ರೌಡಿ ಸೈಲೆಂಟ್ ಸುನೀಲನ ಜೊತೆ ಬಿಜೆಪಿ ನಾಯಕರು: ವಿಡಿಯೊ ಹಂಚಿಕೊಂಡ ಕಾಂಗ್ರೆಸ್
ಬೆಂಗಳೂರು, ನವೆಂಬರ್ 28: ಮೋಸ್ಟ್ ವಾಂಟೆಡ್ ರೌಡಿ ಸೈಲೆಂಟ್ ಸುನೀಲನ ಜೊತೆ ವೇದಿಕೆ ಹಂಚಿಕೊಂಡಿರುವ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ಹರಿಹಾಯ್ದಿದೆ.
'ವಾಂಟೆಡ್ ಲಿಸ್ಟ್ನಲ್ಲಿರುವ ರೌಡಿ ಪೊಲೀಸರ ಕೈಗೆ ಸಿಗುವುದಿಲ್ಲ, ಆದರೆ ಬಿಜೆಪಿ ನಾಯಕರ ಜೊತೆಯಲ್ಲಿರುತ್ತಾನೆ. ಕಳ್ಳರು, ಸುಳ್ಳರು, ಭ್ರಷ್ಟರು, ರೌಡಿಗಳು ಎಲ್ಲರಿಗೂ ಒಂದೇ ಸೂರು ಬಿಜೆಪಿ. ಪೊಲೀಸರು ಹುಡುಕುತ್ತಿದ್ದ ರೌಡಿಯ ಜೊತೆಗೆ ನಿಮ್ಮ ನಾಯಕರಿಗೆ ಏನು ಕೆಲಸ? ಆತನ ಬಂಧನ ಆಗದಿರುವ ಹಿಂದೆ ಬಿಜೆಪಿ ಕೈವಾಡವಿದೆಯೇ' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
'ಕ್ರಿಮಿನಲ್ಳೊಂದಿಗೆ ಬಿಜೆಪಿಯ ನೆಂಟಸ್ತಿಕೆ ಇರುವಾಗ ರಾಜ್ಯದಲ್ಲಿ ಅಪರಾಧ ಪ್ರಕರಣ ಸಂಖ್ಯೆ ಏರದಿರುತ್ತದೆಯೇ? ಆರಗ ಜ್ಞಾನೇಂದ್ರ ಅವರೇ, ರೌಡಿಗಳನ್ನು ಹಿಡಿಯುವ ಯೋಗ್ಯತೆ ನಿಮ್ಮ ಇಲಾಖೆಗೆ ಇಲ್ಲವೇ ಅಥವಾ ನೀವೇ ಪೊಲೀಸರನ್ನು ಕಟ್ಟಿಹಾಕಿದ್ದೀರಾ? ಸಿಸಿಬಿ ಪೊಲೀಸರ ಕೈಗೆ ಸಿಗದ ರೌಡಿ ಬಿಜೆಪಿ ನಾಯಕರ ಕೈಗೆ ಸಿಕ್ಕಿದ್ದು ಹೇಗೆ' ಎಂದು ಕಾಂಗ್ರೆಸ್ ಕೇಳಿದೆ.
ಬಿಜೆಪಿಯ ಕೃಪಾಕಟಾಕ್ಷದಿಂದ ಸೈಲೆಂಟ್ ಸುನಿಲ್ ಎಂಬ ರೌಡಿಯ ಮುಂದೆ ಈಗ ಪೊಲೀಸರೇ ಸೈಲೆಂಟ್. ಆರಗ ಜ್ಞಾನೇಂದ್ರ ಅವರೇ, ಸೈಲೆಂಟ್ ಸುನೀಲನಿಗೆ ಪೊಲೀಸರು ಹುಡುಕುತ್ತಿರಲಿಲ್ಲವೇ? ಬಿಜೆಪಿ ನಾಯಕರೊಂದಿಗೆ ವೇದಿಕೆಯಲ್ಲಿದ್ದಾಗ ಅಲ್ಲಿ ಪೊಲೀಸರೀರಲಿಲ್ಲವೇ? ಬಂಧಿಸದಂತೆ ಪೊಲೀಸರಿಗೆ ತಡೆದವರು ಯಾರು? ಪೊಲೀಸರಿಗಿಂತ ರೌಡಿಗಳೇ ಪ್ರಭಾವಿಗಳಾದರೆ' ಎಂದು ಕೆಪಿಸಿಸಿ ಪ್ರಶ್ನಿಸಿದೆ.

ರಾಜಕೀಯ ಒತ್ತಡದಿಂದ ಚಿಲುಮೆ ಸಂಸ್ಥೆಗೆ ಸಹಕಾರ
'ರಾಜಕೀಯ ಒತ್ತಡದಿಂದ ಚಿಲುಮೆ ಸಂಸ್ಥೆಗೆ ಸಹಕರಿಸಿದ್ದೆವು ಎಂದು ಅಧಿಕಾರಿಗಳು ಹೇಳಿದ್ದಾರೆ. ಒತ್ತಡ ಹಾಕಿದ ರಾಜಕೀಯದವರು ಯಾರು? ಅವರ ಹಿತಾಸಕ್ತಿ ಏನಿತ್ತು? ಚಿಲುಮೆ ಸಂಸ್ಥೆಯ ಹಣದ ಮೂಲ ಯಾವುದು? ಚೆಕ್, ಲೆಟರ್ ಹೆಡ್ ಸಿಕ್ಕಿರುವ ಸಂಗತಿಯನ್ನು ಬಚ್ಚಿಡುತ್ತಿರುವುದೇಕೆ? ಅಕ್ರಮಗಳ ಮಹಾಪೋಷಕ ಬಸವರಾಜ ಬೊಮ್ಮಾಯಿ ಅವರು ಜನತೆಗೆ ಉತ್ತರಿಸಬೇಕು' ಎಂದು ಕೆಪಿಸಿಸಿ ತಿಳಿಸಿದೆ.

ಸಿಎಂಗೆ ದಮ್ಮು ಇಲ್ಲವೇ ಎಂದ ಕಾಂಗ್ರೆಸ್
'ಚಿಲುಮೆ ಸಂಸ್ಥೆಯಲ್ಲಿ ಲೆಟರ್ ಹೆಡ್, ಚೆಕ್ ದೊರಕಿದ ವಿಚಾರವಾಗಿ ಸಚಿವ ಅಶ್ವತ್ಥನಾರಾಯಣ ಅವರ ವಿಚಾರಣೆ ಮಾಡುವ ದಮ್ಮು, ತಾಕತ್ತು ಇಲ್ಲವೇ ಬಸವರಾಜ ಬೊಮ್ಮಾಯಿ ಅವರೇ, ಸಚಿವರಿಗೂ ಚಿಲುಮೆಗೂ ಏನು ಸಂಬಂಧ ಬೇರೆಲ್ಲವನ್ನೂ ಪುಂಖಾನುಪುಂಖವಾಗಿ ಮಾತಾಡುವ ಮುಖ್ಯಮಂತ್ರಿಗಳು ಈ ಬಗ್ಗೆ ಮೌನ ಮುರಿಯದಿರುವುದೇಕೆ? ಸಿಎಂ ಕೂಡ ಈ ಅಕ್ರಮದಲ್ಲಿ ಪಾಲು ಹೊಂದಿರುವರೇ' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಮತದಾರರ ಮಾಹಿತಿ ಕಳ್ಳತನ ಯಾರ ಕಾಲದಲ್ಲೂ ಆಗಿಲ್ಲ: ಸಿದ್ದು
ಮತದಾರರ ಮಾಹಿತಿ ಕಳ್ಳತನದ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.
'ಮತದಾರರ ಮಾಹಿತಿ ಕಳ್ಳತನ ದೇಶದಲ್ಲಿ ಯಾರ ಕಾಲದಲ್ಲೂ ಆಗಿಲ್ಲ, ಆದರೆ ಬಿಜೆಪಿ ಸರ್ಕಾರದಲ್ಲಿ ನಡೆಯುತ್ತಿದೆ. ಇದು ರಾಜ್ಯದ ಜನತೆಗೆ ಮಾಡಿದ ದೊಡ್ಡ ದ್ರೋಹವಾಗಿದ್ದು, ಅತ್ಯಂತ ಗಂಭೀರ ಅಪರಾಧವಾಗಿದೆ. ಹಾಗಾಗಿ ಮುಖ್ಯಮಂತ್ರಿಗಳು ಹಾಗೂ ಬಿಬಿಎಂಪಿ ಆಯುಕ್ತರ ವಿರುದ್ಧ ಕೇಂದ್ರ ಚುನಾವಣಾ ಆಯೋಗ ಸೂಕ್ತ ಕ್ರಮ ಕೈಗೊಳ್ಳಬೇಕು' ಎಂದು ಒತ್ತಾಯಿಸಿದ್ದಾರೆ.
'ಮತದಾರರ ಮಾಹಿತಿ ಕಳ್ಳತನ ಪ್ರಕರಣದ ಕಿಂಗ್ ಪಿನ್ ಬೊಮ್ಮಾಯಿ ಅವರು ರಾಜೀನಾಮೆ ನೀಡಬೇಕು. ಮುಕ್ತ-ನ್ಯಾಯ ಸಮ್ಮತ ಚುನಾವಣೆ ನಡೆಯಬೇಕೆಂದರೆ 3 ಕ್ಷೇತ್ರಗಳಂತೆಯೇ 224 ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆ ಮಾಡಬೇಕು. ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೇಲ್ವಿಚಾರಣೆಯಲ್ಲಿ ಈ ಅಕ್ರಮದ ನ್ಯಾಯಾಂಗ ತನಿಖೆ ನಡೆಸಬೇಕು' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ವಿದ್ಯಾನಿಧಿ ಯೋಜನೆಯನ್ನು 'ಕಳ್ಳ ನಿಧಿ' ಮಾಡಿದ್ದೇ ಬಿಜೆಪಿ
'ವಿದ್ಯಾನಿಧಿ ಎಂಬ ಯೋಜನೆಯನ್ನು 'ಕಳ್ಳರ ನಿಧಿ' ಮಾಡಿದ್ದೇ ಬಿಜೆಪಿ ಸಾಧನೆ. ಬಸವರಾಜ ಬೊಮ್ಮಾಯಿ ಅವರೇ, ರೈತರ ಮಕ್ಕಳಿಗೆ ಸಿಗದೆ ಅನರ್ಹರ ಪಾಲಾಗುತ್ತಿರುವ ವಿದ್ಯಾನಿಧಿ ಹಣದಲ್ಲಿ ಮತ್ತಷ್ಟು ಲೂಟಿಗೆ ಅವಕಾಶ ಮಾಡಿಕೊಯುವುದು ನಿಮ್ಮ ಯೋಜನೆಯೇ? ವಿದ್ಯಾನಿಧಿ ಯೋಜನೆಯಲ್ಲಿನ ಕಮಿಷನ್ ಲೂಟಿಗೆ ಕಡಿವಾಣ ಹಾಕದೆ ಭ್ರಷ್ಟರ ಪೋಷಣೆ ಮಾಡುತ್ತಿರುವುದೇಕೆ' ಎಂದು ಪ್ರಶ್ನಿಸಿದೆ.












Click it and Unblock the Notifications