ಬದಲಾದ ರಾಜಕೀಯ: ಆರ್ಎಸ್ಎಸ್ಗೆ ಶರಣಾದ್ರ ಸಿಎಂ ಬೊಮ್ಮಾಯಿ?
ಸಂಘ ಪರಿವಾರ ಅಥವಾ ಮೂಲ ಬಿಜೆಪಿಗರಲ್ಲದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ, ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾಡಿದ ಭಾಷಣ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.
ಸ್ವಾತಂತ್ರ್ಯ ದಿನಾಚರಣೆಯ 75ನೇ ಅಮೃತ ಮಹೋತ್ಸವದ ಸಂದರ್ಭದಲ್ಲಿ, ಹೌದು, ನಾನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಟ್ಟಾಳು ಎನ್ನುವ ಮಾತನ್ನು ಬಸವರಾಜ ಬೊಮ್ಮಾಯಿ ಆಡಿದ್ದರು. ಇದು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯೆಯಾಗಿತ್ತು.
ಸರಕಾರ ನೀಡಿದ್ದ ಜಾಹೀರಾತಿನಲ್ಲಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಭಾವಚಿತ್ರವನ್ನು ಉದ್ದೇಶಪೂರ್ವಕವಾಗಿಯೇ ಕೈಬಿಡಲಾಗಿದೆ. ಖುರ್ಚಿ ಉಳಿಸಿಕೊಳ್ಳಲು ಈ ಮಟ್ಟಿನ ಗುಲಾಮಗಿರಿಯೇ ಎಂದು ಸಿದ್ದರಾಮಯ್ಯ ಟ್ವೀಟ್ ಒಂದರಲ್ಲಿ ಸಿಎಂ ಬೊಮ್ಮಾಯಿಯವರನ್ನು ಪ್ರಶ್ನಿಸಿದ್ದರು.
ಅಸಲಿಗೆ ಸರಕಾರ ನೀಡಿದ್ದ ಆ ಜಾಹೀರಾತಿನಲ್ಲಿ ಇತರ ಮಹನೀಯರ ಜೊತೆಗೆ ಕೊಲೇಜ್ ಮಾಡಿದ್ದ ಭಾವಚಿತ್ರದಲ್ಲಿ ನೆಹರೂ ಅವರ ಚಿತ್ರ ಕೂಡಾ ಇತ್ತು. ಆದರೆ, ಇತರ ಗಣ್ಯರಂತೆ ಫೋಟೋ ದೊಡ್ಡದಾಗಿರಲಿಲ್ಲ. ಇದು ಕಾಂಗ್ರೆಸ್ಸಿಗರ ಸಿಟ್ಟಿಗೆ ಕಾರಣವಾಗಿತ್ತು.

ನೆಹರೂ ಹೆಸರನ್ನು ಕೈಬಿಡುವಷ್ಟು ಕೀಳು ಮಟ್ಟಕ್ಕೆ ನೀವು ಇಳಿಯಬಾರದಿತ್ತು
ಸಿದ್ದರಾಮಯ್ಯನವರು ಟ್ವೀಟ್ ಮಾಡಿ, "ಸನ್ಮಾನ್ಯ ಮುಖ್ಯಮಂತ್ರಿ @BSBommai ಅವರೇ ರಾಜ್ಯ ಸರ್ಕಾರದ ಇಂದಿನ ಜಾಹೀರಾತಿನ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಮಾಜಿ ಪ್ರಧಾನಿ ಜವಾಹರಲಾಲ ನೆಹರೂ ಅವರ ಹೆಸರನ್ನು ಕೈಬಿಡುವಷ್ಟು ಕೀಳು ಮಟ್ಟಕ್ಕೆ ನೀವು ಇಳಿಯಬಾರದಿತ್ತು, ಕುರ್ಚಿ ಉಳಿಸಲು ಈ ಪರಿಯ ಗುಲಾಮಗಿರಿಯೇ? ಜನರ ತೆರಿಗೆ ಹಣದಿಂದ ನೀಡಿರುವ ಜಾಹೀರಾತಿನಲ್ಲಿ ಧೀಮಂತ ಸ್ವಾತಂತ್ರ್ಯ ಹೋರಾಟಗಾರ ಪಂಡಿತ ಜವಾಹರಲಾಲ ನೆಹರೂ ಅವರಿಗೆ ಮಾಡಿರುವ ಅವಮಾನವನ್ನು ಸಹಿಸಲಾಗದು. ಈ ಅವಮಾನಕ್ಕಾಗಿ ಮೊದಲು ರಾಜ್ಯದ ಜನತೆಯ ಕ್ಷಮೆ ಕೇಳಿ"ಎಂದು ಆಗ್ರಹಿಸಿದ್ದರು.

ಕಾಂಗ್ರೆಸ್ ಇಷ್ಟು ಬೇಗ ನೆಹರೂ ಮುಖ ಮರೆಯಿತೇ, ಜಾಣ ಕುರುಡೋ?
ಸಿದ್ದರಾಮಯ್ಯನವರ ಮತ್ತು ಕೆಪಿಸಿಸಿಯ ಟ್ವೀಟಿಗೆ ಪ್ರತಿಕ್ರಿಯೆ ನೀಡಿದ್ದ ಕರ್ನಾಟಕ ಬಿಜೆಪಿ ಐಟಿ ಸೆಲ್, "ಕಾಂಗ್ರೆಸ್ ಪಕ್ಷಕ್ಕೆ ತನ್ನ ಯಜಮಾನ ನೆಹರೂ ಅವರನ್ನು ಗುರುತಿಸಲಾಗದಷ್ಟು ಮಂಪರು ಕವಿದಿದೆಯೇ? ಕಾಂಗ್ರೆಸ್ ಇಷ್ಟು ಬೇಗ ನೆಹರೂ ಮುಖ ಮರೆಯಿತೇ ಅಥವಾ ಇದು ಜಾಣ ಕುರುಡೋ?" ಎಂದು ಜಾಹೀರಾತಿನಲ್ಲಿ ನೀಡಿದ್ದ ನೆಹರೂ ಅವರ ಸಣ್ಣ ಫೋಟೋವನ್ನು ಹೈಲೆಟ್ ಮಾಡಿ ಬಿಜೆಪಿ ಪ್ರತಿಕ್ರಿಯೆ ನೀಡಿತ್ತು.

ನಾನು ಆರ್ಎಸ್ಎಸ್ ವಿಚಾರಧಾರೆಗೆ ತಲೆಬಾಗಿದ್ದೇನೆ
"ನಾನು ಆರ್ಎಸ್ಎಸ್ ವಿಚಾರಧಾರೆಗೆ ತಲೆಬಾಗಿದ್ದೇನೆ ಮತ್ತು ಸಂಘಟನೆಯ ದೇಶಭಕ್ತಿಗೆ ತಲೆಬಾಗಿದ್ದೇನೆ. ಸಂಘದ ಸಿದ್ದಾಂತದಂತೆ ದೇಶ ಕಟ್ಟಲು ಪಣವನ್ನು ತೊಟ್ಟಿದ್ದೇನೆ. ಈ ಬಗ್ಗೆ ನನಗೆ ಅಭಿಮಾನವಿದೆ" ಎಂದು ಬಿಜೆಪಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಹೇಳಿದ್ದರು. ಇದು, ಬೊಮ್ಮಾಯಿಯವರು ಸಂಘಕ್ಕೆ ಶರಣಾಗಿದ್ದಾರಾ ಎನ್ನುವ ಹೊಸ ಪ್ರಶ್ನೆಗೆ ಕಾರಣವಾಗಿದೆ. ಇದಕ್ಕೆ ಕಾರಣ ಇಲ್ಲದಿಲ್ಲ..

ಬಿಜೆಪಿಯ ಇತರ ನಾಯಕರಂತೆ ತೀರಾ ಸಂಘದ ಸಮರ್ಥನೆಗೆ ನಿಂತವರಲ್ಲ
1998ರಿಂದ ಜಾತ್ಯತೀತ ತತ್ವದಿಂದ ರಾಜಕೀಯ ಮಾಡಿಕೊಂಡು ಬಂದಿರುವ ಬೊಮ್ಮಾಯಿ, ಸಂಘದ ಕಟ್ಟಾಳು ಅಲ್ಲ. ಅಂದಿನಿಂದ ಮೊನ್ನೆಮೊನ್ನೆಯವರೆಗೂ ಬೊಮ್ಮಾಯಿ ಬಿಜೆಪಿಯ ಇತರ ನಾಯಕರಂತೆ ತೀರಾ ಸಂಘದ ಸಮರ್ಥನೆಗೆ ನಿಂತವರಲ್ಲ. 2008ರಲ್ಲಿ ಜಾತ್ಯತೀತ ಜನತಾದಳದಿಂದ ಬಿಜೆಪಿಗೆ ಸೇರಿದ್ದ ಬೊಮ್ಮಾಯಿಯವರ ಹೇಳಿಕೆ ಯಾವಾಗಲೂ ತೀವ್ರವಾಗಿರುತ್ತಿರಲಿಲ್ಲ. ಇದರಿಂದಾಗಿಯೇ ಬೊಮ್ಮಾಯಿಯವರ ಹೇಳಿಕೆ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ. ಸಂಘದ ಪರವಾಗಿ ನಿಲ್ಲಲು ವರಿಷ್ಠರು ತಾಕೀತು ಮಾಡಿದರೇ, ಚುನಾವಣಾ ವರ್ಷದಲ್ಲಿ ಬೊಮ್ಮಾಯಿಗೂ ಇದರ ಅವಶ್ಯಕತೆಯಿದೆಯೇ ಎನ್ನುವ ಪ್ರಶ್ನೆ ಸಹಜವಾಗಿಯೇ ಸದ್ಯ ಚಾಲ್ತಿಯಲ್ಲಿದೆ.












Click it and Unblock the Notifications