ರಾಜ್ಯ ರಾಜಕೀಯದ ಬಗ್ಗೆ ನೊಣವಿನಕೆರೆ ಶ್ರೀಗಳು ನುಡಿದಿದ್ದ ಕರಾರುವಾಕ್ ಭವಿಷ್ಯ
ಪಕ್ಷಾತೀತವಾಗಿ ಎಲ್ಲರೂ ಒಪ್ಪುವ, ಎಲ್ಲರಿಗೂ ಬೇಕಾಗಿರುವ ಬಸವರಾಜ ಬೊಮ್ಮಾಯಿ ಈ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಲ್ಲಿಗೆ, ಯಡಿಯೂರಪ್ಪನವರ ಎರಡನೇ ಇನ್ನಿಂಗ್ಸ್ ಆರಂಭಗೊಳ್ಳುತ್ತದೋ ಎನ್ನುವುದೂ ಮುಂದಿನ ದಿನಗಳಲ್ಲಿ ತೀರ್ಮಾನವಾಗಲಿದೆ.
ಬೊಮ್ಮಾಯಿ ಅವರು ಸಿಎಂ ಸ್ಥಾನಕ್ಕಾಗಿ ದೆಹಲಿಯಲ್ಲಾಗಲಿ, ಬೆಂಗಳೂರಿನಲ್ಲಾಗಲಿ ಲಾಬಿ ಮಾಡಿದವರಲ್ಲ. ಯಡಿಯೂರಪ್ಪನವರ ಕೃಪಾಕಟಾಕ್ಷದಿಂದ ಬೊಮ್ಮಾಯಿ ಸಿಎಂ ಆಗಿದ್ದಾರೆ.
ಎರಡು ತಿಂಗಳ ಹಿಂದೆ, ಅಂದರೆ ಮುಖ್ಯಮಂತ್ರಿ ಬದಲಾವಣೆಯ ವಿಚಾರ ಪಕ್ಷದಲ್ಲಿ ಅಷ್ಟೇನೂ ತೀವ್ರವಾಗಿ ಚರ್ಚೆಯಾಗದ ಇದ್ದಂತಹ ಸಮಯದಲ್ಲಿ, ಮುಂದೆ ನೀವೇ ಮುಖ್ಯಮಂತ್ರಿಯಾಗುತ್ತೀರಿ ಎನ್ನುವ ಭವಿಷ್ಯವನ್ನು ಶ್ರೀಗಳೊಬ್ಬರು ನುಡಿದಿದ್ದರು.
ಎರಡು ತಿಂಗಳ ಹಿಂದೆ ಬಸವರಾಜ ಬೊಮ್ಮಾಯಿ ಮತ್ತು ಬಿ.ಶ್ರೀರಾಮುಲು ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆಯಲು ಬಂದಿದ್ದರು. ಆ ವೇಳೆ, ಉನ್ನತ ಹುದ್ದೆಗೆ ಏರುತ್ತೀಯಾ ಎನ್ನುವ ಭವಿಷ್ಯವನ್ನು ಶ್ರೀಗಳು ನುಡಿದಿದ್ದರು, ಅದು ಈಗ ಸತ್ಯವಾಗಿದೆ.

ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿರುವ ಬಸವರಾಜ ಬೊಮ್ಮಾಯಿ
ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿರುವ ಬಸವರಾಜ ಬೊಮ್ಮಾಯಿ ಈ ಹಿಂದೆ ತಮ್ಮ ಸಂಪುಟ ಸಹದ್ಯೋಗಿ ಶ್ರೀರಾಮುಲು ಜೊತೆಗೆ, ತುಮಕೂರು ಜಿಲ್ಲೆಯ, ತಿಪಟೂರು ತಾಲೂಕಿನ ನೊಣವಿನಕೆರೆ ಬಳಿಯಿರುವ ಶ್ರೀ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದ್ದರು. ಡಿ.ಕೆ.ಶಿವಕುಮಾರ್ ಸೇರಿದಂತೆ ರಾಜಕಾರಣಿಗಳು ಆಗಾಗ ಈ ಮಠಕ್ಕೆ ಹೋಗಿ, ಪೂಜೆ ಸಲ್ಲಿಸಿ, ಶ್ರೀಗಳ ಆಶೀರ್ವಾದವನ್ನು ಪಡೆಯುತ್ತಿರುತ್ತಾರೆ.

ಶ್ರೀಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಶ್ರೀಗಳು
ರಾಜಕೀಯದಲ್ಲಿ ಉನ್ನತ ಹುದ್ದೆ ಸಿಗುವಂತಾಗಲಿ ಎಂದು ಪ್ರಾರ್ಥಿಸಿ ಬಸವರಾಜ ಬೊಮ್ಮಾಯಿ ಪೂಜೆ ಸಲ್ಲಿಸಿದ್ದರು. "ಗುರುಗಳೇ ನನ್ನ ಬೆಳವಣಿಗೆಗೆ ನಿಮ್ಮ ಆಶೀರ್ವಾದ ಬೇಕು ಎಂದು ಬೊಮ್ಮಾಯಿಯವರು ನಮ್ಮಲ್ಲಿ ಬಂದು ಪ್ರಾರ್ಥಿಸಿದ್ದರು. ಕಾಡು ಸಿದ್ದೇಶ್ವರ ಗದ್ದುಗೆಯ ಮುಂದೆ ಸಂಕಲ್ಪ ಮಾಡಿ ಎಂದು ಹೇಳಿದ್ದೆ" ಎಂದು ಮಠದ ಶ್ರೀಗಳಾದ ಶ್ರೀಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಶ್ರೀಗಳು ಹೇಳಿದ್ದಾರೆ.

ಶ್ರೀರಾಮುಲು ಎರಡು ದಿನ ಮಠದಲ್ಲಿ ವಾಸ್ತವ್ಯ ಹೂಡಿ ಇಷ್ಟಲಿಂಗ ಪೂಜೆ ಸಲ್ಲಿಸಿದ್ದರು
"ಶ್ರೀರಾಮುಲು ಎರಡು ದಿನ ಮಠದಲ್ಲಿ ವಾಸ್ತವ್ಯ ಹೂಡಿ ಇಷ್ಟಲಿಂಗ ಪೂಜೆ ಸಲ್ಲಿಸಿದ್ದರು. ಅವರಿಗೂ ಸಂಕಲ್ಪ ಮಾಡಿದ ಹುದ್ದೆ ಸಿಗಲಿದೆ" ಎಂದು ಗಂಗಾಧರ ಶ್ರೀಗಳು ಹೇಳಿದ್ದಾರೆ. ಬಿ.ಶ್ರೀರಾಮುಲು ಅವರು ಹಿಂದಿನಿಂದಲೂ ಬಯಸಿದ್ದ ಉಪ ಮುಖ್ಯಮಂತ್ರಿ ಹುದ್ದೆ, ನೂತನ ಸಚಿವ ಸಂಪುಟದಲ್ಲಿ ಸಿಗುವುದು ಬಹುತೇಕ ಅಂತಿಮವಾಗಿದೆ.

ಯಡಿಯೂರಪ್ಪನವರು ಪೂರ್ಣಾವಧಿ ಅಧಿಕಾರ ನಡೆಸದೇ ಇರುವುದು ದುರದೃಷ್ಟ
"ಯಡಿಯೂರಪ್ಪನವರು ಪೂರ್ಣಾವಧಿ ಅಧಿಕಾರ ನಡೆಸದೇ ಇರುವುದು ದುರದೃಷ್ಟ. ಇಳಿ ವಯಸ್ಸಿನಲ್ಲೂ ಯುವಕರಂತೆ ಕೆಲಸ ನಿರ್ವಹಿಸಿದ್ದರು. ಈಗ ವೀರಶೈವ ಸಮುದಾಯದವರನ್ನೇ ಸಿಎಂ ಹುದ್ದೆಗೆ ಆಯ್ಕೆ ಮಾಡಿರುವುದು ಸಂತಶ ತಂದಿದೆ" ಎಂದು ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಶ್ರೀ ಗಳು ಹೇಳಿದ್ದಾರೆ.












Click it and Unblock the Notifications