'ದಲಿತರು ಮುಖ್ಯಮಂತ್ರಿಯಾಗಲು ಇದು ಸಕಾಲವಲ್ಲ'
ಬೆಂಗಳೂರು, ಫೆ. 18 :'ಸದ್ಯ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ, ದಲಿತರು ಸಿಎಂ ಆಗಲು ಇದು ಸಕಾಲವಲ್ಲ. ಮುಖ್ಯಮಂತ್ರಿ ಪಟ್ಟಕ್ಕಾಗಿ ಅವರು 2018ರವರೆಗೆ ಕಾಯಬೇಕು' ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರನ್ನು ಮುಖ್ಯಮಂತ್ರಿ ಮಾಡುವಂತೆ ದಲಿತ ಸಂಘಟನೆಗಳು ಮಂಗಳವಾರ ಒತ್ತಾಯಿಸಿರುವ ಬಗ್ಗೆ ಇಂದು ಪ್ರತಿಕ್ರಿಯೆ ನೀಡಿರುವ ಆಂಜನೇಯ ಅವರು, ಈ ಸಭೆಯ ಹಿಂದೆ ಯಾರಿದ್ದಾರೆ ಎಂದು ತಮಗೆ ತಿಳಿದಿಲ್ಲ ಎಂದರು. [ಪರಮೇಶ್ವರ್ ಸಿಎಂ ಮಾಡಲು ಗಡುವು]

'ಸಿಎಂ ಸಿದ್ದರಾಮಯ್ಯ ಅವರು ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಅವರನ್ನು ಕೆಳಗಿಳಿಸಿ ದಲಿತರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಿ ಎಂದು ಕೇಳುವುದು ಎಷ್ಟು ಸರಿ?, ಇದು ನ್ಯಾಯವೂ ಅಲ್ಲ' ಎಂದು ಆಂಜನೇಯ ಹೇಳಿದರು. [ಪರಮೇಶ್ವರ್ ಆಸೆ ಈಡೇರ್ಸಿ ಬಿಡ್ರಪ್ಪಾ ಅತ್ಲಾಗೆ]
'ಕರ್ನಾಟಕ ಕಾಂಗ್ರೆಸ್ನಲ್ಲಿ ಸದ್ಯ ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ ಆಂಜನೇಯ ಅವರು, ಶಾಸಕರು, ಹೈಕಮಾಂಡ್ ನಾಯಕರು ಈ ಬಗ್ಗೆ ಯಾವುದೇ ಮಾತುಕತೆ ನಡೆಸಿಲ್ಲ' ಎಂದರು. [ದಲಿತ ನಾಯಕರು ಮುಖ್ಯಮಂತ್ರಿ : ಯಾರು, ಏನು ಹೇಳಿದರು?]
'ದಲಿತರು ಮುಖ್ಯಮಂತ್ರಿಯಾಗಲು ಇದು ಸಕಾಲವಲ್ಲ ಮುಂದಿನ ಮುಖ್ಯಮಂತ್ರಿ ಆಯ್ಕೆ ಬಗ್ಗೆ 2018ರ ಚುನಾವಣೆ ವೇಳೆಗೆ ಚರ್ಚೆ ನಡೆಸೋಣ, ಹುದ್ದೆಯ ಆಕಾಂಕ್ಷಿಗಳು ಅಲ್ಲಿಯ ತನಕ ಕಾಯಲೇ ಬೇಕು ಎಂದು' ಆಂಜನೇಯ ಅವರು ತಿಳಿಸಿದರು.
15ಕ್ಕೂ ಹೆಚ್ಚು ದಲಿತ ಸಂಘಟನೆಗಳ ಮುಖಂಡರು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಸಭೆ ನಡೆಸಿ, ಪರಮೇಶ್ವರ ಅವರನ್ನು ಮುಖ್ಯಮಂತ್ರಿ ಮಾಡಲು ಮಾರ್ಚ್ ತಿಂಗಳ ಗಡುವು ನೀಡಿದ್ದರು. ಇಲ್ಲವಾದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು.












Click it and Unblock the Notifications