ಮರಳಿ ಬಿಜೆಪಿಗೆ ಬರ್ತಾರಾ ಜನಾರ್ದನ ರೆಡ್ಡಿ: ಇಲ್ಲಿದೆ ರೆಡ್ಡಿ ಕೊಟ್ಟ ಮಹತ್ವದ ಮಾಹಿತಿ
ಬೆಂಗಳೂರು, ನವೆಂಬರ್ 25: ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ ವೈ ವಿಜಯೇಂದ್ರ ನೇಮಕವಾದ ಬೆನ್ನಲ್ಲೇ ಪಕ್ಷ ಸಂಘಟನೆಗೆ ಮುಂದಾಗಿದೆ. ಗಣಿಧಣಿ ಹಾಗೂ ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರನ್ನ ಮರಳಿ ಪಕ್ಷಕ್ಕೆ ಕರೆತರುವ ನಿಟ್ಟಿನಲ್ಲಿ ಬಿಜೆಪಿ ನಾಯಕರು ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಈ ಕುರಿತು ಮಾಜಿ ಸಚಿವ ಜನಾರ್ದನ ರೆಡ್ಡಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನನ್ನ ಜತೆ ಯಾವುದೇ ರಾಷ್ಟ್ರೀಯ ಪಕ್ಷ ಮಾತುಕತೆ ನಡೆಸಿಲ್ಲ. ಸದ್ಯ ನಾವು ಸ್ವತಂತ್ರ ವಾಗಿ ಸ್ಪರ್ಧೆ ಮಾಡುವ ಚಿಂತನೆ ಮಾಡಿದ್ದೇವೆ, ನನ್ನನ್ನ ಬೇರೆ ಪ್ರಾದೇಶಿಕ ಪಕ್ಷದ ಜತೆ ಹೋಲಿಕೆ ಮಾಡಬೇಡಿ. ಪರಿಸ್ಥಿತಿ ಗೆ ತಕ್ಕಂತೆ ಬದಲಾಯಿಸಲ್ಲ, ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇವೆ. ಇನ್ನೂ ಸಮಯ ಇದೆ ಮಾತನಾಡುತ್ತೇನೆ ಎಂದು ಹೇಳಿದರು.

ಪಕ್ಷ ಸ್ಥಾಪನೆ ಮಾಡಿದ ಬಳಿಕ ನನಗೆ ಕೇವಲ ನಾಲ್ಕು ತಿಂಗಳ ಅವಕಾಶ ಇತ್ತು. ಬಳ್ಳಾರಿಗೆ ನಾನು ಹೋಗದೇ ಇರುವಂತಹ ಸ್ಥಿತಿಯಲ್ಲಿ ಕೂಡಾ ರಾಷ್ಟ್ರೀಯ ಪಕ್ಷಗಳಿಗೆ ಒಳ್ಳೆಯ ಫೈಟ್ ಕೊಟ್ಟಿದ್ದೇವೆ. ಪ್ರಾದೇಶಿಕ ಪಕ್ಷಗಳು ಆರಂಭವಾಗುವುದೇ ಒಂದು ಎರಡು ಸೀಟುಗಳಿಂದ. ಬಿಜೆಪಿ ಕೂಡಾ ಎರಡು ಸೀಟ್ಗಳಿಂದಲೇ ಆರಂಭವಾಗಿದ್ದು. ಇಂದು ಕೆಆರ್ಪಿಪಿ ಒಂದು ಸೀಟ್ ನಿಂದ ಆರಂಭವಾಗಿದೆ.
2028ರ ವಿಧಾನಸಭಾ ಚುನಾವಣೆಗೆ ಇಡೀ ರಾಜ್ಯಕ್ಕೆ ನಾನು ತಲುಪುವ ಆತ್ಮ ವಿಶ್ವಾಸ ಇದೆ. ವಿಶ್ವಾಸದಿಂದಲೇ ನಾನು ಗಂಗಾವತಿ ಕ್ಷೇತ್ರಕ್ಕೆ ಹೋಗಿದ್ದೆ. ಬೇರೆಯವರ ರೀತಿ ನಾನು ಎರಡೆರಡು ಕ್ಷೇತ್ರಗಳಲ್ಲಿ ಸ್ಫರ್ಧೆ ಮಾಡಲಿಲ್ಲ. ಗಂಗಾವತಿಯಲ್ಲಿ ರಾಷ್ಟ್ರೀಯ ಪಕ್ಷಗಳು ಹಿಂದೂ-ಮುಸ್ಲಿಂ ಸಖ್ಯತೆಯನ್ನು ಒಡೆದು ಹಾಕಿದ್ದರು. 2028ರ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ.
100 ರಿಂದ 113 ಕ್ಕೂ ಹೆಚ್ಚು ಸೀಟ್ ಗಳನ್ನು ಗೆದ್ದು ಅಧಿಕಾರಕ್ಕೆ ಬರುತ್ತೇವೆ. ಬೇರೆ ಬೇರೆ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಸಾಧನೆ ಮಾಡಿವೆ. ಕರ್ನಾಟಕದಲ್ಲಿ ಈವರೆಗೆ ಪ್ರಾದೇಶಿಕ ಪಕ್ಷ ಸಾಧನೆ ಮಾಡಿಲ್ಲ ಅನ್ನೋದನ್ನು ನಾನು ಸುಳ್ಳು ಮಾಡುತ್ತೇನೆ ಎಂದು ಹೇಳಿದರು.
ಜಾತಿ ಜನಗಣತಿ ಆಧಾರದಲ್ಲಿ ಸಮಾಜದಲ್ಲಿ ಒಡಕು ಮೂಡಿಸುವ ಕೆಲಸ ಆಗುತ್ತಿದೆ. ಇಲ್ಲಿನ ರಾಜ್ಯ ಸರ್ಕಾರ ಸಮಾಜದಲ್ಲಿ ಜಾತಿ ಒಡಕು ತರುತ್ತಿದೆ. ದೆಹಲಿಯಲ್ಲಿ ಇರುವ ಸರ್ಕಾರ ಹಿಂದುತ್ವದ ಬಗ್ಗೆ ಮಾತ್ರ ಮಾತಾಡುತ್ತದೆ. ನಮ್ಮ ಪಕ್ಷ ಎಲ್ಲಾ ಸಮುದಾಯಗಳ ಪರ, ಏಳಿಗೆ ಬಯಸುತ್ತದೆ. ಬ್ರಿಟಿಷರ ಕಾಲದಲ್ಲೇ ಜಾತಿ ಜನಗಣತಿ ಆಗಿತ್ತು. ನಂತರದ ಕಾಲದಲ್ಲಿ ಸಾಕಷ್ಟು ಆಯೋಗಗಳು ಜಾತಿ ಗಣತಿ ಮಾಡಿವೆ. ಕಾಕಾ ಸಾಹೇಬ್ ಆಯೋಗ 1953 ರಲ್ಲಿ ಜಾತಿ ಗಣತಿ ಮಾಡಿತ್ತು.
2399 ಜಾತಿಗಳ ಪೈಕಿ 837 ಅತೀ ಹಿಂದುಳಿದ ಜಾತಿಗಳಿವೆ ರಾಜ್ಯದಲ್ಲಿ ಅಂತ ಆ ವರದಿಯಲ್ಲಿದೆ. ಅಧಿಕಾರಕ್ಕೋಸ್ಕರ ಪಕ್ಷಗಳು ಸಮಾಜದಲ್ಲಿ ಒಡಕು ತರುತ್ತಿವೆ. ಕಾಂಗ್ರೆಸ್ ನಲ್ಲೇ ಜಾತಿ ಜನಗಣತಿ ಬಗ್ಗೆ ಗೊಂದಲಗಳಿವೆ. ವೈಜ್ಞಾನಿಕವಾಗಿ ಜಾತಿ ಜನಗಣತಿ ಆಗಿದೆಯಾ ಅಂತ ಸರ್ಕಾರ ಸ್ಪಷ್ಟಪಡಿಸಿಲ್ಲ. ಅವೈಜ್ಞಾನಿಕವಾಗಿ ಜಾತಿ ಜನಗಣತಿ ಮಾಡಲಾಗಿದೆ. ಧರ್ಮಗಳ ನಡುವೆ, ಜಾತಿಗಳ ನಡುವೆ ದ್ವೇಷ ಮೂಡಬಹುದು ಎಂದು ಹೇಳಿದರು.












Click it and Unblock the Notifications