ಆ ಚೋಟ ಸಹಿಯಿಂದ ಯಡಿಯೂರಪ್ಪ ಜೈಲಿಗೆ ಹೋಗಬೇಕಾದ ಪರಿಸ್ಥಿತಿ ಬಂತು: ಪ್ರದೀಪ್ ಈಶ್ವರ್ ಮಾತಿನ ಮರ್ಮವೇನು?
ಬೆಂಗಳೂರು, ಮೇ 29: ಯಾರೋ ಒಬ್ಬರು ಚೋಟಾ ಸಹಿ ಹಾಕಿದ ಕಾರಣಕ್ಕೆ ಯಡಿಯೂರಪ್ಪ ಅವರ ಜೈಲಿಗೆ ಹೋಗಬೇಕಾದ ಪರಿಸ್ಥಿತಿ ಎದುರಾಯಿತು. ಈ ಚೋಟಾ ಸಹಿ ಹಾಕಿದವರು ಯಾರು? ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಪ್ರಶ್ನಿಸಿದರು.
ಈ ಕುರಿತು ಬುಧವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮಧು ಬಂಗಾರಪ್ಪ ಅವರ ಬಗ್ಗೆ ಮಾತನಾಡಿದ್ದೀರಿ ಎಂದು ನಿಮ್ಮ ಕ್ಷಮೆಯನ್ನೂ ನಾವು ಬಯಸುವುದಿಲ್ಲ. ನಿಮ್ಮ ಕ್ಷಮೆ ನಮಗೆ ಬೇಡ. ಬದಲಾಗಿ ಪಕ್ಷ ಕಟ್ಟಿದ ಈಶ್ವರಪ್ಪ, ಯತ್ನಾಳ್ ಅವರ ಬಳಿ ಕೇಳಿ ಎಂದರು.

ಬರ ಪರಿಹಾರದ ಬಗ್ಗೆ ಮಾತನಾಡಿಲ್ಲ. ರಾಜ್ಯದ ಯಾವುದೇ ಸಮಸ್ಯೆಗಳ ಬಗ್ಗೆ ಕೇಂದ್ರದ ಬಳಿ ಮಾತನಾಡಿಲ್ಲ. 26 ಜನ ಸಂಸದರಿದ್ದರೂ ಒಮ್ಮೆಯೂ ದನಿ ಎತ್ತಿಲ್ಲ. ಈ ಬಾರಿ ಕಾಂಗ್ರೆಸ್ ಪಕ್ಷದ 20 ಕ್ಕೂ ಹೆಚ್ಚು ಸಂಸದರು ರಾಜ್ಯಕ್ಕೆ ಬೇಕಾದ ಸವಲತ್ತುಗಳನ್ನು ತರುತ್ತಾರೆ. ನೀವು ಅನವಶ್ಯಕ ಮಾತುಗಳನ್ನು ಬಿಟ್ಟು ಹಿಂದುಳಿದ ವರ್ಗಗಳ ನಾಯಕರು ಬೆಳೆಯಲು ಅವಕಾಶ ಮಾಡಿಕೊಡಿ.
ಶಿವಮೊಗ್ಗದ ಇತಿಹಾಸದಲ್ಲಿ ಬಂಗಾರಪ್ಪ ಅವರು ಹಾಗೂ ಯಡಿಯೂರಪ್ಪ ಅವರನ್ನು ಮರೆಯಲು ಸಾಧ್ಯವಿಲ್ಲ. ಬಂಗಾರಪ್ಪ ಅವರು ಗ್ರಾಮೀಣ ಕೃಪಾಂಕದ ಮೂಲಕ ಹಳ್ಳಿ ಯುವಕರ, ವಿದ್ಯಾರ್ಥಿಗಳ ಬಾಳಿಗೆ ಬೆಳಕಾದರು. ಅಪ್ಪನ ಹಾದಿಯಂತೆ ಮಧು ಬಂಗಾರಪ್ಪ ಅವರು 12 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಮುಂದಾಗಿದ್ದಾರೆ. ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ಅತ್ಯಂತ ಕಟ್ಟುನಿಟ್ಟಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ನಡೆದಿವೆ. ಮೂರು ಬಾರಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ.
ಯಡಿಯೂರಪ್ಪ, ಈಶ್ವರಪ್ಪ ಅವರು ಬಿಜೆಪಿಯನ್ನು ಕರ್ನಾಟಕದಲ್ಲಿ ತಳಮಟ್ಟದಿಂದ ಕಟ್ಟಿದ್ದಾರೆ. ಈಶ್ವರಪ್ಪ ಅವರನ್ನು ಕರ್ನಾಟಕದ ಅಡ್ವಾನಿ ಎಂದು ಕರೆಯಲಾಗುತ್ತಿತ್ತು. ಅಂತಹವರನ್ನು ವಿಜಯೇಂದ್ರ ಅವರು ಅದ್ವಾನ ಮಾಡಿದ್ದಾರೆ. ಈಶ್ವರಪ್ಪ ಅವರು ಹಾಗೂ ಅವರ ಮಗನಿಗೆ ಟಿಕೆಟ್ ಏಕೆ ತಪ್ಪಿಸಿದ್ದೀರಿ ಉತ್ತರಿಸಿ. ನೀವು ಓದುವುದು ಕಡಿಮೆ ಮಾಡಿರಬೇಕು ಅಥವಾ ನಿಮಗೆ ಸಲಹೆ ನೀಡುತ್ತಿರುವವರು, ಸುತ್ತಮುತ್ತ ಇರುವವರು ಓದುವುದು ಕಡಿಮೆ ಮಾಡಿರಬೇಕು ಆದ ಕಾರಣಕ್ಕೆ ನೀವು ತಾಳ ತಪ್ಪಿದವರಂತೆ ಮಾತನಾಡುತ್ತಾ ಇದ್ದೀರಿ.
ಬಸನಗೌಡ ಪಾಟೀಲ ಯತ್ನಾಳ ಅವರು ವಿರೋಧ ಪಕ್ಷಗಳ ಮೇಲೆ ಕಿಡಿ ಕಾರಿದ್ದಕ್ಕಿಂತ ಹೆಚ್ಚು ವಿಜಯೇಂದ್ರ ಅವರ ಮೇಲೆ ಕಿಡಿ ಕಾರಿದ್ದಾರೆ. ಇದು ಯಾವ ಕಾರಣಕ್ಕೆ ಎಂದು ಉತ್ತರಿಸಬಹುದೇ? ರಾಜ್ಯಕ್ಕೆ ಬರಬೇಕಾದ ಬರ ಪರಿಹಾರದ ಬಗ್ಗೆ ಒಮ್ಮೆಯೂ ದನಿ ಎತ್ತಿಲ್ಲ. ವಿರೋಧ ಪಕ್ಷದ ರಾಜ್ಯ ಅಧ್ಯಕ್ಷರಾಗಿ ತಲೆಯಲ್ಲಿ ವಿಷಯಗಳು ಇಲ್ಲದೇ ಇದ್ದಾಗ ಈ ರೀತಿಯ ಕ್ಷುಲ್ಲಕ ವಿಚಾರಗಳು ಮುನ್ನೆಲೆಗೆ ಬರುತ್ತವೆ.
ಯುವಕರಾಗಿರುವ ವಿಜಯೇಂದ್ರ ಅವರೇ ನಿಮ್ಮ ತಂದೆಯ ಕಾರಣಕ್ಕೆ ಅಧಿಕಾರ ಸಿಕ್ಕಿದೆಯೇ ಹೊರತು ಅದನ್ನು ಬಿಟ್ಟರೇ ನೀವು ದೊಡ್ಡ ಸೊನ್ನೆ. ಬಿಜೆಪಿ ಶಿಸ್ತಿನ ಪಕ್ಷ ಎಂದು ಕರೆಯಲಾಗುತ್ತದೆ. ನಿಜವಾದ ಶಿಸ್ತಿನ ಪಕ್ಷ ಕಾಂಗ್ರೆಸ್. ಏಕೆಂದರೆ ನಮ್ಮ ಪಕ್ಷದಲ್ಲಿ ಸಿಎಂ, ಡಿಸಿಎಂ, ಹಿರಿಯ ನಾಯಕರ ವಿರುದ್ಧ ಮಾತನಾಡಿದರೆ ಪಕ್ಷದಿಂದ ಕಿತ್ತು ಹಾಕಲಾಗುವುದು. ಆದರೆ ಬಿಜೆಪಿಯಲ್ಲಿ ಬಾಯಿಗೆ ಬಂದಂತೆ ಬೈದುಕೊಂಡು ಓಡಾಡಬಹುದು. ಈಶ್ವರಪ್ಪ, ಯತ್ನಾಳ್ ಅವರು ಮಾತನಾಡುತ್ತಲೇ ಇದ್ದಾರೆ ಅವರ ವಿರುದ್ದ ಮೊದಲು ಕ್ರಮ ತೆಗೆದುಕೊಳ್ಳಿ. ಕುರ್ಚಿಗಲ್ಲ ಧೈರ್ಯ ಇರುವುದು, ಅದರ ಮೇಲೆ ಕುಳಿತುಕೊಳ್ಳುವವರಿಗೆ.
ವಿರೋಧ ಪಕ್ಷದ ವಿಮರ್ಶೆಗಳಿಗೆ ನಾವು ಉತ್ತರಿಸುತ್ತೇವೆ ಆದರೆ ವೈಯಕ್ತಿಕ ವಿಚಾರಗಳನ್ನು ಮುಂದೆ ತಂದು ಮುಖ್ಯ ವಿಚಾರವನ್ನು ಮರೆಸುತ್ತಾರೆ. ವಿಜಯೇಂದ್ರ ಅವರೇ ಯಾವುದಾದರೂ ವಿಚಾರಗಳ ಮೇಲೆ ಮಾತನಾಡೋಣ ಅದನ್ನು ಬಿಟ್ಟು ಬೇರೆ ವಿಚಾರಗಳು ಬೇಡ.
ಈ ಬಾರಿ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಹಾಕಿಸಿದ ಪರಿಣಾಮ ಎಸ್ ಎಸ್ ಎಲ್ ಸಿ ಫಲಿತಾಂಶ ಕಡಿಮೆ ಬಂದಿದೆ. ಏಕೆಂದರೆ ಪರೀಕ್ಷಾ ನಕಲನ್ನು ತಡೆದ ಪರಿಣಾಮ ಈ ರೀತಿಯಾಗಿದೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಉತ್ತಮವಾಗಿರುತ್ತದೆ. ಈ ನಿರ್ಧಾರ ಮಾಡಿದವರು ಮಧು ಬಂಗಾರಪ್ಪ ಅವರು. ರಾಜ್ಯದ ಭವಿಷ್ಯವನ್ನು ಕಟ್ಟುವಂತ ಚರ್ಚೆ ನಡೆಸೋಣ ಅದನ್ನು ಬಿಟ್ಟು ಕೇವಲ ತೇಜೋವಧೆ ಮಾಡುವ ಅಂಶಗಳನ್ನು ಇಟ್ಟುಕೊಂಡು ರಾಜಕಾರಣ ಮಾಡುವುದು ಬೇಡ ಎಂದು ವಿಜಯೇಂದ್ರ ಅವರಿಗೆ ಸಲಹೆ ನೀಡುತ್ತೇನೆ.












Click it and Unblock the Notifications