4 ದಿನದಲ್ಲಿ ಜೆಡಿಎಸ್ಗೆ ಹೊಸ ಅಧ್ಯಕ್ಷರ ನೇಮಕ : ದೇವೇಗೌಡ
Recommended Video
ಬೆಂಗಳೂರು, ಜೂನ್ 25 : 'ಮೂರು-ನಾಲ್ಕು ದಿನದಲ್ಲಿ ರಾಜ್ಯ ಘಟಕಕ್ಕೆ ಹೊಸ ಅಧ್ಯಕ್ಷರನ್ನು ನೇಮಕ ಮಾಡುತ್ತೇನೆ' ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಹೇಳಿದ್ದಾರೆ. ಎಚ್.ವಿಶ್ವನಾಥ್ ಮನವೊಲಿಕೆ ಮಾಡುವ ಎಲ್ಲಾ ನಾಯಕರ ಪ್ರಯತ್ನವೂ ವಿಫಲವಾಗಿದೆ.
ಜೂನ್ 4ರಂದು ಪತ್ರಿಕಾಗೋಷ್ಠಿ ನಡೆಸಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರು ರಾಜೀನಾಮೆ ಸಲ್ಲಿಸಿದ್ದರು. ಆದರೆ, ಎಚ್.ಡಿ.ದೇವೇಗೌಡರು ಇದುವರೆಗೂ ರಾಜೀನಾಮೆ ಅಂಗೀಕಾರ ಮಾಡಿಲ್ಲ. ರಾಜೀನಾಮೆ ವಾಪಸ್ ಪಡೆಯುವುದಿಲ್ಲ ಎಂದು ವಿಶ್ವನಾಥ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಎಚ್.ಡಿ.ದೇವೇಗೌಡ ಅವರು, 'ವಿಶ್ವನಾಥ್ ಅವರ ರಾಜೀನಾಮೆ ಅಂಗೀಕಾರ ಮಾಡುವುದಿಲ್ಲ. ಬದಲಿಗೆ ಅವರಿಂದಲೇ ಹೊಸ ಅಧ್ಯಕ್ಷರಿಗೆ ಬಾವುಟ ಕೊಡಿಸಿ ಅಧಿಕಾರ ಹಸ್ತಾಂತರ ಮಾಡುತ್ತೇನೆ' ಎಂದು ಹೇಳಿದ್ದಾರೆ.
ಎಚ್.ವಿಶ್ವನಾಥ್ ಅವರ ಜಾಗಕ್ಕೆ ವೈ.ಎಸ್.ವಿ.ದತ್ತಾ, ಮಧು ಬಂಗಾರಪ್ಪ ಅವರ ಹೆಸರು ಕೇಳಿಬರುತ್ತಿದೆ. ಎಚ್.ವಿಶ್ವನಾಥ್ ಅವರು ಮಧು ಬಂಗಾರಪ್ಪ ಅವರ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇನ್ನೆರಡು ದಿನದಲ್ಲಿ ಅಧ್ಯಕ್ಷರು ಯಾರು? ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಲಭ್ಯವಾಗುವ ನಿರೀಕ್ಷೆ ಇದೆ.

ಒಬ್ಬರಿಗೆ ಒಂದೇ ಹುದ್ದೆ
ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯಾಧ್ಯಕ್ಷರಾಗಲಿ ಎಂದು ಎಚ್.ವಿಶ್ವನಾಥ್ ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಚ್.ಡಿ.ದೇವೇಗೌಡರು, 'ಅವರ ಹೇಳಿಕೆ ತಪ್ಪಲ್ಲ. ಆದರೆ, ಒಬ್ಬರಿಗೆ ಒಂದೇ ಹುದ್ದೆ ಅಂತ ಪಕ್ಷದಲ್ಲಿ ನಿರ್ಧಾರವಾಗಿದೆ. ಈ ಹಿಂದೆ ನಾನೇ ರಾಜೀನಾಮೆ ನೀಡಿ, ಇಬ್ರಾಹಿಂ ಅವರಿಗೆ ಸ್ಥಾನ ಬಿಟ್ಟುಕೊಟ್ಟಿದ್ದೆ. ಹೀಗಾಗಿ ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ' ಎಂದು ಹೇಳಿದರು.

ಹೊಸ ಅಧ್ಯಕ್ಷರ ನೇಮಕ
'ಮೂರು ನಾಲ್ಕು ದಿನದಲ್ಲಿ ರಾಜ್ಯ ಘಟಕಕ್ಕೆ ಹೊಸ ಅಧ್ಯಕ್ಷರನ್ನು ನೇಮಕ ಮಾಡಲಾಗುತ್ತದೆ. ಎಚ್.ವಿಶ್ವನಾಥ್ ಅವರ ರಾಜೀನಾಮೆಯನ್ನು ಅಂಗೀಕಾರ ಮಾಡುವುದಿಲ್ಲ. ಅವರಿಂದಲೇ ಹೊಸ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಲಾಗುತ್ತದೆ' ಎಂದು ದೇವೇಗೌಡರು ಹೇಳಿದರು.

ಮನವೊಲಿಕೆ ಯತ್ನ ವಿಫಲ
ಹುಣಸೂರು ಶಾಸಕ ಎಚ್.ವಿಶ್ವನಾಥ್ ಅವರ ಮನವೊಲಿಕೆ ಮಾಡುವ ಎಚ್.ಡಿ.ದೇವೇಗೌಡರ ಪ್ರಯತ್ನ ವಿಫಲವಾಗಿತ್ತು. 'ನನಗೆ ವಿಶ್ರಾಂತಿ ನೀಡಿ, ಆರೋಗ್ಯದ ಹಿತದೃಷ್ಟಿಯಿಂದ ವಿಶ್ರಾಂತಿ ಬೇಕು. ದಯವಿಟ್ಟು ಒತ್ತಾಯ ಮಾಡಬೇಡಿ ಎಂದು' ವಿಶ್ವನಾಥ್ ದೇವೇಗೌಡರಿಗೆ ಮನವಿ ಮಾಡಿದ್ದರು.

ರಾಜೀನಾಮೆ ಅಂಗೀಕಾರವಾಗಿಲ್ಲ
ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಎಚ್.ವಿಶ್ವನಾಥ್ ಅವರು ಜೂನ್ 4ರಂದು ಪತ್ರಿಕಾಗೋಷ್ಠಿ ನಡೆಸಿ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಇದುವರೆಗೂ ರಾಜೀನಾಮೆ ಅಂಗೀಕಾರವಾಗಿಲ್ಲ.












Click it and Unblock the Notifications