ಇದಕ್ಕೆ ಸ್ವಲ್ಪ ವೈಜ್ಞಾನಿಕ ಟಚ್ ಸಹ ಇರಲಿ ಅಂತ ಮತ್ತೊಬ್ಬ ಪುತ್ರ ಎಚ್ ಡಿ ಕುಮಾರಸ್ವಾಮಿ ಅವರು ಭಾರತ ರತ ಗೌರವಕ್ಕೆ ಪಾತ್ರರಾಗಿರುವ ವಿಜ್ಞಾನಿ ಪ್ರೊ. ಸಿಎನ್ಆರ್ ರಾವ್ ಅವರನ್ನು ಭೇಟಿ ಮಾಡಿ ಅಭಿನಂದಿಸಿದ್ದಾರೆ. ಇವು ರಾಜ್ಯದ ಪ್ರಮುಖ ವಿರೋಧ ಪಕ್ಷವಾದ ಜೆಡಿಎಸ್ಸಿನಲ್ಲಿ ಪ್ರಮುಖ ಬೆಳವಣಿಗೆಗಳು.

ಮೂಢನಂಬಿಕೆ -ಮೂರ್ಖರ ಜತೆ ಚರ್ಚೆ ಮಾಡಬಾರದು
ಇಲ್ಲಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಸೋಮವಾರ ನವಗ್ರಹ ಚಂಡಿಕಾಯಾಗದ ಪೂರ್ಣಾಹುತಿಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕಳೆದ 40 ವರ್ಷದಿಂದ ಕೊಲ್ಲೂರು ಕ್ಷೇತ್ರಕ್ಕೆ ಬರುತ್ತಿದ್ದೇನೆ. ಸೃಷ್ಟಿ ಲಯವನ್ನು ನಾವು ಒಪ್ಪಿಕೊಂಡಿದ್ದೇವೆ. ಇದು ಎಷ್ಟು ನಿಜ ಎಂದು ಯಾರೂ ಸಂಶೋಧನೆ ಮಾಡಿಲ್ಲ.
ಈ ಬಗ್ಗೆ ಮೂರ್ಖರ ಜತೆ ಚರ್ಚೆ ಮಾಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರಿಗೆತರಲು ಯತ್ನಿಸುತ್ತಿರುವ ಮೂಢನಂಬಿಕೆ ಪ್ರತಿಬಂಧಕ ಕಾಯಿದೆ ಬಗ್ಗೆ ದೇವೇಗೌಡರ ಸ್ಪಷ್ಟ ಅನಿಸಿಕೆ.

ಜೆಡಿಎಸ್ ಮುಗಿಸುವ ಸಂಚು
ಜೆಡಿಎಸ್ ಮುಗಿಸುವ ಸಂಚು ಎಲ್ಲೆಡೆ ನಡೆಯುತ್ತಿದೆ. ರಾಜ್ಯದಲ್ಲಿ ಜೆಡಿಎಸ್ ಬಲಪಡಿಸುವ ಹೋರಾಟ ಮುಂದುವರಿದಿದ್ದು, ರಾಜ್ಯದಲ್ಲಿ ಬಲಿಷ್ಠ ಪಕ್ಷವಾಗಿ ಮತ್ತೆ ಜೆಡಿಎಸ್ ಗದ್ದುಗೆ ಏರಲಿದೆ ಎಂದು ಭವಿಷ್ಯ ನುಡಿದ ದೇವೇಗೌಡರು, ಶ್ರೀದೇವಿಯ ಪ್ರೇರಣೆಯಂತೆ ಪಕ್ಷ ಬಲಪಡಿಸುವ ಸಂಕಲ್ಪ ಕೈಗೊಂಡಿರುವುದಾಗಿ ಹೇಳಿದರು.

ಮೋದಿ ಬಲೂನಿನಂತೆ ಉಬ್ಬುತ್ತಿದ್ದಾರೆ:ದೇವೇಗೌಡ
ಈ ಮಧ್ಯೆ ಉಡುಪಿಯಲ್ಲಿ ಮಾತನಾಡಿರುವ ದೇವೇಗೌಡರು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ನಡೆಸುತ್ತಿರುವ ಸಮಾವೇಶಗಳಿಂದ ಉಪಯೋಗವೇನೂ ಆಗುವುದಿಲ್ಲ. ಅದು ಬಿಜೆಪಿಯ ದೊಂಬರಾಟವಷ್ಟೇ' ಎಂದು ಕಟಕಿಯಾಡಿದ್ದಾರೆ.
ವಸಂತ ಸಾಲಿಯಾನ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡರು, ಮೋದಿ ಬಲೂನಿನಂತೆ ಉಬ್ಬುತ್ತಿದ್ದಾರೆ. ಯಾವಾಗ ಠಪ್ ಅನ್ನುತ್ತಾರೋ ಗೊತ್ತಿಲ್ಲ ಎಂದಿದ್ದಾರೆ.

ಸಿದ್ರಾಮಯ್ಯ ಮಲತಾಯಿ ಧೋರಣೆ
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಜೆಡಿಎಸ್ ನಾಯಕ ಹಾಗೂ ಶಾಸಕ ಎಚ್.ಡಿ.ರೇವಣ್ಣ ಅವರು ಕೈಯಲ್ಲಿ ನಿಂಬೆ ಹಣ್ಣು ಹಣ್ಣು ಹಿಡಿದುಕೊಂಡೇ ಬೆಳಗಾವಿ ಅಧಿವೇಶನಕ್ಕೆ ಪ್ರವೇಶಿಸುವೆ. ಸಿದ್ರಾಮಯ್ಯ ಸರಕಾರ ಮೂಢನಂಬಿಕೆ ಪ್ರತಿಬಂಧಕ ಕಾಯಿದೆಯಡಿ ಬೇಕಿದ್ದರೆ ನನ್ನನ್ನು ಬಂಧಿಸಬಹದು' ಎಂಬ ಸರಕಾರಿ ಸವಾಲ್ ಎಸೆದಿದ್ದಾರೆ.
ಮೂಢನಂಬಿಕೆ/ಅಪವಾದ ದೂರಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮರಾಜನಗರಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಏಕಾಏಕಿ ಆ ಜಿಲ್ಲೆಗೆ 1,600 ಕೋಟಿ ರೂ. ನೆರವು ಘೋಷಣೆ ಮಾಡಿದರು. ಆದರೆ, ಹಾಸನಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ನಯಾಪೈಸೆ ನೆರವು ಘೋಷಣೆ ಮಾಡಲಿಲ್ಲ. ಈ ಮಲತಾಯಿ ಧೋರಣೆ ಏಕೆ ಎಂದು ರೇವಣ್ಣ ಟೀಕಿಸಿದರು.

ಸಿಎನ್ಆರ್ ರಾವ್ ಅಭಿನಂದನೆಗಳ ಮಹಾಪೂರ
ಭಾರತ ರತ ಗೌರವಕ್ಕೆ ಪಾತ್ರರಾಗಿರುವ ವಿಜ್ಞಾನಿ ಪ್ರೊ. ಸಿಎನ್ಆರ್ ರಾವ್ ಅವರಿಗೆ ದೇಶಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಈ ನಡುವೆ ರಾಜ್ಯದ ಹೆಮ್ಮೆಯ ವಿಜ್ಞಾನಿಗೆ ರಾಜ್ಯದ ರಾಜಕೀಯ ನಾಯಕರು, ಮುಖಂಡರು, ವಿಜ್ಞಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಮಂಗಳವಾರ ನಗರದಲ್ಲಿ ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಎಸ್ ಆರ್ ಪಾಟೀಲ, ವಿರೋಧ ಪಕ್ಷದ ನಾಯಕ ಎಚ್ಡಿ ಕುಮಾರಸ್ವಾಮಿ ಅಭಿನಂದಿಸಿ ಸನ್ಮಾನಿಸಿದರು.












Click it and Unblock the Notifications