ಕೈದಿಗಳ ಬಿಡುಗಡೆಗೆ ಹೊಸ ಮಾರ್ಗಸೂಚಿ
ಬೆಂಗಳೂರು, ಜುಲೈ 20 : ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಹಾಗೂ ವಯೋವೃದ್ಧ ಜೀವಾವಧಿ ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಅವಧಿಗೆ ಮುನ್ನವೇ ಬಿಡುಗಡೆ ಮಾಡುವ ಮಾರ್ಗಸೂಚಿಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಭೆಯಲ್ಲಿ ಕೈದಿಗಳ ಬಿಡುಗಡೆಗೆ ಅನುಕೂಲವಾಗುವಂತೆ ರಚಿಸಿದ್ದ ನೂತನ ಮಾರ್ಗಸೂಚಿಗಳಿಗೆ ಅನುಮೋದನೆ ನೀಡಲಾಯಿತು.[ಕಲಬುರಗಿ ಜೈಲಿನ ಗೋಡೆ ಕೊರೆದು ನಾಲ್ವರು ಕೈದಿಗಳು ಪರಾರಿ]

ನೂತನ ಮಾರ್ಗಸೂಚಿಗಳಂತೆ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆಯ ಪರಿಚ್ಛೇಧ 433 ಎ ಅನ್ವಯ 14 ವರ್ಷಗಳ ಜೀವಾವಧಿ ಶಿಕ್ಷೆ ಪೂರ್ಣಗೊಳಿಸಿರುವ ಕೈದಿಗಳನ್ನು ಸನ್ನಡತೆಯ ಆಧಾರದ ಮೇರೆಗೆ ಬಿಡುಗಡೆ ಮಾಡಲು ಪರಿಗಣಿಸಬಹುದಾಗಿದೆ.[ಪುನಃ ಜೈಲಿಗೆ ಹಾಕಿ ಎನ್ನುವ ಮೈಸೂರು ಮಹಿಳೆ ಗೋಳು ಏನು?]
ಈ ಪರಿಚ್ಛೇಧದ ವ್ಯಾಪ್ತಿಗೆ ಒಳಪಡದ 14 ವರ್ಷಗಳ ಜೀವಾವಧಿ ಶಿಕ್ಷೆಗೆ ಒಳಪಟ್ಟಿರುವ ಪುರುಷ ಕೈದಿಯು ಶಿಕ್ಷಾ ಅವಧಿಯಲ್ಲಿ ಯಾವುದೇ ಕಡಿತವಿಲ್ಲದೆಯೇ ಸತತ 10 ವರ್ಷಗಳ ಕಾರಾಗೃಹ ವಾಸವನ್ನು ಪೂರ್ಣಗೊಳಿಸಿದ್ದಲ್ಲಿ ಹಾಗೂ ಮಹಿಳಾ ಕೈದಿ ಶಿಕ್ಷಾ ಏಳು ವರ್ಷ ಕಾಲ ಕಾರಾಗೃಹ ವಾಸವನ್ನು ಪೂರ್ಣಗೊಳಿಸಿದ್ದಲ್ಲಿ ಅಂತಹ ಕೈದಿಗಳನ್ನು ಅವಧಿಗೆ ಮೊದಲೇ ಬಿಡುಗಡೆಗೆ ಪರಿಗಣಿಸಬಹುದು.[ಮೈಸೂರಿನಲ್ಲಿ ಸೆಂಟ್ರಲ್ ಜೈಲು ಕಟ್ಟಲು ಜಾಗ ಬೇಕಾಗಿದೆ]
ಶಿಕ್ಷಾ ಅವಧಿಯಲ್ಲಿ ಕಡಿತವಿದ್ದರೂ 65 ವರ್ಷ ವಯೋಮಾನ ದಾಟಿರುವ 14 ವರ್ಷಗಳ ವಾಸ್ತವ ಶಿಕ್ಷೆಯನ್ನು ಅನುಭವಿಸಿರುವ ಜೀವಾವಧಿ ಶಿಕ್ಷೆಗೆ ಒಳಪಟ್ಟಿರುವ ಪುರುಷ ಕೈದಿಗಳನ್ನು ಹಾಗೂ 60 ವರ್ಷ ವಯೋಮಾನ ದಾಟಿರುವ 12 ವರ್ಷಗಳ ವಾಸ್ತವ ಶಿಕ್ಷೆಯನ್ನು ಅನುಭವಿಸಿರುವ ಜೀವಾವಧಿ ಶಿಕ್ಷೆಗೆ ಒಳಪಟ್ಟಿರುವ ಮಹಿಳಾ ಕೈದಿಗಳನ್ನು ಬಿಡುಗಡೆಗೆ ಪರಿಗಣಿಸಬಹುದಾಗಿದೆ.
ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ಬಿಡುಗಡೆಗೆ ಸಂಬಂಧಿಸಿದಂತೆ ಪರಿಷ್ಕೃತ ಮಾರ್ಗಸೂಚಿಗಳನ್ನು ರಚಿಸುವಂತೆ ಸುಪ್ರೀಂಕೋರ್ಟ್ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ನೂತನ ಮಾರ್ಗಸೂಚಿ ರಚನೆ ಮಾಡಲಾಗಿದೆ.












Click it and Unblock the Notifications