ಹಿಜಾಬ್ ವಿವಾದ: ಗೈರಾದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಮರು ಪರೀಕ್ಷೆ ಇಲ್ಲ!
ಬೆಂಗಳೂರು, ಮಾ. 21: ತರಗತಿಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನಿಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುವ ಮೂಲಕ ದ್ವಿತೀಯ ಪಿಯು ಪ್ರಾಯೋಗಿಕ ಪರೀಕ್ಷೆಗೆ ಗೈರು ಹಾಜರಾಗಿದ್ದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸದಿದರಲು ಪದವಿ ಪೂರ್ವ ಶಿಕ್ಷಣ ಮಂಡಳಿ ನಿರ್ಧರಿಸಿದೆ. ಇದರಿಂದ ಹಿಜಾಬ್ ಧರಿಸಿ ಹೋರಾಟ ನಡೆಸಿದ ವಿದ್ಯಾರ್ಥಿಗಳು ಮುಖ್ಯ ಪರೀಕ್ಷೆ ಬರೆದೇ ಉತ್ತೀರ್ಣವಾಗಬೇಕಾದ ಸಂಕಷ್ಟ ಎದುರಾಗಿದೆ.
ಕಳೆದ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಆಯೋಜಿಸಲಾಗಿತ್ತು. ಅಷ್ಟರಲ್ಲಾಗಲೇ ಹಿಜಾಬ್ ಕುರಿತ ವಿವಾದ ಹೈಕೋರ್ಟ್ ಮೆಟ್ಟಿಲೇರಿತ್ತು. ಒಂದು ಧರ್ಮ ಪ್ರತಿನಿಧಿಸುವ ಬಟ್ಟೆ ಧರಿಸದೇ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಬೇಕು ಎಂದು ಹೈಕೋರ್ಟ್ ಮಧ್ಯಂತರ ತೀರ್ಪು ನೀಡಿತ್ತು. ಇದರ ನಡುವೆಯೂ ಹಿಜಾಬ್ ಗೆ ಆಗ್ರಹಿಸಿ ಹೋರಾಟ ನಡೆಸಿದ್ದ ವಿದ್ಯಾರ್ಥಿಗಳು ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯಲು ಮುಂದಾಗಿದ್ದರು. ಇದಕ್ಕೆ ಸರ್ಕಾರ ಅವಕಾಶ ಕೊಟ್ಟಿರಲಿಲ್ಲ. ಇದೀಗ ದ್ವಿತೀಯ ಪಿಯುಸಿ ಮುಖ್ಯ ಪರೀಕ್ಷೆ ಸಮೀಪಿಸಿದ್ದು, ಪ್ರಾಯೋಗಿಕ ಮರು ಪರೀಕ್ಷೆ ನಡೆಸದಿರಲು ಪದವಿ ಪೂರ್ವ ಶಿಕ್ಷಣ ಮಂಡಳಿ ನಿರ್ಧರಿಸಿದೆ.
ಹೈಕೋರ್ಟ್ ಮಧ್ಯಂತರ ತೀರ್ಪಿನ ಬಳಿಕ ಹಿಜಾಬ್ ಧರಿಸಿ ಪ್ರಾಯೋಗಿಕ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿರಲಿಲ್ಲ. ಹೈಕೋರ್ಟ್ ಮಧ್ಯಂತರ ಆದೇಶದ ಬಳಿಕ ಆಯೋಜಿಸಿದ್ದ ಮರು ಪರೀಕ್ಷೆಯನ್ನಾದರೂ ವಿದ್ಯಾರ್ಥಿಗಳು ಬರೆಯಲು ಕೊಟ್ಟಿದ್ದ ಅವಕಾಶವನ್ನು ಬಳಿಸಿಕೊಳ್ಳದೇ ಪರೀಕ್ಷೆ ಬಹಿಷ್ಕರಿಸಿದ್ದರು. ಇದೀಗ ಅಂತಹ ವಿದ್ಯಾರ್ಥಿಗಳಿಗೆ ಮತ್ತೆ ಮರು ಪರೀಕ್ಷೆ ನಡೆಸದಿರಲು ಪದವಿ ಪೂರ್ವ ಶಿಕ್ಷಣ ಮಂಡಳಿ ತೀರ್ಮಾನಿಸಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
Recommended Video

ಎರಡು ದಿನಗಳ ಹಿಂದೆ ಹಿಜಾಬ್ ಕುರಿತ ಹೋರಾಟ ನಡೆಸಿದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆಗೆ ಮತ್ತೆ ಅವಕಾಶ ಕೊಡುವ ಸುಳಿವು ಸರ್ಕಾರ ನೀಡಿತ್ತು. ಇದೀಗ ಮರು ಪರೀಕ್ಷೆ ನಡೆಸದಿರಲು ಪರೀಕ್ಷಾ ಮಂಡಳಿ ತೀರ್ಮಾನಿಸಿದೆ. ಹೈಕೋರ್ಟ್ ಮಧ್ಯಂತರ ಆದೇಶ ಕೊಟ್ಟ ಬಳಿಕ ಹೋರಾಟ ನಿರತ ವಿದ್ಯಾರ್ಥಿಳಿಗೆ ನೀಡಿದ್ದ ಮರು ಪರೀಕ್ಷೆ ಅವಕಾಶವನ್ನು ಬಳಸಿಕೊಳ್ಳಬೇಕಿತ್ತು. ಹಿಜಾಬ್ ಕುರಿತು ಇದೀಗ ಅಂತಿಮ ತೀರ್ಪು ಬಂದಿದೆ.

ಶಾಲಾ- ಕಾಲೇಜು ಆಡಳಿತ ಮಂಡಳಿ ನಿಗದಿ ಮಾಡಿರುವ ಸಮವಸ್ತ್ರವನ್ನೇ ಧರಿಸಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ. ಸರ್ಕಾರದ ಸಮವಸ್ತ್ರ ಆದೇಶವನ್ನು ಪುರಸ್ಕರಿಸಿದೆ. ಹೀಗಾಗಿ ಹಿಜಾಬ್ ಗಾಗಿ ಪರೀಕ್ಷೆ ಬಹಿಷ್ಕರಿಸಿದ್ದ ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಿದೆ. ಮರು ಪರೀಕ್ಷೆಗೆ ಅವಕಾಶ ಕೊಟ್ಟರೂ, ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಬಂದಿದ್ದರು. ಇದೀಗ ಅವರಿಗೆ ಹೇಗೆ ಮರು ಪರೀಕ್ಷೆ ನಡೆಸಲು ಸಾಧ್ಯ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.

ಪ್ರಾಯೋಗಿಕ ಪರೀಕ್ಷೆಗೆ ಐಚ್ಛಿಕ ವಿಷಯ ಬಿಟ್ಟು ಇತರೆ ನಾಲ್ಕು ವಿಷಯಗಳಿಗೆ ತಲಾ 30 ಅಂಕ ಇರುತ್ತದೆ. ಉಳಿದ 70 ಅಂಕಗಳಿಗೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ. ಎರಡೂ ಅಂಕಗಳು ಒಗ್ಗೂಡಿಸಿದರೆ ಒಂದು ವಿಷಯಕ್ಕೆ 100 ಅಂಕವಾಗುತ್ತದೆ. ಇದೀಗ ಪ್ರಾಯೋಗಿಕ ಪರೀಕ್ಷೆಗೆ ಗೈರು ಹಾಜರಾದವರು ತಲಾ ಒಂದು ವಿಷಯಕ್ಕೆ 30 ಅಂಕ ಕಳೆದಕೊಳ್ಳಲಿದ್ದಾರೆ. ಉಳಿದ 70 ಅಂಕಗಳಿಗೆ ಥಿಯರಿ ಪರೀಕ್ಷೆ ಬರೆದು ಉತ್ತೀರ್ಣವಾಗಬೇಕಾಗುತ್ತದೆ. ಇಲ್ಲದಿದ್ದರೆ ಇಡೀ ಶೈಕ್ಷಣಿಕ ವರ್ಷವೇ ನಷ್ಟವಾಗಲಿದೆ. ಈ ವಿಚಾರ ಇದೀಗ ಹಿಜಾಬ್ ಗಾಗಿ ಆಗ್ರಹಿಸಿ ಹೋರಾಟ ನಡೆಸಿದ ವಿದ್ಯಾರ್ಥಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.












Click it and Unblock the Notifications