ರಾಜ್ಯೋತ್ಸವಕ್ಕೆ ನಿರ್ಬಂಧ : ಕನ್ನಡ ಹೋರಾಟಗಾರರು ಏನಂತಾರೆ?
ಬೆಂಗಳೂರು, ಅಕ್ಟೋಬರ್. 30: ಕನ್ನಡ ರಾಜ್ಯೋತ್ಸವಕ್ಕೆ ಸಂಬಂಧಿಸಿ ಬೆಂಗಳೂರು ಪೊಲೀಸರು ನೀಡಿರುವ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಕನ್ನಡ ಪರ ಸಂಘಟನೆಗಳು ಸಾಮಾಜಿಕ ಜಾಲತಾಣಗಳ ಮೂಲಕ ತನ್ನ ಅಸಮಾಧಾನ ಹೊರಹಾಕುತ್ತಿವೆ.
ಈ ಬಗ್ಗೆ ಒನ್ ಇಂಡಿಯಾ ಕನ್ನಡದೊಂದಿಗೆ ಮಾತನಾಡಿದ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್, ಪೊಲೀಸ್ ಆಯುಕ್ತರ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಯಾರದ್ದೋ ಮಾತು ಕೇಳಿ ಆಯುಕ್ತರು ಇಂಥ ಆದೇಶ ಹೊರಡಿಸಿರಬಹುದು. ನಮ್ಮ ನೆಲದಲ್ಲಿ ನಮ್ಮ ನಾಡಿನ ಹಬ್ಬ ಆಚರಣೆ ಮಾಡಲು ಸೀಮಿತ ಅವಧಿ ಅಂದರೆ ಅರ್ಥ ಏನು? ನವೆಂಬರ್ ಒಂದರಂದು ರಾಜ್ಯೋತ್ಸವ ಆಚರಣೆಯ ನಂತರ ಎಲ್ಲರೂ ಸೇರಿ ಹೋರಾಟ ಆರಂಭಿಸುತ್ತೇವೆ ಎಂದು ಹೇಳಿದರು.[ತಿಂಗಳು ಕಾಲ ರಾಜ್ಯೋತ್ಸವ ಆಚರಣೆ ಮಾಡುವಂತಿಲ್ಲ]
ಭದ್ರತೆ ನೆಪ ಒಡ್ಡಿ, ಸಂಚಾರಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣ ನೀಡಿ ರಾಜ್ಯೋತ್ಸವ ಆಚರಣೆಗೆ ನಿರ್ಭಂಧ ಹಾಕಿರುವುದು ಸರಿಯಲ್ಲ. ಕರ್ನಾಟಕದ ರಾಜಧಾನಿಯಲ್ಲೇ ಕನ್ನಡ ಹಬ್ಬಕ್ಕೆ ಅವಕಾಶವಿಲ್ಲವೇ? ಎಂದು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ರಾಜ್ಯೋತ್ಸವ ಸಂಭ್ರಮದ ಮೇಲಿನ ನಿರ್ಬಂಧಕ್ಕೆ ಸಂಬಂಧಿಸಿ ಯಾರು ಏನು ಎಂದರು ಎಂಬುದನ್ನು ನೋಡಿಕೊಂಡು ಬರೋಣ...

ವಾಟಾಳ್ ನಾಗರಾಜ್
ಕನ್ನಡ ರಾಜ್ಯೋತ್ಸವ ಹಬ್ಬ ವರ್ಷವಿಡೀ ನಡೆಯಬೇಕು, ನಡೆಯುತ್ತದೆ. ಅದನ್ನು ತಡೆಯಲು ಪೊಲೀಸರ ಆದೇಶದಿಂದ ಸಾಧ್ಯವಿಲ್ಲ. ಇಂಥ ಆದೇಶಗಳ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಬಹಿರಂಗ ಮಾಡುತ್ತೇವೆ. ನಮ್ಮ ಹೋರಾಟ ನಿರಂತರ.

ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡ
ರಾಜ್ಯೋತ್ಸವ ನಿತ್ಯೋತ್ಸವವಾಗಬೇಕು. ಯಾರ ಹಿತ ಕಾಯಲು ಪೊಲೀಸರು ಇಂಥ ಆದೇಶ ಹೊರಡಿಸಿದ್ದಾರೋ ಗೊತ್ತಿಲ್ಲ. ಇದನ್ನು ಯಾವೊಬ್ಬ ಕನ್ನಡಿಗನೂ ಪಾಲನೆ ಮಾಡಲು ಸಾಧ್ಯವಿಲ್ಲ.

ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ
ರಾಜಧಾನಿಯಲ್ಲಿ ಕನ್ನಡ ಕಳೆಗುಂದುತ್ತಿದೆ. ಇಂತಹ ಸಂದರ್ಭದಲ್ಲಿ ಒಂದು ತಿಂಗಳು ಹಾಡು, ಕುಣಿತ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ಕನ್ನಡದ ವಾತಾವರಣ ಸೃಷ್ಟಿಯಾಗುತ್ತಿತ್ತು. ಇದಕ್ಕೆ ಕಡಿವಾಣ ಹಾಕಲು ಹೊರಟಿರುವುದು ಕನ್ನಡಿಗರ ದೌರ್ಭಾಗ್.

ಹೆಚ್ಚುವರಿ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ
ರಸ್ತೆ ಮಧ್ಯೆ ಪೆಂಡಾಲ್ಗಳನ್ನು ಹಾಕಿ ತಿಂಗಳುಗಟ್ಟಲೇ ಕಾರ್ಯಕ್ರಮ ನಡೆಸುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ಇದಕ್ಕೆ ಅನುಮತಿ ನೀಡಬಾರದೆಂದು ಕೆಲ ಸಾರ್ವಜನಿಕ ಹಿತರಕ್ಷಣಾ ಸಂಘಟನೆಗಳು ಮನವಿ ಮಾಡಿದ್ದವು. ಈ ಬಗ್ಗೆ ಎಲ್ಲ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಕ್ರಮ ತೆಗೆದುಕೊಳ್ಳಲಾಗಿದೆ.

ಕಮಿಷನರ್ ಎನ್.ಎಸ್.ಮೇಘರಿಕ್
ತಿಂಗಳುಗಟ್ಟಲೇ ಕಾರ್ಯಕ್ರಮ ನಡೆಸುವುದರಿಂದ ಭದ್ರತೆ ಒದಗಿಸುವುದು ಕಷ್ಟವಾಗುತ್ತದೆ. ಹೊಸ ಆದೇಶ ಉಲ್ಲಂಘಿಸಿದರೆ ಸಂಘಟಕರ ವಿರುದ್ಧ ಕ್ರಮ ಜರುಗಿಸಲಾಗುವುದು.

ಕಪ್ಪು ಪಟ್ಟಿ ಪ್ರತಿಭಟನೆ
ಹೈದರಾಬಾದ್ ಕರ್ನಾಟಕ ಭಾಗದ ಜನರಿಗೆ ಸಿಗಬೇಕಾದ ಸೌಲಭ್ಯವನ್ನು ರಾಜ್ಯ ಸರ್ಕಾರ ಬೇರೆಡೆ ವರ್ಗಾಯಿಸುತ್ತಿದೆ ಎಂದು ಆರೋಪಿಸಿ, ನವೆಂಬರ್ 1ರಂದು ರಾಜ್ಯೋತ್ಸವ ಬಹಿಷ್ಕರಿಸಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಲು ಹೈದರಾಬಾದ್ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ತೀರ್ಮಾನಿಸಿದೆ. ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಉದಯಕುಮಾರ ಎಸ್.ಖೇಳಗಿಕರ್ ಈ ವಿಷಯ ತಿಳಿಸಿದ್ದಾರೆ.












Click it and Unblock the Notifications