ಎತ್ತಿನಹೊಳೆ ಯೋಜನೆ ಸಮಾಲೋಚನೆ : ಪೇಜಾವರ ಶ್ರೀ
ಉಡುಪಿ, ಜೂನ್ 10 : 'ಎತ್ತಿನಹೊಳೆ ಯೋಜನೆ ಕುರಿತು ಎರಡು ಕಡೆಯ ತಜ್ಞರ ಜತೆ ಸಮಾಲೋಚನೆ ನಡೆಸಿ, ಸಾಧಕ - ಬಾಧಕದ ಬಗ್ಗೆ ತಿಳಿದುಕೊಳ್ಳಲಾಗಿದೆ. ಯೋಜನೆಯಿಂದ ತೊಂದರೆ ಇದ್ದಲ್ಲಿ ಕೋಲಾರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯವರನ್ನು ಸೇರಿಸಿಕೊಂಡು ಮುಂದಿನ ಹೋರಾಟ ಮಾಡಲಾಗುವುದು' ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಹೇಳಿದ್ದಾರೆ.
ಎತ್ತಿನಹೊಳೆ ಯೋಜನೆ ವಿರುದ್ದ ಹೋರಾಟ ನಡೆಸುತ್ತಿರುವವರು ಗುರುವಾರ ಪೇಜಾವರ ಮಠಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, 'ನೀರಿನ ಬಗ್ಗೆ ಎರಡು ಕಡೆಯವರು ಸಾಮರಸ್ಯದಿಂದ ನಡೆದುಕೊಂಡು ಸಮಸ್ಯೆ ಬಗೆಹರಿಸಿಕೊಳ್ಳಬೇಕಿದೆ. ಸ್ವಲ್ಪ ಸಂಶಯ ಕಂಡು ಬಂದರು ಈ ಯೋಜನೆ ವಿರೋಧಿಸಲಾಗುವುದು' ಎಂದರು. ['ಎತ್ತು' ಏರಿಗೆ 'ಹೊಳೆ' ನೀರಿಗೆ ಇದೇ ಎತ್ತಿನಹೊಳೆ ಯೋಜನೆ]

ಎತ್ತಿನಹೊಳೆ ಹೋರಾಟದ ನೇತೃತ್ವ ವಹಿಸಿರುವ ವಿಜಯಕುಮಾರ್ ಶೆಟ್ಟಿ ಅವರು ಮಾತನಾಡಿ, '2012 ರಿಂದ ಈ ಯೋಜನೆ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಜಿಲ್ಲೆ ಎರಡು ಬಾರಿ ಸ್ವಯಂ ಪ್ರೇರಿತವಾಗಿ ಬಂದ್ ಆಗಿದೆ. ಇಲ್ಲಿಯೂ ನೀರಿನ ಅಭಾವವಿದೆ. ಈ ಬೇಸಿಗೆಯಲ್ಲಿ ಎಲ್ಲರ ಗಮನಕ್ಕೂ ಬಂದಿದೆ. ಇದೊಂದು ಅವೈಜ್ಞಾನಿಕ ಯೋಜನೆಯಾಗಿದೆ' ಎಂದು ದೂರಿದರು. [ಎತ್ತಿನಹೊಳೆ ಯೋಜನೆ : ಸರ್ಕಾರದ ಸ್ಪಷ್ಟನೆಗಳು]
ಜಾಟ್ ಮಾದರಿ ಹೋರಾಟ : 'ಸರ್ವಧರ್ಮದ ಮುಖಂಡರನ್ನು ಈ ಹೋರಾಟದ ನೇತೃತ್ವ ವಹಿಸಲು ಮನವಿ ಮಾಡಲಾಗಿದೆ. ಅಲ್ಲಿಗೂ ಸರ್ಕಾರ ಹಠ ಬಿಡದೆ ಇದ್ದಲ್ಲಿ ಹರ್ಯಾಣದ ಜಾಟ್ ಸಮುದಾಯದವರು ಮೀಸಲಾತಿ ಆಗ್ರಹಿಸಿ ನಡೆಸುತ್ತಿರುವ ಹೋರಾಟದ ಮಾದರಿಯಲ್ಲಿ ಇಲ್ಲೂ ಹೋರಾಟ ಮಾಡುತ್ತೇವೆ' ಎಂದು ವಿಜಯಕುಮಾರ್ ಶೆಟ್ಟಿ ಹೇಳಿದರು. [ಎತ್ತಿನಹೊಳೆ ಯೋಜನೆ ಬಗ್ಗೆ ಆತಂಕ ಬೇಡ : ಸಿದ್ದರಾಮಯ್ಯ]
ಏನಿದು ಯೋಜನೆ? : ಕುಡಿಯುವ ನೀರಿನ ತೀವ್ರ ಅಭಾವ ಎದುರಿಸುತ್ತಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಒಳಗೊಂಡಂತೆ ರಾಜ್ಯದ 7 ಜಿಲ್ಲೆಗಳ 28 ತಾಲ್ಲೂಕುಗಳ 68.5 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ 24.01 ಟಿಎಂಸಿ ನೀರಿನ ಬಳಕೆಯ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯನ್ನು ಸರ್ಕಾರ ಜಾರಿಗೊಳಿಸುತ್ತಿದೆ.ಇದಕ್ಕೆ ದಕ್ಷಿಣ ಕನ್ನಡ ಭಾಗದ ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.












Click it and Unblock the Notifications