ಉತ್ತರ ಕರ್ನಾಟಕ ಬಂದ್ ಇದೆಯೋ?, ಇಲ್ಲವೋ? ಇನ್ನೂ ಗೊಂದಲ
ಹುಬ್ಬಳ್ಳಿ, ಆಗಸ್ಟ್ 01 : ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವಾಗಿ ಮಾಡಬೇಕು ಎಂಬ ಬೇಡಿಕೆಯೊಂದಿಗೆ ಆಗಸ್ಟ್ 2ರ ಗುರುವಾರ ಉತ್ತರ ಕರ್ನಾಟಕ ಬಂದ್ ಕರೆ ನೀಡಲಾಗಿದೆ. ಬಂದ್ ನಡೆಯಲಿದೆಯೇ? ಇಲ್ಲವೇ ಎಂಬ ಬಗ್ಗೆ ಇನ್ನೂ ಗೊಂದಲವಿದೆ.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಸೋಮಶೇಖರ ಕೋತಂಬರಿ ಅವರು ಆ.2ರಂದು ಉತ್ತರ ಕರ್ನಾಟಕ ಬಂದ್ಗೆ ಕರೆ ನೀಡಿದ್ದರು. 12 ಜಿಲ್ಲೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುತ್ತದೆ ಎಂದು ಹೇಳಿದ್ದರು.
ಬಂದ್ ಕರೆ ನೀಡಿರುವ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಸದಸ್ಯರ ಜೊತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಗಳವಾರ ಸಭೆ ನಡೆಸಿದ್ದರು, ಹಲವಾರು ಭರವಸೆಗಳನ್ನು ನೀಡಿದ್ದರು. ಆದರೆ, ಮುಷ್ಕರ ಕೈಬಿಡಲಾಗುತ್ತದೆಯೇ? ಎಂಬ ಬಗ್ಗೆ ಇನ್ನೂ ಅಂತಿಮ ಘೋಷಣೆಯಾಗಿಲ್ಲ.

ಬಂದ್ ಕರೆ ವಾಪಸ್ ಇಲ್ಲ : ಉತ್ತರ ಕರ್ನಾಟಕ ರೈತ ಸಂಘದ ಅಧ್ಯಕ್ಷ ಬಸವರಾಜ್ ಕರಿಗಾರ ಅವರು ಬುಧವಾರ ಪತ್ರಿಕಾಗೋಷ್ಠಿ ನಡೆಸಿದ್ದು, 'ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಆಗಸ್ಟ್ 2ರಂದು ಕರೆ ನೀಡಿದ್ದ ಬಂದ್ ಅನ್ನು ವಾಪಸ್ ಪಡೆದಿಲ್ಲ' ಎಂದು ಸ್ಪಷ್ಟಪಡಿಸಿದರು.
'ಉತ್ತರ ಕರ್ನಾಟಕ ಬಂದ್ ವಿಚಾರದಲ್ಲಿ ಗೊಂದಲವಿಲ್ಲ. 13 ಜಿಲ್ಲೆಗಳಲ್ಲಿ ನಾಳೆ ಬಂದ್ ಮಾಡುತ್ತೇವೆ. ಶಾಲಾ-ಕಾಲೇಜು, ವ್ಯಾಪಾರ ಚಟುವಟಿಕೆ ಬಂದ್ ಮಾಡುತ್ತೇವೆ, ಸಾರಿಗೆ ಸಂಚಾರ ಸಹ ಇರುವುದಿಲ್ಲ. ಪ್ರತ್ಯೇಕ ಉತ್ತರ ಕರ್ನಾಟಕ ಧ್ವಜ ಹಾರಿಸುತ್ತೇವೆ' ಎಂದು ಬಸವರಾಜ್ ಕರಿಗಾರ ಹೇಳಿದರು.
ಬಂದ್ಗೆ ಬೆಂಬಲವಿಲ್ಲ : ಆಗಸ್ಟ್ 2ರ ಉತ್ತರ ಕರ್ನಾಟಕ ಬಂದ್ಗೆ ಬೆಂಬಲ ನೀಡುವುದಿಲ್ಲ ಎಂದು ಸಿಐಟಿಯು, ಕಳಸಾ-ಬಂಡೂರಿ ಹೋರಾಟ ಸಮನ್ವಯ ಸಮಿತಿ, ಆಟೋ ಚಾಲಕರ ಸಂಘದವರು ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತ್ರ ಬಂದ್? : ಆಗಸ್ಟ್ 2ರಂದು ನಿಗದಿಯಂತೆ ಬಂದ್ ನಡೆಯಲಿದೆ ಹುಬ್ಬಳ್ಳಿಯಲ್ಲಿ ಮಾತ್ರ ಬಂದ್ ನಡೆಸುತ್ತೇವೆ ಎಂದು ಹಲವು ಸಂಘಟನೆಗಳ ಮುಖಂಡರು ಹೇಳಿದ್ದಾರೆ. ಆದರೆ, ಹಲವರು ಗುರುವಾರದ ಬಂದ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಹಲವು ಜಿಲ್ಲೆಗಳಲ್ಲಿ ಬೆಂಬಲವಿಲ್ಲ : ವಿಜಯಪುರ, ಬೀದರ್ ಜಿಲ್ಲೆಯಲ್ಲಿ ಗುರುವಾರದ ಬಂದ್ಗೆ ಬೆಂಬಲ ನೀಡಿಲ್ಲ. ವಿಜಯಪುರ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರವೀಂದ್ರ ಬಿಜ್ಜರಗಿ ಅವರು ಆ.2ರ ಉತ್ತರ ಕರ್ನಾಟಕ ಬಂದ್ಗೆ ನಮ್ಮ ಬೆಂಬಲವಿಲ್ಲ ಎಂದು ಹೇಳಿದ್ದಾರೆ.
ಬೀದರ್ನಲ್ಲಿ ಬೆಂಬಲವಿಲ್ಲ : ಬೀದರ್ ಎಸ್ಪಿ ಡಿ.ದೇವರಾಜ ಅವರು ಗುರುವಾರದ ಬಂದ್ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, 'ಉತ್ತರ ಕರ್ನಾಟಕ ಬಂದ್ಗೆ ಬೀದರ್ನಲ್ಲಿ ಕನ್ನಡಪರ ಸಂಘಟನೆಗಳು, ಸ್ವಾಮೀಜಿಗಳು ಬೆಂಬಲ ನೀಡಿಲ್ಲ. ಬಂದ್ಗೆ ಬೆಂಬಲ ಸೂಚಿಸಲು ಯಾವುದೇ ಸಂಘಟನೆಯಿಂದ ಮಾಹಿತಿ ಬಂದಿಲ್ಲ' ಎಂದು ಹೇಳಿದ್ದಾರೆ.
ಶ್ರೀರಾಮುಲು ವಿರುದ್ಧ ದೂರು : ಪ್ರತ್ಯೇಕ ರಾಜ್ಯದ ಹೋರಾಟದ ಬಗ್ಗೆ ಮಾತನಾಡಿದ್ದ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಶಾಸಕ ಬಿ.ಶ್ರೀರಾಮುಲು ವಿರುದ್ಧ ಬೆಂಗಳೂರಿನ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕನ್ನಡ ಅನುಷ್ಠಾನ ಮಂಡಳಿ ಪೊಲೀಸರಿಗೆ ಶ್ರೀರಾಮುಲು ವಿರುದ್ಧ ದೂರು ನೀಡಿದೆ. ಶ್ರೀರಾಮುಲು ಅವರ ಹೇಳಿಕೆ ಸಂವಿಧಾನದ ವಿರುದ್ಧವಾಗಿದೆ. ಕರ್ನಾಟಕ ರಾಜ್ಯ ಪುನರ್ ವಿಂಗಡನೆ ಕಾಯ್ದೆ ಪ್ರಕಾರ ಇದು ಕಾನೂನು ಬಾಹಿರ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.
ಬಂದ್ಗೆ ಬಿಜೆಪಿ ಕುಮ್ಮಕ್ಕು : ಮಾಜಿ ಶಾಸಕ, ಜೆಡಿಎಸ್ ನಾಯಕ ಕೋನರೆಡ್ಡಿ ಅವರು, 'ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆ, ಬಂದ್ಗೆ ಬಿಜೆಪಿ ಕುಮ್ಮಕ್ಕು ಇದೆ' ಎಂದು ಆರೋಪಿಸಿದ್ದಾರೆ. 'ಉತ್ತರ ಕರ್ನಾಟಕ ಬಂದ್ ಹಿಂಪಡೆಯಲು ಸಂಘಟನೆಗಳು ನಿರ್ಧರಿಸಿವೆ. ಆದರೆಮ ಬಿಜೆಪಿಯವರು ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ' ಎಂದು ಕೋನರೆಡ್ಡಿ ದೂರಿದ್ದಾರೆ.
ಬಂದ್ ಕರೆ ವಿರೋಧಿಸಿ ಪ್ರತಿಭಟನೆ : ಆ.2ರಂದು ಉತ್ತರ ಕರ್ನಾಟಕ ಬಂದ್ಗೆ ಕರೆ ನೀಡಿರುವುದನ್ನು ಖಂಡಿಸಿ ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಬುಧವಾರ ಪ್ರತಿಭಟನೆ ನಡೆಸಿತು. ಅಖಂಡ ಕರ್ನಾಟಕವನ್ನು ಒಡೆಯುವ ಪ್ರಯತ್ನವನ್ನು ಕೈಬಿಡಬೇಕು. ಪ್ರತ್ಯೇಕ ರಾಜ್ಯಕ್ಕಾಗಿ ನಡೆಯುತ್ತಿರುವ ಬಂದ್ಗೆ ನಮ್ಮ ಬೆಂಬಲವಿಲ್ಲ ಎಂದು ಕಾರ್ಯಕರ್ತರು ಸ್ಪಷ್ಟಪಡಿಸಿದರು.












Click it and Unblock the Notifications