'ಕಿಮ್ಮನೆ ರತ್ನಾಕರ ರಾಜೀನಾಮೆ ಅಗತ್ಯವಿಲ್ಲ'
ಬೆಂಗಳೂರು, ಮಾರ್ಚ್ 31 : 'ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪಶ್ನೆ ಪತ್ರಿಕೆ ಸೋರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಕಿಮ್ಮನೆ ರತ್ನಾಕರ ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಗುರುವಾರ ವಿಧಾನಸೌಧದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, 'ಪೋಷಕರು ಮತ್ತು ವಿದ್ಯಾರ್ಥಿಗಳು ಆತಂಕಪಡುವ ಅಗತ್ಯವಿಲ್ಲ. ಪಶ್ನೆ ಪತ್ರಿಕೆ ಸೋರಿಕೆ ಮಾಡಿದ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುತ್ತದೆ' ಎಂದರು. ['ಇಂದು ಸಂಜೆಯೊಳಗೆ ಮರು ಪರೀಕ್ಷೆ ದಿನಾಂಕ ಘೋಷಣೆ']

'ಸಚಿವರ ಜೊತೆ ಈ ಕುರಿತು ದೂರವಾಣಿ ಮೂಲಕ ಮಾತುಕತೆ ನಡೆಸಿದ್ದೇನೆ. ಮರು ಪರೀಕ್ಷೆ ದಿನಾಂಕವನ್ನು ಇಂದು ಸಂಜೆಯೊಳಗೆ ಪ್ರಕಟಿಸಲಾಗುತ್ತದೆ. ಪಶ್ನೆ ಪತ್ರಿಕೆ ಸೋರಿಕೆ ವಿಚಾರಕ್ಕಾಗಿ ಸಚಿವರು ರಾಜೀನಾಮೆ ನೀಡುವ ಅಗತ್ಯವಿಲ್ಲ' ಎಂದು ಸ್ಪಷ್ಟಪಡಿಸಿದರು. [ಇಂದು ನಡೆಯಬೇಕಿದ್ದ ರಸಾಯನಶಾಸ್ತ್ರ ಮರು ಪರೀಕ್ಷೆ ರದ್ದು]
ಪರೀಕ್ಷೆ ರದ್ದು : ಗುರುವಾರ ಮಾರ್ಚ್ 31ರಂದು ನಡೆಯಬೇಕಿದ್ದ ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಮರು ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಮಾರ್ಚ್ 21ರಂದು ನಡೆದ ಪರೀಕ್ಷೆಯನ್ನು ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣ ರದ್ದುಗೊಳಿಸಿ, ಇಂದು ಮರು ಪರೀಕ್ಷೆ ನಡೆಸಲು ಆದೇಶ ನೀಡಲಾಗಿತ್ತು. ಇಂದು ಪುನಃ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣ ಪರೀಕ್ಷೆ ರದ್ದಾಗಿದೆ.
ಸಚಿವರು ಹೇಳುವುದೇನು? : ಗುರುವಾರ ಬೆಳಗ್ಗೆ ಪ್ರತಿಪಕ್ಷದ ಗದ್ದಲದ ನಡುವೆಯೇ ವಿಧಾನಸಭೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಹೇಳಿಕೆ ನೀಡಿರುವ ಸಚಿವ ಕಿಮ್ಮನೆ ರತ್ನಾಕರ್ ಅವರು, 'ಪಿಯು ಮಂಡಳಿಯಿಂದ ತಪ್ಪಾಗಿದೆ ನಿಜ. ಇಲಾಖೆಯ ನಿರ್ದೇಶಕರೇ ಇದಕ್ಕೆ ನೇರ ಹೊಣೆಗಾರರು. ಗುರುವಾರ ಸಂಜೆಯೊಳಗೆ ಮರು ಪರೀಕ್ಷೆ ದಿನಾಂಕವನ್ನು ಪ್ರಕಟಿಸಲಾಗುತ್ತದೆ' ಎಂದು ಹೇಳಿದರು.
'ಇಲಾಖೆಯಲ್ಲಿ ಪರೀಕ್ಷೆ ನಡೆಸುವ ಜವಾಬ್ದಾರಿ ಹೊತ್ತಿರುವ ತಂಡವನ್ನು ಸಂಪೂರ್ಣವಾಗಿ ಬದಲಾವಣೆ ಮಾಡಲಾಗುತ್ತದೆ. ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಜೊತೆಗೂ ಸಭೆ ನಡೆಸಿದ್ದೇನೆ. ಪತ್ರಿಕೆ ಸೋರಿಕೆಯಲ್ಲಿ ಯಾವುದೇ ಅಧಿಕಾರಿಗಳು ಭಾಗಿಯಾಗಿದ್ದರೂ, ಅವರನ್ನು ಅಮಾನತು ಮಾಡಲು ಸೂಚನೆ ನೀಡಿದ್ದೇನೆ' ಎಂದರು.












Click it and Unblock the Notifications