ನರ್ಸರಿ ಶಾಲೆಗಳ ಕಡ್ಡಾಯ ನೋಂದಣಿಗೆ ಸರಕಾರದ ಸುತ್ತೋಲೆ
ಎಲ್ಲಾ ಪೂರ್ವ ಪ್ರಾಥಮಿಕ (ನರ್ಸರಿ) ಶಾಲೆಗಳನ್ನು ಕಡ್ಡಾಯ ನೋಂದಾವಣೆ ಮಾಡುವಂತೆ ಕರ್ನಾಟಕ ಸರಕಾರ ಸುತ್ತೋಲೆ ಹೊರಡಿಸಿದೆ.
ಬೆಂಗಳೂರು, ಮಾರ್ಚ್ 1: ಎಲ್ಲಾ ಪೂರ್ವ ಪ್ರಾಥಮಿಕ (ನರ್ಸರಿ) ಶಾಲೆಗಳನ್ನು ಕಡ್ಡಾಯ ನೋಂದಾವಣೆ ಮಾಡುವಂತೆ ಕರ್ನಾಟಕ ಸರಕಾರ ಸುತ್ತೋಲೆ ಹೊರಡಿಸಿದೆ.
ಪೂರ್ವ ಪ್ರಾಥಮಿಕ (ಎಲ್.ಕೆ.ಜಿ, ಯು.ಕೆ.ಜಿ) ಶಾಲೆಗಳಲ್ಲಿ ಮಕ್ಕಳ ಮೇಲೆ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯ ತಡೆಯಲು ರಾಜ್ಯ ಸರ್ಕಾರ ಇಂಥಹದ್ದೊಂದು ಕಠಿಣ ಕ್ರಮಕ್ಕೆ ಮುಂದಾಗಿದೆ. ಈ ಮೂಲಕ ಮೂಲಸೌಕರ್ಯ, ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಯಾವುದೇ ಭದ್ರತಾ ಕ್ರಮ ತೆಗೆದುಕೊಳ್ಳದೆ ತಲೆ ಎತ್ತುತ್ತಿದ್ದ ನರ್ಸರಿ ಶಾಲೆಗಳ ಮೇಲೆ ಸರಕಾರ ನಿಯಂತ್ರಣ ಸಾಧಿಸಲು ಹೊರಟಿದೆ.[ಬೀಗ ಹಾಕಬೇಕಿದ್ದ ಕನ್ನಡ ಶಾಲೆ ಉಳಿದು, ಬೆಳೆದ ಕಥೆ!]
ನರ್ಸರಿ ವಿದ್ಯಾರ್ಥಿಗಳ ಅದರಲ್ಲೂ ಮುಖ್ಯವಾಗಿ ಬೆಂಗಳೂರಿನಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಶಿಕ್ಷಣ ಇಲಾಖೆ ಶಾಲೆಗಳ ಆರಂಭಕ್ಕೆ ಮಾನ್ಯತೆ ಪಡೆಯುವ ನಿಯಮವನ್ನು ಕಡ್ಡಾಯಗೊಳಿಸಲು ತೀರ್ಮಾನಿಸಿದೆ.
ಈ ಸಂಬಂಧ ಇದಕ್ಕಾಗಿ ಕರ್ನಾಟಕ ಶಿಕ್ಷಣ ಅಧಿನಿಯಮ1983ರ ಸೆಕ್ಷನ್ 30 ಮತ್ತು 31 ಹಾಗೂ ಕರ್ನಾಟಕ ಶಿಕ್ಷಣ ಸಂಸ್ಥೆಗಳು (ವರ್ಗೀಕರಣ ಮತ್ತು ನೋಂದಣಿ) ನಿಯಮ 1997 ರ ಸೆಕ್ಷನ್ 3ರಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳ ನೋಂದಣಿಗೆ ಇರಬೇಕಾದ ಮಾರ್ಗಸೂಚಿಗಳನ್ನು ನಿಗದಿ ಪಡಿಸಿ ಆದೇಶಿಸಲಾಗಿದೆ. ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ (ಪ್ರಾಥಮಿಕ) ರೇವಯ್ಯ ಸುತ್ತೋಲೆ ಹೊರಡಿಸಿದ್ದಾರೆ.[ಆಲತ್ತೂರಿನಲ್ಲಿ ನಾಮ್ ಕೇ ವಾಸ್ತೆ ಕನ್ನಡ ಶಾಲೆ, ನೀನೇ ಅಂತ ಕೇಳೋರಿಲ್ವೆ]
ಈ ಮೊದಲಿನ ಅಧಿಸೂಚನೆಯಲ್ಲಿ ಕೇವಲ ಮಾನ್ಯತೆ ಪಡೆಯಲು ಇರಬೇಕಾದ ಮಾರ್ಗಸೂಚಿಗಳ ಸೂಚನೆ ನೀಡಲಾಗಿತ್ತೇ ಹೊರತು ಮಾನ್ಯತೆ ಕಡ್ಡಾಯಗೊಳಿಸಿರಲಿಲ್ಲ. ಹೀಗಾಗಿ 05-10-2015ರ ಸುತ್ತೋಲೆಯನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ. ಉಳಿದಂತೆ ಹಳೆಯ ನಿಯಮ ಮತ್ತು ಮಾನದಂಡಗಳು ಮುಂದುವರಿಯಲಿವೆ.
ಈ ಹಿಂದೆ ಸರ್ಕಾರ 2016-17ನೇ ಸಾಲಿನಿಂದ ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳುವಂತೆ ಪೂರ್ವ ಪ್ರಾಥಮಿಕ ಶಾಲೆಗಳಿಗೆ ಸೂಚಿಸಿತ್ತು. ಆನ್ಲೈನಿನಲ್ಲಿ ಸಲ್ಲಿಸಿದ ಅರ್ಜಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪರಿಶೀಲನೆ ನಡೆಸಿ ಮಾನ್ಯತೆ ನೀಡುತ್ತಿದ್ದರು. ಇದು ಕಡ್ಡಾಯವಾಗಿರದಿದ್ದರಿಂದ ಕೆಲವರಷ್ಟೇ ಅರ್ಜಿ ಸಲ್ಲಿಸುತ್ತಿದ್ದರು. ಇದಕ್ಕಾಗಿ ಗ್ರಾಮೀಣ ಭಾಗದಲ್ಲಿ 2 ಸಾವಿರ, ತಾಲೂಕು ಮಟ್ಟದಲ್ಲಿ 5 ಸಾವಿರ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿರುವ 10 ಸಾವಿರ ರೂಪಾಯಿ ನೋಂದಣಿ ಶುಲ್ಕ ಪಾವತಿಸಬೇಕಾಗಿತ್ತು. ಇದರೊಟ್ಟಿಗೆ ಕೆಲವು ಮಾರ್ಗಸೂಚಿಗಳನ್ನೂ ಅನುಸರಿಸಬೇಕಾಗಿತ್ತು.