ಕರ್ನಾಟಕ ವಿಧಾನಸಭೆ ಚುನಾವಣೆ 2023: ಕೈ ತಪ್ಪಿದ ಟಿಕೆಟ್: ಬೊಮ್ಮಾಯಿ ವಿರುದ್ಧ ನೆಹರು ಓಲೇಕಾರ್ ಕಿಡಿ
ಹಾವೇರಿ ಏಪ್ರಿಲ್ 13: ಮೂಲ ಬಿಜೆಪಿ ನಾಯಕರು ಟಿಕೆಟ್ ಕೈತಪ್ಪಿದ್ದಕ್ಕೆ ಕೆಂಡಾಮಂಡಲವಾಗಿದ್ದಾರೆ. ರಾಜ್ಯ ಮುಖ್ಯಮಂತ್ರಿ ವಿರುದ್ಧ ಏಕವಚನದಲ್ಲಿ ಶಾಸಕ ನೆಹರು ಓಲೇಕಾರ್ ವಾಗ್ದಾಳಿ ಮಾಡಿದ್ದಾರೆ. ಪಕ್ಷದವರೇ ಬಹಿರಂಗವಾಗಿ ಹಲವಾರು ಆರೋಪಗಳನ್ನು ಮಾಡಿದ್ದಾರೆ. ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ನೆಹರು ಓಲೇಕಾರ್, 'ನನಗೆ ಟಿಕೆಟ್ ಕೈ ತಪ್ಪುವುದಕ್ಕೆ ಬೊಮ್ಮಾಯಿ ಅವರೇ ಕಾರಣ' ಎಂದಿದ್ದಾರೆ.
'ಧಮ್ ಇದ್ದರೆ ಬೊಮ್ಮಾಯಿ ತೋರಿಸಲಿ, ನಮ್ಮ ತಾಕತ್ತು ಎಷ್ಟು ಇದೆ ಅಂತ ನಾವು ತೋರಿಸುತ್ತೇವೆ. ಅವರೂ ಅವರ ತಾಕತ್ತು ತೋರಿಸಲಿ. ಬೊಮ್ಮಾಯಿ ಸಾಕಷ್ಟು ಕಳಪೆ ಕೆಲಸ ಮಾಡಿದ್ದಾರೆ. 15000ಕೋಟಿ ಹನಿ ನೀರಾವರಿ ಹಣವನ್ನು ಕೊಳ್ಳೆ ಹೊಡೆದಿದ್ದಾರೆ. ಇದೆಲ್ಲವೂ ಬಯಲಾಗಲಿದೆ' ಎಂದು ಹಾವೇರಿಯಲ್ಲಿ ಶಾಸಕ ನೆಹರು ಓಲೇಕಾರ್ ಆಕ್ರೋಶಗೊಂಡಿದ್ದಾರೆ.

ಓಲೇಕಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಸವರಾಜ್ ಬೊಮ್ಮಾಯಿ ಅವರು,'15000ಕೋಟಿ ಹನಿ ನೀರಾವರಿ ಹಣವನ್ನು ಕೊಳ್ಳೆ ಹೊಡೆದಿದ್ದರೆ. ಅದರ ದಾಖಲೆ ತೋರಿಸಲಿ. ದಾಖಲೆ ಸಮೇತ ಆರೋಪ ಮಾಡಲಿ, ಹೇಳಿಕೆಯಿಂದ ಎಲ್ಲವೂ ನಿಜವಾಗುವುದಿಲ್ಲ. ಯಾವ ಆರೋಪ ಬೇಕಾದರೂ ಮಾಡಲಿ. ಯಾವುದೇ ಆರೋಪ ದಾಖಲೆ ಸಮೇತ ಮಾಡಲಿ' ಎಂದು ಸವಾಲು ಹಾಕಿದ್ದಾರೆ.
ಕಳೆದ ಎರಡು ದಿನಗಳಿಂದ ಬಿಜೆಪಿ ತನ್ನ ಮೊದಲ ಹಾಗೂ ಎರಡನೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಜೆಪಿಯಲ್ಲಿ ಮೂಲ ಹಾಗೂ ವಲಸೆ ಬಿಜೆಪಿಗರ ಪೈಪೋಟಿ ಹೆಚ್ಚಾಗಿದ್ದು ಟಿಕೆಟ್ ಬಡಿದಾಟ ಶುರುವಾಗಿದೆ. ಟಿಕೆಟ್ ಕೈತಪ್ಪಿದ್ದಕ್ಕೆ ಹಲವಾರು ಬಿಜೆಪಿ ಶಾಸಕರು ಬಹಿರಂಗವಾಗಿ ಅಸಮಧಾನವನ್ನು ಹೊರಹಾಕಿದ್ದಾರೆ.
ರಾಜ್ಯ ಚುನಾವಣೆ ದಿನಾಂಕ
ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದ ಚುನಾವಣೆ ನಡೆಯಲಿದ್ದು, ಏಪ್ರಿಲ್ 13 ರಂದು ಚುನಾವಣೆಗೆ ಅಧಿಕೃತ ಅಧಿಸೂಚನೆ ಪ್ರಕಟವಾಗಲಿದೆ. ಏಪ್ರಿಲ್ 20ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಏಪ್ರಿಲ್ 21ಕ್ಕೆ ನಾಮ ಪತ್ರ ಪರಿಶೀಲನೆ ನಡೆಯಲಿದ್ದು, ಏಪ್ರಿಲ್ 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುತ್ತದೆ. ಇನ್ನೂ ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಶನಿವಾರ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಮೇ 15 ರೊಳಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ ಎಂದು ರಾಜೀವ್ ಕುಮಾರ್ ತಿಳಿಸಿದ್ದರು.
ನೆಹರು ಓಲೇಕಾರ್ ಪುತ್ರರ ವಿರುದ್ಧ ಆರೋಪಗಳು
ಲಕ್ಷಾಂತರ ರೂಪಾಯಿ ಮೌಲ್ಯದ ಕಾಮಗಾರಿಯೊಂದನ್ನು ಹಾವೇರಿಯ ಬಿಜೆಪಿ ಶಾಸಕ ನೆಹರು ಓಲೆಕಾರ್ (BJP MLA Neharu Olekar) ಅವರು ತಮ್ಮ ಇಬ್ಬರು ಮಕ್ಕಳಿಗೆ ನೀಡಿದ್ದಾರೆ. ಈ ಸಂಬಂಧ ಶಾಸಕರಿಗೆ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾದ ಸ್ಥಿತಿ ಎದುರಾಗಿದೆ.
ಒಟ್ಟು ಸುಮಾರು 50 ಲಕ್ಷ ಮೊತ್ತದ ಕಾಮಗಾರಿಯನ್ನು ಹಾವೇರಿ ಬಿಜೆಪಿ ಶಾಸಕ ನೆಹರು ಓಲೇಕಾರ್ ಅವರು ತಮ್ಮ ಪುತ್ರರಾದ ಪುತ್ರರಾದ ಮಂಜುನಾಥ್, ದೇವರಾಜ್ ನೀಡಿದ್ದರು. ಈ ಆರೋಪದ ಮೇರೆಗೆ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಈ ಕುರಿತು ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶಾಸಕರು ಹಾಗೂ ಅವರ ಇಬ್ಬರು ಮಕ್ಕಳಿಗೆ 2 ವರ್ಷ ಜೈಲು ಶಿಕ್ಷೆ ನೀಡಿದೆ.
50 ಲಕ್ಷ ರೂ. ಮೊತ್ತದ ಕಾಮಗಾರಿ ಕಾಂಕ್ರೀಟ್ ರಸ್ತೆ ಸೇರಿದಂತೆ ಕೆಲವು ಕಾಮಗಾರಿಗಳಲ್ಲಿ ಶಾಸಕರಾದ ನೆಹರು ಓಲೆಕಾರ್ ಅವರ ವಿರುದ್ಧ ಸ್ವಜನ ಪಕ್ಷಪಾತದ ಆರೋಪ ಕೇಳಿ ಬಂದಿದ್ದು, ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಮೂರು ವರ್ಷಕ್ಕಿಂತ ಕಡಿಮೆ ಶಿಕ್ಷೆ ಇದಾಗಿರುವ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯದಿಂದಲೇ ಶಾಸಕರಿಗೆ ಜಾಮೀನು ಮಂಜೂರು ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.












Click it and Unblock the Notifications