ನಿಖಿಲ್ ಕುಮಾರಸ್ವಾಮಿ ಸುತ್ತ 'ಗಿರಿಗಿಟ್ಲೆ'ಯಾಡುತ್ತಿರುವ ಭಾರೀ ಸುದ್ದಿ
ರಾಮನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಯಾರಾಗಲಿದ್ದಾರೆ ಎನ್ನುವ ವಿಷಯವನ್ನು ಬಿಟ್ಟು, ಇನ್ನೂ ಹೆಚ್ಚುಕಮ್ಮಿ ಒಂದು ವರ್ಷವಿರುವ ಲೋಕಸಭಾ ಚುನಾವಣೆಯ ಬಗ್ಗೆ ಸುದ್ದಿ ಹರಿದಾಡುತ್ತಿದೆ.
ತನ್ನದೇನಿದ್ದರೂ ಸಿನಿಮಾ ಕ್ಷೇತ್ರ, ಪಕ್ಷ ಬಯಸಿದರೆ ಪ್ರಚಾರಕ್ಕೆ ಮಾತ್ರ ಬರುತ್ತೇನೆಂದು ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಹೇಳಿದ್ದರೂ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಸ್ಪರ್ಧಿಸಲಿದ್ದಾರಾ ಎನ್ನುವ ಪ್ರಶ್ನೆ ಉದ್ಭವವಾಗಿದೆ.
ಇದಕ್ಕೆ ಕಾರಣ ಜೆಡಿಎಸ್ ಮುಖಂಡ ಚೆನ್ನಿಗಪ್ಪ ನೀಡಿರುವ ಹೇಳಿಕೆ. ನಾವು ಸೂಚಿಸಿದ ಅಭ್ಯರ್ಥಿಯನ್ನು ತುಮಕೂರು ಕ್ಷೇತ್ರದಿಂದ ಕಣಕ್ಕಿಳಿಸಿದರೆ ಅವರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮದು ಎಂದು ಚೆನ್ನಿಗಪ್ಪ ಸೋಮವಾರ (ಜು 2) ನೀಡಿದ ಹೇಳಿಕೆ, ಜೆಡಿಎಸ್ ಪಾಳಯದಲ್ಲಿ ಹೊಸ ಸಂಚಲನ ಮೂಡಿಸಿದೆ.
ಚನ್ನಪಟ್ಟಣ ಮತ್ತು ರಾಮನಗರ ಎರಡೂ ಕ್ಷೇತ್ರದಿಂದ ಸಿಎಂ ಕುಮಾರಸ್ವಾಮಿ ಗೆದ್ದ ನಂತರ, ರಾಮನಗರ ಕ್ಷೇತ್ರಕ್ಕೆ ಎಚ್ಡಿಕೆ ರಾಜೀನಾಮೆ ನೀಡಿದ್ದರು. ಅಲ್ಲಿಂದ ಜೆಡಿಎಸ್ ಅಭ್ಯರ್ಥಿಯಾಗಿ ಅನಿತಾ ಕುಮಾರಸ್ವಾಮಿ ಅಥವಾ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು.
ಇದಕ್ಕೆ ಗೌಡರ ಇನ್ನೊಬ್ಬ ಸೊಸೆ ಭವಾನಿ ರೇವಣ್ಣ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ, ಗೌಡರ ಮನೆಯೊಂದು ಮೂರು ಬಾಗಿಲು ಆಗಿದೆ ಎಂದೆಲ್ಲಾ ಗುಲ್ಲೆಬ್ಬಿತ್ತು. ಕೊನೆಗೆ, ಯಾವುದೇ ಕಾರಣಕ್ಕೂ ನಮ್ಮ ಮನೆ ಒಡೆದು ಹೋಗುವುದಿಲ್ಲ ಎಂದು ಗೌಡ್ರೇ ಸ್ಪಷ್ಟನೆ ನೀಡಿದ್ದರು. ಜೆಡಿಎಸ್ ಮುಖಂಡ ಚೆನ್ನಿಗಪ್ಪ ನೀಡಿದ ಹೇಳಿಕೆಯೇನು? ಮುಂದೆ ಓದಿ..
ತಾತ ಮತ್ತು ಅಪ್ಪ ಪ್ರಚಾರಕ್ಕೆ ಕರೆದರೆ ಹೋಗುವೆ
ಕಳೆದ ವಿಧಾನಸಭಾ ಚುನಾವಣೆಯ ವೇಳೆ ಸ್ಪಷ್ಟನೆ ನೀಡಿದ್ದ ನಿಖಿಲ್, ನಾನು ಸಿನಿಮಾ ರಂಗದಲ್ಲಿ ಬೆಳೆಯಬೇಕು ಎಂದು ಬಯಸಿದವನು, ರಾಜಕೀಯಕ್ಕೆ ಬರುವ ಆಸಕ್ತಿ ನನಗಿಲ್ಲ. ತಾತ ಮತ್ತು ಅಪ್ಪ ಪ್ರಚಾರಕ್ಕೆ ಕರೆದರೆ ಹೋಗುವೆ ಎಂದು ನಿಖಿಲ್ ಹೇಳಿದ್ದರು. ಮುಖ್ಯಮಂತ್ರಿಗಳು ಕೂಡಾ ಮಗ ಸಿನಿಮಾ ರಂಗದಲ್ಲೇ ಮುಂದುವರಿಯುತ್ತಾನೆ ಎಂದಿದ್ದರು.
ದೇವೇಗೌಡ್ರು ಮತ್ತು ಕುಮಾರಣ್ಣ ನಿರ್ಧರಿಸುತ್ತಾರೆ
ತುಮಕೂರು ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ನಿಂದ ಯಾರು ಕಣಕ್ಕಿಳಿಯಲಿದ್ದಾರೆ ಎನ್ನುವುದನ್ನು ದೇವೇಗೌಡ್ರು ಮತ್ತು ಕುಮಾರಣ್ಣ ನಿರ್ಧರಿಸುತ್ತಾರೆ. ನಾವು ನಿಖಿಲ್ ಕುಮಾರಸ್ವಾಮಿಯವರನ್ನು ತುಮಕೂರಿನಿಂದ ಸ್ಪರ್ಧಿಸುವಂತೆ ಆಹ್ವಾನಿಸುತ್ತಿದ್ದೇವೆ, ಅಂತಿಮ ನಿರ್ಧಾರ ಗೌಡ್ರಿಗೆ ಬಿಟ್ಟಿದ್ದು - ಚೆನ್ನಿಗಪ್ಪ ಹೇಳಿಕೆ.
ಭವಾನಿಯಾದರೂ ಓಕೆ, ನಿಖಿಲ್ ಆದರೂ ಓಕೆ
ಭವಾನಿ ರೇವಣ್ಣ ಸ್ಪರ್ಧಿಸಿದರೆ ಹೇಗೆ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಚೆನ್ನಿಗಪ್ಪ, ಭವಾನಿಯಾದರೂ ಓಕೆ, ನಿಖಿಲ್ ಆದರೂ ಓಕೆ. ಯಾರನ್ನು ಕಣಕ್ಕಿಳಿಸಿದರೂ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮ್ಮದು. ಒಟ್ಟಿಗೆ ಗೌಡರ ಮನಸ್ಸಿಗೆ ಬೇಸರವಾಗಬಾರದು ಎಂದು ಚೆನ್ನಿಗಪ್ಪ ಹೇಳಿದ್ದಾರೆ.
ಕುಮಾರಣ್ಣ, ಕೊಟ್ರೆ ವರ ಇಟ್ರೆ ಶಾಪ
ಮಾಧ್ಯಮದವರ ಮುಂದೆ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯನವರನ್ನು ಹೊಗಳಲು ಮರೆಯದ ಚೆನ್ನಿಗಪ್ಪ, ಸಿದ್ದಣ್ಣಂದು ಮಾತು ಖಡಕ್ ಆಗಿದ್ದರೂ ಮನಸ್ಸು ಒಳ್ಲೆಯದು. ಇನ್ನು ಕುಮಾರಣ್ಣ, ಕೊಟ್ರೆ ವರ ಇಟ್ರೆ ಶಾಪ, ಎಲ್ಲರ ಜೊತೆ ಉತ್ತಮ ಬಾಂಧವ್ಯವನ್ನು ಕುಮಾರಸ್ವಾಮಿ ಹೊಂದಿದ್ದಾರೆಂದು ಚೆನ್ನಿಗಪ್ಪ ಹೇಳಿದ್ದಾರೆ.
ಸಕ್ರಿಯ ರಾಜಕಾರಣದಿಂದ ದೂರ - ಚೆನ್ನಿಗಪ್ಪ ಘೋಷಣೆ
ಮಾಜಿ ಸಚಿವ ಸಿ ಚೆನ್ನಿಗಪ್ಪ ತಮ್ಮ 69ನೇ ಹುಟ್ಟಹಬ್ಬ ಆಚರಿಸಿಕೊಂಡ ಸಂದರ್ಭದಲ್ಲಿ ಸಕ್ರಿಯ ರಾಜಕಾರಣದಿಂದ ದೂರು ಉಳಿಯುವುದಾಗಿ ಘೋಷಿಸಿದ್ದರು. ಕಳೆದ ಚುನಾವಣೆಯಲ್ಲಿ ತಮ್ಮ ಪುತ್ರ ಗೌರೀಶಂಕರ್ ಅವರನ್ನು ತುಮಕೂರು ಗ್ರಾಮಾಂತರ ಕ್ಷೇತ್ರದಿಂದ ಗೆಲ್ಲಿಸಿಕೊಂಡು ಬರುವಲ್ಲಿ ಚೆನ್ನಿಗಪ್ಪ ಯಶಸ್ವಿಯಾಗಿದ್ದರು. ಜೆಡಿಎಸ್ ಟಿಕೆಟಿನಿಂದ ಸ್ಪರ್ಧಿಸಿದ್ದ ಗೌರೀಶಂಕರ್, ಬಿಜೆಪಿಯ ಸುರೇಶ್ ಗೌಡ ಅವರನ್ನು 5,640 ಮತಗಳ ಅಂತರದಿಂದ ಸೋಲಿಸಿದ್ದರು.