ವಿಜಯ್ ಒಬ್ಬ ರಾಜನಂತೆ ನಿಂತಿದ್ದಾರೆ: ದಳಪತಿ ಗೆಲುವಿಗೆ ನಟ ಶಿವಣ್ಣ ಮೆಚ್ಚುಗೆ
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು ಅಭೂತಪೂರ್ವ ಜಯ ಸಾಧಿಸಿರುವ ಬೆನ್ನಲ್ಲೇ, ಕನ್ನಡದ ಕರುನಾಡ ಚಕ್ರವರ್ತಿ ಡಾ. ಶಿವರಾಜ್ಕುಮಾರ್ ಅವರು ವಿಜಯ್ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಶುಭ ಹಾರೈಸಿರುವ ಶಿವಣ್ಣ, ಈ ಹಿಂದೆ ತಾವು ನೀಡಿದ್ದ ಒಂದು ಕುತೂಹಲಕಾರಿ ಹೇಳಿಕೆಯನ್ನು ಮತ್ತೆ ನೆನಪಿಸಿಕೊಂಡಿದ್ದಾರೆ.
ಟೀಕೆಗಳಿಗೆ ಮೌನವೇ ಉತ್ತರ
ಸತತ ರಾಜಕೀಯ ವಾಗ್ದಾಳಿಗಳ ನಡುವೆಯೂ ವಿಜಯ್ ತೋರಿದ ಸಂಯಮವನ್ನು ಶಿವಣ್ಣ ಕೊಂಡಾಡಿದ್ದಾರೆ. "ನಟ ವಿಜಯ್ ಅವರೇ, ಇದು ನೀವು ಪಡೆಯಲೇಬೇಕಾದ ಅತ್ಯಂತ ಅರ್ಹವಾದ ಗೆಲುವು. ನಿಮ್ಮ ಮೇಲೆ ತೀವ್ರವಾದ ವಾಗ್ದಾಳಿಗಳು ನಡೆದಾಗ ಮೌನವಾಗಿದ್ದು, ನಿಮ್ಮ ಕೆಲಸದ ಮೂಲಕವೇ ಉತ್ತರ ನೀಡುವುದು ನಿಜವಾದ ಮತ್ತು ಅತಿ ದೊಡ್ಡ ವಿಜಯ" ಎಂದು ಶಿವರಾಜ್ಕುಮಾರ್ ಹೇಳಿದ್ದಾರೆ.

TVK ಎಂದರೆ 'Try Vijay As King'
ಈ ಹಿಂದೆ ಪತ್ರಿಕಾಗೋಷ್ಠಿಯೊಂದರಲ್ಲಿ ವಿಜಯ್ ಅವರ ಪಕ್ಷದ ಹೆಸರಿನ ಬಗ್ಗೆ ಶಿವಣ್ಣ ನೀಡಿದ್ದ ವ್ಯಾಖ್ಯಾನ ಈಗ ನಿಜವಾಗಿದೆ. ಈ ಕುರಿತು ಬರೆದುಕೊಂಡಿರುವ ಅವರು, "ಹಿಂದೊಮ್ಮೆ ಪತ್ರಿಕಾಗೋಷ್ಠಿಯಲ್ಲಿ ನಾನು ತಮಾಷೆಯಾಗಿ 'TVK ಅಂದರೆ - Try Vijay As King' (ವಿಜಯ್ ಅವರನ್ನು ರಾಜನನ್ನಾಗಿ ನೋಡಿ) ಎಂದು ಹೇಳಿದ್ದೆ. ಇಂದು ನೀವು ಒಬ್ಬ ರಾಜನಂತೆ ಎತ್ತರವಾಗಿ ನಿಂತಿದ್ದೀರಿ" ಎಂದು ವಿಜಯ್ ಅವರ ರಾಜಕೀಯ ಯಶಸ್ಸನ್ನು ಶಿವಣ್ಣ ಶ್ಲಾಘಿಸಿದ್ದಾರೆ.
A well deserved victory @actorvijay To be silent during scathing attacks and let your work speak, is the biggest victory. During one of the interactions with the press I had in jest told ‘TVK - Stands for Try Vijay As King’ and today you’ve stood tall like a King. May you fullfil…
— DrShivaRajkumar (@NimmaShivanna) May 5, 2026
ವಿಜಯ್ ಅವರ ಮುಂದಿನ ರಾಜಕೀಯ ಹಾದಿಗೆ ಹಾರೈಸಿರುವ ಶಿವಣ್ಣ, "ತಮಿಳುನಾಡಿನ ಜನತೆಗೆ ನೀವು ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸುವಂತಾಗಲಿ ಮತ್ತು ರಾಜ್ಯದಲ್ಲಿ ಸದಾ ಪ್ರಗತಿ ಇರಲಿ" ಎಂದು ಹಾರೈಸಿದ್ದಾರೆ. ಶಿವರಾಜ್ಕುಮಾರ್ ಮತ್ತು ವಿಜಯ್ ನಡುವೆ ಮೊದಲಿನಿಂದಲೂ ಉತ್ತಮ ಸ್ನೇಹ ಸಂಬಂಧವಿದ್ದು, ಶಿವಣ್ಣ ಅವರು ವಿಜಯ್ ನಟನೆಯ 'ಲಿಯೋ' ಚಿತ್ರದ ಯಶಸ್ಸಿಗೂ ಶುಭ ಹಾರೈಸಿದ್ದರು. ಇದೀಗ ವಿಜಯ್ ಅವರು ರಾಜಕೀಯದಲ್ಲಿ 'ಕಿಂಗ್' ಆಗಿ ಹೊರಹೊಮ್ಮಿರುವುದಕ್ಕೆ ಇಡೀ ಸ್ಯಾಂಡಲ್ವುಡ್ ಪರವಾಗಿ ಹ್ಯಾಟ್ರಿಕ್ ಹೀರೋ ಸಂಭ್ರಮ ವ್ಯಕ್ತಪಡಿಸಿದ್ದಾರೆ.
ವಿಜಯ್ಗೆ ರಶ್ಮಿಕಾ ಮಂದಣ್ಣ ಅಭಿನಂದನೆ
ದಳಪತಿ ವಿಜಯ್ ಅವರ ಐತಿಹಾಸಿಕ ಗೆಲುವಿಗೆ ನಟಿ ರಶ್ಮಿಕಾ ಮಂದಣ್ಣ ಭರ್ಜರಿ ಶುಭ ಹಾರೈಕೆಗಳನ್ನು ತಿಳಿಸಿದ್ದಾರೆ. ವಿಜಯ್ ಅವರ ಈ ಹೊಸ ರಾಜಕೀಯ ಪಯಣದ ಬಗ್ಗೆ ರಶ್ಮಿಕಾ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. "ವಿಜಯ್ ಸರ್, ನಿಮಗೆ ಅಭಿನಂದನೆಗಳು. ನಿಮ್ಮ ಈ ಯಶಸ್ಸಿನ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ. ನಿಮ್ಮ ಈ ಹೊಸ ಯುಗವನ್ನುನೋಡಲು ನಾನು ತುಂಬಾ ಉತ್ಸುಕಳಾಗಿದ್ದೇನೆ. ನಿಮಗೆ ಒಳ್ಳೆಯದಾಗಲಿ ಸರ್" ಎಂದು ಬರೆದುಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಅವರು ವಿಜಯ್ ನಟನೆಯ ಬ್ಲಾಕ್ಬಸ್ಟರ್ ಸಿನಿಮಾ 'ವಾರಿಸು' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಆ ಸಮಯದಲ್ಲಿ ಇವರಿಬ್ಬರ ಜೋಡಿ ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿತ್ತು. ಈಗ ತಮ್ಮ ನೆಚ್ಚಿನ ನಟ ರಾಜಕೀಯದಲ್ಲಿ ಅಧಿಪತ್ಯ ಸಾಧಿಸಿರುವುದಕ್ಕೆ ರಶ್ಮಿಕಾ ಅವರು ಅತ್ಯಂತ ಸಂಭ್ರಮದಿಂದ ಪ್ರತಿಕ್ರಿಯಿಸಿದ್ದಾರೆ. ಈಗಾಗಲೇ ನಟ ಶಿವರಾಜ್ಕುಮಾರ್ ಸೇರಿದಂತೆ ದಕ್ಷಿಣ ಭಾರತದ ಹಲವು ಗಣ್ಯರು ವಿಜಯ್ ಅವರ ರಾಜಕೀಯ ಪ್ರವೇಶ ಮತ್ತು ಗೆಲುವನ್ನು ಕೊಂಡಾಡಿದ್ದಾರೆ. ಆ ಸಾಲಿಗೆ ಈಗ ರಶ್ಮಿಕಾ ಮಂದಣ್ಣ ಕೂಡ ಸೇರ್ಪಡೆಯಾಗಿದ್ದು, ವಿಜಯ್ ಅವರ ಪೊಲಿಟಿಕಲ್ ಇನ್ನಿಂಗ್ಸ್ ಉತ್ತಮವಾಗಿರಲಿ ಎಂದು ಹಾರೈಸಿದ್ದಾರೆ.













Click it and Unblock the Notifications