ರಾಯಣ್ಣ ಬ್ರಿಗೇಡ್ ಕಾವು: ಈಶ್ವರಪ್ಪನವರಿಗೆ 5 ಪ್ರಶ್ನೆಗಳು
ಈಶ್ವರಪ್ಪ ಅವರ ವಿರುದ್ಧ ಬಿಜೆಪಿ ಶಿಸ್ತು ಕ್ರಮ ತೆಗೆದುಕೊಳ್ಳುತ್ತದಂತೆ. ರಾಯಣ್ಣ ಬ್ರಿಗೇಡ್ ಜತೆ ಗುರುತಿಸಿಕೊಳ್ಳಬೇಡಿ ಅಂದರೂ ಮಾತು ಮೀರಿದ್ದಾರಂತೆ. ಇಂಥ ಸುದ್ದಿಗೆ ಸ್ವತಃ ಈಶ್ವರಪ್ಪ ಉತ್ತರಿಸಿದ್ದಾರೆ, ಒನ್ಇಂಡಿಯಾ ಕನ್ನಡ ಸಂದರ್ಶನದಲ್ಲಿ.
ಬೆಂಗಳೂರು, ಡಿಸೆಂಬರ್ 10: ನನ್ನ ವಿರುದ್ಧ ಯಾವುದೇ ಶಿಸ್ತು ಕ್ರಮ ತೆಗೆದುಕೊಳ್ಳುವ ವಿಚಾರವೇ ಇಲ್ಲ. ಈಗೆಲ್ಲ ಹರಿದಾಡುತ್ತಿರುವುದು ಸುಳ್ಳು ಸುದ್ದಿ ಎಂದು ಮಾತಿಗಾರಂಭಿಸಿದರು ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ.
ಯಾವುದೇ ಉದ್ವೇಗ ಇಲ್ಲದ ಧ್ವನಿಯಲ್ಲೇ ಮಾತನಾಡಿದ ಅವರು, ರಾಯಣ್ಣ ಬ್ರಿಗೇಡ್ ಸಂಘಟನೆ ಅರಂಭದ ಉದ್ದೇಶವನ್ನು ಮತ್ತೊಮ್ಮೆ ಹೇಳಿದರು. ಸಮಾವೇಶದಲ್ಲಿ ಭಾಗಿಯಾಗಿದ್ದನ್ನು ಸಮರ್ಥಿಸಿಕೊಂಡರು.
ರಾಯಣ್ಣ ಬ್ರಿಗೇಡ್ ನಿಂದ ಬೆಳಗಾವಿಯಲ್ಲಿ ನಡೆದ ಸಮಾವೇಶದಲ್ಲಿ ಭಾಗಿಯಾಗಿದ್ದ ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹಾಗೂ ಇತರ ಬಿಜೆಪಿ ನಾಯಕರ ವಿರುದ್ಧ ಶಿಸ್ತಿನ ಕ್ರಮ ತೆಗೆದುಕೊಳ್ಳುವ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮಲಾಲ್ ಈ ಬಗ್ಗೆ ಸೂಚನೆ ನೀಡಿದ್ದಾರೆ ಎಂಬುದು ಕೂಡ ಮಹತ್ವ ಪಡೆದುಕೊಂಡಿದೆ.[ರಾಯಣ್ಣ ಬ್ರಿಗೇಡ್: ಮಾಜಿ ಸಚಿವ ಸೊಗಡು ಶಿವಣ್ಣ ಸಂದರ್ಶನ]

ಆದರೆ, ಈ ಸುದ್ದಿಯನ್ನು ಸ್ವತಃ ಈಶ್ವರಪ್ಪನವರು ಅಲ್ಲಗಳೆದಿದ್ದಾರೆ. ಶಿಸ್ತು ಕ್ರಮದ ಬಗ್ಗೆ ಪ್ರಶ್ನಿಸಲು ಒನ್ ಇಂಡಿಯಾ ಕನ್ನಡದಿಂದ ಅವರನ್ನು ಸಂಪರ್ಕಿಸಿದಾಗ ಇತ್ತೀಚಿನ ಬೆಳವಣಿಗೆ, ಶಿಸ್ತು ಕ್ರಮ ಮತ್ತಿತರ ವಿಚಾರಗಳ ಬಗ್ಗೆ ಮಾತನಾಡಿದರು. ಪ್ರಶ್ನೋತ್ತರಗಳು ಇಲ್ಲಿವೆ.[ಶಿಸ್ತು ಮೀರಿದ ಈಶ್ವರಪ್ಪ ಮತ್ತಿತರರ ವಿರುದ್ಧ ಕ್ರಮಕ್ಕೆ ಸೂಚನೆ?]

ಎಲ್ಲವೂ ಸುಳ್ಳು
ರಾಯಣ್ಣ ಬ್ರಿಗೇಡ್ ವಿಚಾರವಾಗಿ ನಿಮ್ಮ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ತಾರೆ ಎಂಬ ಸುದ್ದಿ ಇದೆಯಲ್ಲಾ?
ಇಲ್ಲ, ಎಲ್ಲವೂ ಸುಳ್ಳು. ಅಂಥ ಯಾವುದೇ ವಿಚಾರವೂ ಇಲ್ಲ.

ಸಾಮಾಜಿಕ ಸಂಘಟನೆ
ಹಾಗಿದ್ದರೆ ರಾಯಣ್ಣ ಬ್ರಿಗೇಡ್ ಜತೆಗೆ ಗುರುತಿಸಿಕೊಳ್ಳದಂತೆ ಸೂಚನೆ ನೀಡಿದ ಬಗ್ಗೆ..
ರಾಯಣ್ಣ ಬ್ರಿಗೇಡ್ ಒಂದು ಸಾಮಾಜಿಕ ಸಂಘಟನೆ. ಅದರ ಉದ್ದೇಶ ದಲಿತರು, ಹಿಂದುಳಿದವರ ಸಂಘಟನೆ ಅಷ್ಟೇ. ಅದರಲ್ಲಿ ಯಾವುದೇ ರಾಜಕೀಯ ಹಿತಾಸಕ್ತಿ ಇಲ್ಲ. ಸ್ವಾಮೀಜಿಗಳು, ವಿವಿಧ ಜಾತಿ ಮುಖಂಡರು ಎಲ್ಲ ಒಟ್ಟಾಗಿ ಆ ವರ್ಗದ ಏಳ್ಗೆಗಾಗಿ ಶ್ರಮಿಸಲು ಮಾಡಿಕೊಂಡ ಸಂಘಟನೆ ಇದು. ಅದರ ಜತೆ ಗುರುತಿಸಿಕೊಳ್ಳಬಾರದು ಅಂತ ಏಕೆ ಹೇಳ್ತಾರೆ?

ಮತ್ತೆ ಯಾಕೆ ಬಂದಿರಿ
ಪಕ್ಷದಿಂದ ಆಚೆ ಹೋದಿರಿ, ಮತ್ತೆ ಯಾಕೆ ಬಂದಿರಿ, ನಾವು ಜನರ ಬಳಿ ಹೇಗೆ ಮತ ಕೇಳಬೇಕು ಎಂದು ಪ್ರಶ್ನೆ ಕೇಳಿದ್ದಿರಿ. ಅದಕ್ಕೆ ಉತ್ತರ ಸಿಕ್ಕಿತಾ?
ಯಾರನ್ನು ಕೇಳಿದ್ದೆ, ಯಾವುದರ ಬಗ್ಗೆ ಹೇಳ್ತಿದ್ದೀರಿ.

ಯಡಿಯೂರಪ್ಪನವರ ಬಗ್ಗೆ
ಯಡಿಯೂರಪ್ಪನವರ ಬಗ್ಗೆ, ಈ ಹಿಂದೆ ಕಾರ್ಯಕರ್ತರ ಸಭೆಯಲ್ಲಿ ಕೇಳಿದ್ದಿರಿ ಅ ಬಗ್ಗೆ
ಅದೆಲ್ಲ ಮುಗಿದ ಅಧ್ಯಾಯ. ನಾವೆಲ್ಲ ಒಟ್ಟಿಗಿದ್ದೀವಿ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರೋದಿಕ್ಕೆ ಶ್ರಮಿಸ್ತಿದೀವಿ.

ನನ್ನೊಂದಿಗೆ ಚೆನ್ನಾಗೇ ಇದ್ದಾರೆ
ಪಕ್ಷದೊಳಗೆ ನೀವು ಒಂಟಿಯಾದಂತೆ ಕಾಣ್ತಿದ್ದೀರಲ್ಲಾ?
ಹಾಗೇನಿಲ್ಲ. ಎಲ್ಲರೂ ನನ್ನೊಂದಿಗೆ ಚೆನ್ನಾಗೇ ಇದ್ದಾರೆ. ಯಡಿಯೂರಪ್ಪನವರಿಗೆ ಹೇಳಲು ಹೆದರುವಂಥ ವಿಚಾರಗಳನ್ನು ನನ್ನ ಬಳಿಗೆ ಹಂಚಿಕೊಳ್ತಾರೆ. ಅಸಮಾಧಾನಗಳನ್ನು ನನ್ನ ಬಳಿ ಹೇಳಿಕೊಳ್ತಾರೆ.











Click it and Unblock the Notifications