ಸಮ್ಮಿಶ್ರ ಸರ್ಕಾರದ ಪತನದ ಸುದ್ದಿ, ಮೌನ ಮುರಿದ ದೇವೇಗೌಡರು!
ಬೆಂಗಳೂರು, ಆಗಸ್ಟ್ 31 : 'ಜೆಡಿಎಸ್ ಪಕ್ಷವಾಗಲಿ, ಕಾಂಗ್ರೆಸ್ ಆಗಲಿ ಬಿಜೆಪಿ ಜೊತೆ ಹೋಗಲು ಸಿದ್ಧವಿಲ್ಲ. ಆದ್ದರಿಂದ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ' ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.
ಶುಕ್ರವಾರ ಪದ್ಮನಾಭನಗರದ ನಿವಾಸದಲ್ಲಿ ಎಚ್.ಡಿ.ದೇವೇಗೌಡರು ಪತ್ರಿಕಾಗೋಷ್ಠಿ ನಡೆಸಿದರು. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ, ಸಿದ್ದರಾಮಯ್ಯ ಅವರ ಸಿಎಂ ಆಗುವ ಹೇಳಿಕೆ ಮುಂತಾದ ವಿಚಾರಗಳ ಕುರಿತು ಮೊದಲ ಬಾರಿಗೆ ಅವರು ಮಾತನಾಡಿದರು. ಸರ್ಕಾರ ಭದ್ರವಾಗಿದೆ ಎಂದು ಸ್ಪಷ್ಟಪಡಿಸಿದರು.
ಎಚ್.ಡಿ.ಕುಮಾರಸ್ವಾಮಿ ಸರ್ಕಾರ ಪತನವಾಗುವುದಿಲ್ಲ, 5 ಕಾರಣಗಳು!
'ಕಾಂಗ್ರೆಸ್ ಪಕ್ಷದಲ್ಲಿದ್ದ ಗೊಂದಲಗಳೆಲ್ಲಾ ನಿವಾರಣೆಯಾಗಿವೆ. ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲೇ ಇಂದು ಸಮನ್ವಯ ಸಮಿತಿ ಸಭೆ ನಡೆಯುತ್ತಿದೆ. ಸಭೆಯಲ್ಲಿ ಎಲ್ಲಾ ವಿಚಾರಗಳ ಕುರಿತು ಚರ್ಚೆ ನಡೆಯಲಿದೆ' ಎಂದು ಸ್ಪಷ್ಟಪಡಿಸಿದರು.
ಆರ್.ವಿ.ದೇಶಪಾಂಡೆ ಸಿಎಂ, ಕುಮಾರಸ್ವಾಮಿ ಹೇಳಿಕೆಗೆ ನೂರೆಂಟು ಅರ್ಥ!
'ನಾನು ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತೇನೆ. ರಾಜ್ಯದ ಜನರು ಬೆಂಬಲಿಸುವ ಭರವಸೆ ಇದೆ' ಎಂದು ಸಿದ್ದರಾಮಯ್ಯ ನೀಡಿದ್ದ ಹೇಳಿಕೆ ಭಾರಿ ಚರ್ಚೆಗೆ ಕಾರಣವಾಗಿತ್ತು. ಕಾಂಗ್ರೆಸ್-ಜೆಡಿಎಸ್ ಸರ್ಕಾರ ಪತನವಾಗಲಿದೆ ಎಂಬ ಸುದ್ದಿಗಳು ಹಬ್ಬಿದ್ದವು.
ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರಕ್ಕೆ 100 ದಿನ: ಸಾಧನೆಗೆ ಎಷ್ಟು ಅಂಕ?
ಗೊಂದಲ ಉಂಟಾಗಿತ್ತು
'ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬಿದ್ದು ಹೋಗುತ್ತದೆ ಎಂಬ ಗೊಂದಲ ಉಂಟಾಗಿತ್ತು. ಇಂದು ಬ್ರಿಟಿಷ್ ಹೈ ಕಮೀಷನರ್ ಸಹ ಇದನ್ನೇ ಕೇಳಿದರು. ಆದರೆ, ಗೊಂದಲಗಳೆಲ್ಲಾ ನಿವಾರಣೆಯಾಗಿವೆ. ಕುಮಾರಸ್ವಾಮಿ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ' ಎಂದು ದೇವೇಗೌಡರು ಹೇಳಿದರು.
'ಜೆಡಿಎಸ್ ಮತ್ತು ಕಾಂಗ್ರೆಸ್ ಬಿಜೆಪಿ ಜೊತೆ ಹೋಗಲು ಸಿದ್ದವಿಲ್ಲ. ಆದ್ದರಿಂದ, ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ' ಎಂದು ದೇವೇಗೌಡರು ಸ್ಪಷ್ಟಪಡಿಸಿದರು.
ಆರ್.ವಿ.ದೇಶಪಾಂಡೆ ಹೆಸರು ಏಕೆ ಬಂತು?
'ಧರ್ಮಸಿಂಗ್ ಅವರು ಮುಖ್ಯಮಂತ್ರಿಯಾಗುವ ಸಂದರ್ಭದಲ್ಲಿಯೂ ಆರ್.ವಿ.ದೇಶಪಾಂಡೆ ಅವರ ಹೆಸರು ಮುಖ್ಯಮಂತ್ರಿ ಹುದ್ದೆಗೆ ಕೇಳಿಬಂದಿತ್ತು. ಅವರು ಕೂಡಾ ಅನುಭವಿ. ಕೈಗಾರಿಕಾ ಸಚಿವರಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಹಾಗಾಗಿ ಅವರ ಹೆಸರು ಮತ್ತೆ ಮುಂಚೂಣಿಗೆ ಬಂದಿದೆ' ಎಂದು ದೇವೇಗೌಡರು ಹೇಳಿದರು.
ಸಮನ್ವಯ ಸಮಿತಿ ಸಭೆ
'ಇಂದು ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ಸಭೆ ನಡೆಯುತ್ತಿದೆ. ಎಲ್ಲಾ ಗೊಂದಲಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಜೆಡಿಎಸ್ ಮತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷರನ್ನು ಸಮಿತಿಗೆ ಸೇರಿಸಿಕೊಳ್ಳುವ ಬಗ್ಗೆ ಅಂತಿಮ ತೀರ್ಮಾನವನ್ನು ಇನ್ನೂ ಕೈಗೊಂಡಿಲ್ಲ' ಎಂದು ದೇವೇಗೌಡರು ಹೇಳಿದರು.
ಗೊಂದಲ ಉಂಟಾಗಿದ್ದು ಏಕೆ?
'ನಾನು ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತೇನೆ. ರಾಜ್ಯದ ಜನರು ಬೆಂಬಲಿಸುವ ಭರವಸೆ ಇದೆ' ಎಂದು ಸಿದ್ದರಾಮಯ್ಯ ನೀಡಿದ್ದ ಹೇಳಿಕೆಯಿಂದ ಮೈತ್ರಿ ಸರ್ಕಾರದ ಭವಿಷ್ಯದ ಬಗ್ಗೆ ಚರ್ಚೆ ಆರಂಭವಾಗಿತ್ತು.
ಗುರುವಾರ ದೆಹಲಿಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, 'ಮುಖ್ಯಮಂತ್ರಿ ಸ್ಥಾನಕ್ಕೆ ಆರ್.ವಿ.ದೇಶಪಾಂಡೆ ಅವರ ಹೆಸರು ಸಹ ಕೇಳಿಬರುತ್ತಿದೆ' ಎಂದು ಹೊಸ ಬಾಂಬ್ ಸಿಡಿಸಿದ್ದರು.
ಸರ್ಕಾರದಲ್ಲಿ ಗೊಂದಲವಿಲ್ಲ
ಗುರುವಾರ ರಾಹುಲ್ ಗಾಂಧಿ ಭೇಟಿ ಬಳಿಕ ಮಾತನಾಡಿದ್ದ ಎಚ್.ಡಿ.ಕುಮಾರಸ್ವಾಮಿ ಅವರು, 'ಸರ್ಕಾರದಲ್ಲಿ ಯಾವುದೇ ಗೊಂದಲಗಳು ಇಲ್ಲ. ಸಂಪುಟ ವಿಸ್ತರಣೆ, ನಿಗಮ-ಮಂಡಳಿ ನೇಮಕದ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಮನವಿ ಮಾಡಿದ್ದೇನೆ' ಎಂದು ಹೇಳಿದ್ದರು.