ಅಭ್ಯರ್ಥಿಗಳ ಪಟ್ಟಿ; ಬಿಜೆಪಿಗೆ ಈಗ ಬಿಎಸ್ವೈ ಮಾರ್ಗದರ್ಶನ ಬೇಕಿಲ್ಲ!
ಬೆಂಗಳೂರು, ಏಪ್ರಿಲ್ 11; ಈ ಬಾರಿಯ ಕರ್ನಾಟಕದ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಮಂಗಳವಾರ ರಾತ್ರಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಅಭ್ಯರ್ಥಿಗಳ ಪಟ್ಟಿ ತಯಾರಿ ವೇಳೆ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಗೆ ಹೆಚ್ಚಿನ ಮಾನ್ಯತೆ ಸಿಕ್ಕಿಲ್ಲವೇ?. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಪಕ್ಷದ ವರಿಷ್ಠರು ಅವರನ್ನು ಕಡೆಗಣಿಸಿದ್ದಾರೆಯೇ? ಎಂಬ ಬಗ್ಗೆ ಹಲವು ಚರ್ಚೆಗಳು ನಡೆದಿವೆ.
ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ಶುಕ್ರವಾರವೇ ದೆಹಲಿಗೆ ಹೋಗಿದ್ದ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸದಸ್ಯ ಬಿ. ಎಸ್. ಯಡಿಯೂರಪ್ಪ ಸೋಮವಾರ ಸಂಜೆಯೇ ದೆಹಲಿಯಿಂದ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮುಂತಾದ ನಾಯಕರು ದೆಹಲಿಯಲ್ಲಿಯೇ ಇದ್ದಾರೆ. ಆದರೆ ಪಟ್ಟಿ ಮಾತ್ರ ಇನ್ನೂ ಬಿಡುಗಡೆಯಾಗಿಲ್ಲ.

ಬಿ. ಎಸ್. ಯಡಿಯೂರಪ್ಪರನ್ನು ಬಿಜೆಪಿ ನಾಯಕರು ಕಡೆಗಣಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಹಲವು ಬಾರಿ ಆರೋಪ ಮಾಡಿತ್ತು. ಈಗ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯ ತಯಾರಿ ವೇಳೆಯಲ್ಲಿಯೂ ಇದೇ ಆರೋಪ ಮಾಡಿ ಸರಣಿ ಟ್ವೀಟ್ಗಳನ್ನು ಮಾಡಿದೆ. 'BSYರ ರಾಜಕೀಯ ಬದುಕಿಗೆ ದುರಂತ ಅಂತ್ಯ ತೋರಿಸುತ್ತಿದೆ ಬಿಜೆಪಿ, BSY ಅವರು ಬಿಜೆಪಿ ಬಳಸಿ ಬಿಸಾಡುವ ಟಿಶ್ಯೂ ಪೇಪರ್ ಆಗಿದ್ದಾರೆ' ಎಂದು ಪ್ರತಿಪಕ್ಷ ಟೀಕೆ ಮಾಡಿದೆ.
ಕಾಂಗ್ರೆಸ್ ಟ್ವೀಟ್ಗಳು ಹೇಳುವುದೇನು?; ಪ್ರಜಾವಾಣಿ ದಿನಪತ್ರಿಕೆಯಲ್ಲಿ 'ಬಿಎಸ್ವೈ ಹೊರಗಿಟ್ಟು ಶಾ, ನಡ್ಡಾ ಸಭೆ' ಎಂಬ ವರದಿಯೊಂದು ಪ್ರಕಟವಾಗಿದೆ. ಮಂಗಳವಾರ ಕಾಂಗ್ರೆಸ್ ತನ್ನ ಟ್ವೀಟ್ನಲ್ಲಿ ಈ ವರದಿಯನ್ನು ಉಲ್ಲೇಖ ಮಾಡಿದೆ. 'BSY ಅವರನ್ನೇ ಹೊರಗಿಟ್ಟು ಇತರೇ ರಾಜ್ಯ ನಾಯಕರೊಂದಿಗೆ ಸಭೆ ನಡೆಸಿದ್ದು ಲಿಂಗಾಯತ ಸಮುದಾಯದ ಹಿರಿಯ ನಾಯಕನಿಗೆ ಮಾಡಿದ ಘೋರ ಅವಮಾನ. ಕರ್ನಾಟಕದಲ್ಲಿ ಬಿಜೆಪಿ ಕಟ್ಟಿದ BSY ಅವರಿಗೆ ಸಭೆಯಲ್ಲಿ ಕುರ್ಚಿ ಇರಲಿಲ್ಲವೇ ಬಿಜೆಪಿ ಕರ್ನಾಟಕ?, ಟಿಕೆಟ್ ನಿರ್ಧರಿಸುವ ಸ್ವತಂತ್ರವಿಲ್ಲವೇ?, BSY ಅವರು ಬಿಜೆಪಿ ಬಳಸಿ ಬಿಸಾಡುವ ಟಿಶ್ಯೂ ಪೇಪರ್ ಆಗಿದ್ದಾರೆ' ಎಂದು ಕಾಂಗ್ರೆಸ್ ಹೇಳಿದೆ.

ಮತ್ತೊಂದು ಟ್ವೀಟ್ನಲ್ಲಿ, 'ಬಿಜೆಪಿಗೆ ಯಡಿಯೂರಪ್ಪ ಬೇಕಿರುವುದು ಓಟು ಗಳಿಕೆಗೆ ಮುಖ ತೋರಿಸಲು ಮಾತ್ರ!. ಟಿಕೆಟ್ ಹಂಚಿಕೆಯ ಸಭೆಗೆ ಮಾತ್ರ BSY ಹೊರಗೆ, ಪ್ರಹ್ಲಾದ್ ಜೋಶಿ, ಬಿ. ಎಲ್. ಸಂತೋಷ್, ಸಿ. ಟಿ. ರವಿ, ಕಟೀಲು ಒಳಗೆ!. BSY ಅವರಿಗೆ ಈಗ ಮಾರ್ಗದರ್ಶಕ ಮಂಡಳಿಯೂ ಇಲ್ಲ, ಬಿಜೆಪಿಗೆ ಮಾರ್ಗದರ್ಶನ ಬೇಕಿಲ್ಲ. BSYರ ರಾಜಕೀಯ ಬದುಕಿಗೆ ದುರಂತ ಅಂತ್ಯ ತೋರಿಸುತ್ತಿದೆ ಬಿಜೆಪಿ' ಎಂದು ಕಾಂಗ್ರೆಸ್ ತನ್ನ ಟ್ವೀಟ್ನಲ್ಲಿ ಆರೋಪವನ್ನು ಮಾಡಿದೆ.
ಈ ಹಿಂದೆ ಹಲವು ಬಾರಿ ಬಿಜೆಪಿ ಪಕ್ಷದ ಬಣ ರಾಜಕೀಯದ ಬಗ್ಗೆ ಟ್ವೀಟ್ ಮಾಡಿದ್ದ ಕಾಂಗ್ರೆಸ್ ಮಂಗಳವಾರ, "BSY ಇರಬೇಕಾದ ಜಾಗದಲ್ಲಿ ಪ್ರಯತ್ನಪೂರ್ವಕವಾಗಿ ಪ್ರಹ್ಲಾದ್ ಜೋಷಿಯನ್ನು ತಂದು ಕೂರಿಸುತ್ತಿದೆ ಬಿಜೆಪಿ. ಟಿಕೆಟ್ ಹಂಚಿಕೆಯ ಸಭೆಯಲ್ಲಿ BSYರ ಮಾತಿಗೆ ಮನ್ನಣೆ ಕೊಡುವುದಿರಲಿ ಕನಿಷ್ಠ ಹಾಜರಿಗೂ ಅವಕಾಶ ಕೊಡಲಿಲ್ಲ. BSYರಿಗೆ ನಿರಂತರ ಅವಮಾನ ಮಾಡಿದ ಬಿಜೆಪಿ ಅವರನ್ನು ಡಸ್ಟ್ಬಿನ್ನಲ್ಲಿ ಬಿದ್ದಿರುವ ಕಸದಂತೆ ನಡೆಸಿಕೊಳ್ಳುತ್ತಿದೆ' ಎಂದು ದೂರಿದೆ.
ಮತ್ತೊಂದು ಮಾಧ್ಯಮದ ವರದಿ ಉಲ್ಲೇಖ ಮಾಡಿರುವ ಕಾಂಗ್ರೆಸ್ ಪಕ್ಷ, 'ದೆಹಲಿಗೆ ಹೋಗಿದ್ದ BSY ಅವರಂತಹ ಹಿರಿಯ ನಾಯಕರನ್ನು ದಿಕ್ಕು ತಪ್ಪಿಸಿ, ಅಲ್ಲಿ ಇಲ್ಲಿ ಅಲೆಸಿ ಅವರನ್ನು ಹೊರಗಿಟ್ಟು ಸಭೆ ನಡೆಸಿದ್ದರ ಹಿಂದಿನ ಕೈವಾಡ ಯಾರದ್ದು ಬಿಜೆಪಿ ಕರ್ನಾಟಕ? ಅಮಿತ್ ಶಾರದ್ದೋ, ಪ್ರಹ್ಲಾದ್ ಜೋಷಿಯದ್ದೋ, ಬಿ. ಎಲ್. ಸಂತೋಷರದ್ದೋ, ಬೊಮ್ಮಾಯಿಯವರದ್ದೋ? ಮತಕ್ಕಾಗಿ ಮುಖ ತೋರಿಸಲು ಬೇಕಾದ BSY ಟಿಕೆಟ್ ನಿರ್ಧಾರಕ್ಕೆ ಬೇಡವಾದರೆ?' ಎಂದು ಟ್ವೀಟ್ ಮೂಲಕ ಪ್ರಶ್ನೆ ಮಾಡಿದೆ.












Click it and Unblock the Notifications