Rain Issues: ಗೋಡೆ ದುರಂತದಿಂದ ಎಚ್ಚೆತ್ತ ಪಾಲಿಕೆ: ನಾಗರಿಕರ ಸುರಕ್ಷತೆಗಾಗಿ ತುರ್ತು ಕಾರ್ಯಾಚರಣೆ
ಬೆಂಗಳೂರು: ಇಲ್ಲಿನ ಶಿವಾಜಿನಗರದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ಆವರಣದಲ್ಲಿ ಕಾಂಪೌಂಡ್ ಗೋಡೆ ಕುಸಿತದಿಂದ ಸಂಭವಿಸಿದ ದುರ್ಘಟನೆಯನ್ನು ಬೆಂಗಳೂರು ಪೂರ್ವ ನಗರ ಪಾಲಿಕೆ ಗಂಭೀರವಾಗಿ ಪರಿಗಣಿಸಿದೆ. ಸಾರ್ವಜನಿಕರಿಗೆ ಸುರಕ್ಷತೆಗೆ ಒತ್ತು ನೀಡುವ ನಿಟ್ಟಿನಲ್ಲಿ ತುರ್ತು ಕಾರ್ಯಾಚರಣೆಗಳನ್ನು ಕೈಗೊಂಡಿದೆ.
ಮುಂಗಾರು ಮಳೆಯ ಸಮಯದಲ್ಲಿ ಸಂಭವಿಸಬಹುದಾದ ಅಪಘಾತಗಳನ್ನು ತಡೆಯಲು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಿದ್ಧವಾಗಿದೆ. ಜನರ ಸುರಕ್ಷತೆಗೆ ಆದ್ಯತೆ ನಿಡಿದೆ. ಯಾವುದೇ ದುರ್ಘಟನೆ ಸಂಭವಿಸದಂತೆ ವಿಶೇಷ ಅಭಿಯಾನದ ಮೂಲಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪಾಲಿಕೆ ಅಯಕ್ತ ಡಿ.ಎಸ್. ರಮೇಶ್ ಅವರು ತಿಳಿಸಿದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲಿರುವ ಶಿಥಿಲಗೊಂಡಿರುವ ಕಟ್ಟಡಗಳು, ಕಾಪೌಂಡ್ ಗಳು, ತಡೆಗೋಡೆಗಳು ಸೇರಿದಂತೆ ಅಪಾಯಕಾರಿ ಹಾಗೂ ಅಸ್ಥಿರ ಕಟ್ಟಡಗಳನ್ನು ಗುರುತಿಸಿ ತೆರವುಗೊಳಿಸಲಾಗುತ್ತಿದೆ. ಮುಂದೆ ಮಳೆಗಾಲದಲ್ಲಿ ಮತ್ತೊಂದು ಯಾವು ಅವಘಡ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.
ತುರ್ತು ಕಾರ್ಯಾಚರಣೆ ಅಂಶಗಳು
* ಪಾಲಿಕೆ ವ್ಯಾಪ್ತಿಯಲ್ಲಿ ಹಳೆಯ ಶಿಥಿಲಾವಸ್ಥೆ, ತ್ಯಜಿಸಲ್ಪಟ್ಟ, ಬೆಂಕಿ ಅವಘಡಕ್ಕೊಳಗಾದ ಅಥವಾ ಭಾಗಶಃ ಧ್ವಂಸಗೊಂಡ ಕಟ್ಟಡಗಳನ್ನು ಗುರುತಿಸಿ ತೆರವಿಗೆ ಕ್ರಮ ಜರುಗಿಸುವುದು.
* ಶಾಲೆಗಳು, ಆಸ್ಪತ್ರೆಗಳು, ಮಾರುಕಟ್ಟೆಗಳು ಮತ್ತು ಉದ್ಯಾನಗಳ ಸಮೀಪದ ಕಾಂಪೌಂಡ್ ಗೋಡೆಗಳು ಹಾಗೂ ರಿಟೈನಿಂಗ್ ಗೋಡೆಗಳು ಹಾಗೂ ಕಾಲುವೆ ಪಕ್ಕದ ಗೋಡೆಗಳ ಪರಿಶೀಲನೆ
* ದುರ್ಬಲ ಕಲ್ವರ್ಟ್ಗಳು, ಹಳೆಯ ಸ್ಲ್ಯಾಬ್ಗಳು ಹಾಗೂ ಬಿರುಕು ಬಿದ್ದ ಕಟ್ಟಡದ ರಚನೆಗಳು ಹೊಂದಿರುವ ಕಟ್ಟಡಗಳ ಮೇಲೆ ನಿಗಾ.
* ನಿರ್ಮಾಣ ಸ್ಥಳಗಳ ತಾತ್ಕಾಲಿಕ ಅಸುರಕ್ಷಿತ ಸ್ಕಾಫೋಲ್ಡಿಂಗ್ಗಳು, ಹೋರ್ಡಿಂಗ್ಗಳು ಹಾಗೂ ಕಂಬಗಳು ತೆರವಿಗೆ ಕ್ರಮ ಕೈಗೊಳ್ಳುವುದು.
* ಮಣ್ಣು ಕುಸಿತ ಅಥವಾ ನೀರಿನ ಹರಿವಿನಿಂದ ದುರ್ಬಲಗೊಂಡ ಅಡಿಪಾಯಗಳು ಹೊಂದಿರುವ ಕಟ್ಟಡಗಳು ಸೇರಿದಂತೆ ಈ ಕಾರ್ಯಾಚರಣೆಯಲ್ಲಿ ಅಪಾಯಕಾರಿ ರಚನೆಗಳನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಆಯಕ್ತರು ತಿಳಿಸಿದ್ದಾರೆ.
2 ಮತ್ತು 5ದಿನದಲ್ಲಿ ಕಾರ್ಯಾಚರಣೆ
ವಾರ್ಡ್ವಾರು ಅಪಾಯಕಾರಿ ಕಟ್ಟಡಗಳ ಪ್ರಾಥಮಿಕ ಪಟ್ಟಿಯನ್ನು ಮುಂದಿನ 48 ಗಂಟೆಗಳೊಳಗೆ ಸಲ್ಲಿಸಬೇಕಿದೆ. ಇನ್ನು 5 ದಿನಗಳೊಳಗೆ ಫೋಟೋಗಳ ಸಹಿತ ವಿವರವಾದ ಪರಿಶೀಲನಾ ವರದಿ ಸಲ್ಲಿಸುವಂತೆ ತಿಳಿಸಿರುವ ಆಯುಕ್ತರು ಅಪಾಯಕಾರಿ ಕಟ್ಟಡಗಳ ತೆರವಿಗೆ ತಕ್ಷಣವೇ ಕ್ರಮ ಕೈಗೊಳ್ಳಲು ವಿಭಾಗದ ಕಾರ್ಯಪಾಲಕ ಅಭಿಯಂತರಿಗೆ ತಿಳಿಸಿದ್ದಾರೆ.
ಹೆಚ್ಚುವರಿ ಸುರಕ್ಷತಾ ಕ್ರಮಗಳು ಹೀಗಿವೆ
* ಹಳೆಯ, ಶಿಥಿಲಗೊಂಡಿರುವ ಅಪಾಯಕಾರಿ ಕಟ್ಟಡಗಳು ಹಾಗೂ ರಚನೆಗಳು ಇರುವ ಪ್ರದೇಶಗಳಲ್ಲಿ ಅಪಾಯಕಾರಿ ಪ್ರದೇಶಗಳನ್ನು ಬ್ಯಾರಿಕೇಡ್ ಮಾಡಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಎಚ್ಚರಿಕೆ ಫಲಕ ಅಳವಡಿಕೆ.
* ಜೀವಾಪಾಯ ಇರುವ ಪ್ರದೇಶಗಳಲ್ಲಿ ತಕ್ಷಣ ಜನರನ್ನು ತೆರವುಗೊಳಿಸುವುದು. ಅಪಾಯಕಾರಿ ಸ್ಥಳಗಳ ಸಮೀಪ ವಾಹನ ನಿಲುಗಡೆ, ವಾಹನ ಸಂಚಾರ, ವ್ಯಾಪಾರ ಚಟುವಟಿಕೆ ಹಾಗೂ ಜನಸಮೂಹವನ್ನು ನಿರ್ಬಂಧ ಹೇರುವುದು.
* ವಿದ್ಯುತ್, ನೀರು ಹಾಗೂ ಅನಿಲ ಸಂಪರ್ಕ ಕಡಿತಕ್ಕೆ ಬೆಸ್ಕಾಂ, ಜಲಮಂಡಳಿ ಹಾಗೂ ಗೇಲ್ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ಸೂಕ್ತ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು.
ಸಾರ್ವಜನಿಕರು ದೂರು ನೀಡಿ
ಸಾರ್ವಜನಿಕರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಶಿಥಿಲಗೊಂಡಿರುವ, ಹಳೆಯ ಕಟ್ಟಡಗಳು, ಅಪಾಯಕಾರಿ ಕಟ್ಟಡ ರಚನೆಗಳು ಕಂಡುಬಂದಲ್ಲಿ ಕೂಡಲೇ ನಗರ ಪಾಲಿಕೆ ಕಂಟ್ರೋಲ್ ರೂಮ್ ಸಂಖ್ಯೆ 9480685706ಗೆ ಮಾಹಿತಿ ನೀಡಬೇಕು. ಅಪಾಯಕಾರಿ ಕಟ್ಟಡಗಳ ಬಳಿ ಆಶ್ರಯ ಪಡೆಯುವುದು, ನಿಲ್ಲುವುದು ಸಂಚರಿಸುವುದು, ಹಾಗೂ ವ್ಯಾಪಾರ ಮಾಡುವುದನ್ನು ತಪ್ಪಿಸುವಂತೆ ಸಾರ್ವಜನಿಕರಲ್ಲಿ ಆಯುಕ್ತರು ಮನವಿ ಮಾಡಿದ್ದಾರೆ.














Click it and Unblock the Notifications