ಸ್ಪೀಕರ್ ನೇತೃತ್ವದ ಸಭೆ ವಿಫಲ, ಮುಂದುವರೆದ ಆಡಿಯೋ ಗದ್ದಲ
ಬೆಂಗಳೂರು, ಫೆಬ್ರವರಿ 13: ಆಪರೇಷನ್ ಕಮಲ ಆಡಿಯೋ ಪ್ರಕರಣ ತನಿಖೆ ಬಗ್ಗೆ ನಿರ್ಧಾರ ತಳೆಯಲು, ಸ್ಪೀಕರ್ ರಮೇಶ್ ನೇತೃತ್ವದಲ್ಲಿ ಕರೆಯಲಾಗಿದ್ದ ಆಡಳಿತ ಮತ್ತು ವಿರೋಧ ಪಕ್ಷಗಳ ನಾಯಕರ ಸಭೆ ವಿಫಲವಾಗಿದೆ.
ರಮೇಶ್ ಕುಮಾರ್ ನೇತೃತ್ವದ ಸಭೆಯಲ್ಲಿಯೂ ಸಹ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಸೌಹಾರ್ಧ ಚರ್ಚೆ ಸಾಧ್ಯವಾಗಲಿಲ್ಲ. ಆಡಳಿತ ಪಕ್ಷ ಸದಸ್ಯರು ಪ್ರಕರಣವನ್ನು ಎಸ್ಐಟಿಗೆ ಒಪ್ಪಿಸಿಯೇ ಸಿದ್ಧ ಎಂದರೆ ವಿರೋಧ ಪಕ್ಷದ ಸದಸ್ಯರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ರಮೇಶ್ ಕುಮಾರ್ ನೇತೃತ್ವದ ಸಭೆಯಲ್ಲಿ ಆಡಿಯೋ ಪ್ರಕರಣ ಇತ್ಯರ್ಥ ಆಗಬಹುದು ಎಂದು ಎಲ್ಲರೂ ಎಣಿಸಿದ್ದರು. ಆದರೆ ಅದು ಸಾಧ್ಯವಾಗಿಲ್ಲ ಹಾಗಾಗಿ ಸತತ ಮೂರನೇ ದಿನವೂ ಆಡಿಯೋ ಕ್ಲಿಪ್ ಪ್ರಕರಣ ಸದನದ ಸಮಯ ತಿನ್ನುವುದರಲ್ಲಿ ಸಂಶಯವಿಲ್ಲ.

ಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ,ಜಗದೀಶ್ ಶೆಟ್ಟರ್, ಬಿಜೆಪಿ ನಾಯಕರಾದ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಜೆ.ಸಿ.ಮಾಧುಸ್ವಾಮಿ, ಬಸವರಾಜಬೊಮ್ಮಾಯಿ, ಗೋವಿಂದ ಕಾರಜೋಳ, ಸಚಿವರಾದ ಕೃಷ್ಣಬೈರೇಗೌಡ ಅವರುಗಳು ಸಭೆಯಲ್ಲಿ ಭಾಗವಹಿಸಿದ್ದರು.
ಈಗಾಗಲೇ ಈ ವಿಷಯ ಸದನದಲ್ಲಿ ಚರ್ಚೆ ಆಗಿದೆ, ನಾವು ಎಸ್ಐಟಿ ತನಿಖೆ ನಿರ್ಣಯ ತೆಗೆದುಕೊಂಡಿದ್ದೇವೆ, ಈಗ ತನಿಖೆಯಿಂದ ಹಿಂದೆ ಸರಿದರೆ ಜನರಿಗೆ ನಮ್ಮ ಮೇಲೆ ಅಪನಂಬಿಕೆ ಬರುತ್ತದೆ ಎಂದು ಆಡಳಿತ ಪಕ್ಷವು ವಾದ ಮಂಡಿಸಿತು.
ಸಭೆಯು ದೀರ್ಘವಾಗಿ ನಡೆದ ಕಾರಣ 11 ಗಂಟೆಗೆ ಆರಂಭವಾಗಬೇಕಿದ್ದ ಸದನವು 12 ಗಂಟೆ ಆದ ನಂತರ ಆರಂಭವಾಯಿತು.












Click it and Unblock the Notifications