Shakti Scheme: ಆಂಧ್ರದಲ್ಲಿ ರಾಜ್ಯ 'ಶಕ್ತಿ ಯೋಜನೆ' ಮಾದರಿ ಜಾರಿ: NDA ಮೈತ್ರಿಕೂಟ ಕರ್ನಾಟಕದಲ್ಲಿ ಅಧ್ಯಯನ!
ಬೆಂಗಳೂರು, ಜನವರಿ 03: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೇವೆ ನೀಡುತ್ತಿರುವ ಕರ್ನಾಟಕ ಸರ್ಕಾರ ಮಹತ್ವಾಕಾಂಕ್ಷೆಯ ಭರವಸೆಗಳಲ್ಲಿ ಒಂದಾದ 'ಶಕ್ತಿ ಯೋಜನೆ' ಯು ನೆರೆಯ ಆಂಧ್ರ ಪ್ರದೇಶದ ರಾಜ್ಯ ಸರ್ಕಾರದ ಗಮನ ಸೆಳೆದಿದೆ. ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೂಚನೆ ಮೇರೆಗೆ ಆಂಧ್ರ ಸಚಿವರ ತಂಡ ಬೆಂಗಳೂರಿಗೆ ಬಂದು ಬೀಡು ಬಿಟ್ಟಿದೆ. ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆ ಭರವಸೆ ಘೋಷಿಸಿದ್ದಂತೆ ಆಂಧ್ರ ಪ್ರದೇಶದಲ್ಲಿ NDA ಮೈತ್ರಿ ಪಕ್ಷ ತೆಲುಗು ದೇಶಂ ಪಕ್ಷವು (ಎನ್ಡಿಎ ಮೈತ್ರಿ ಪಕ್ಷ) ಅಧಿಕಾರಕ್ಕೆ ಬರುವ ಮೊದಲು ಉಚಿತ ಬಸ್ ಪ್ರಯಾಣ ಯೋಜನೆ ಘೋಷಣೆಇ ಮಾಡಿತ್ತು. ಇದೀಗ ಬಿಜೆಪಿ ನೇತೃತ್ವದ ಎನ್ಡಿಎ ಜೊತೆಗೆ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದಿದೆ. ಹೀಗಾಗಿ ಶಕ್ತಿ ಯೋಜನೆ ಅಲ್ಲಿ ಜಾರಿಗೆ ತರಲು ನಿರ್ಧರಿಸಿದೆ. ಇದಕ್ಕಾಗಿ ಅಧ್ಯಯನ್ನಕ್ಕೆ ರಾಜ್ಯಕ್ಕೆ ಸಚಿವರ ತಂಡ ಆಗಮಿಸಿದೆ.

ಆಂಧ್ರದ ಸಾರಿಗೆ ಸಚಿವ ರಾಮ್ ಪ್ರಸಾದ್ ರೆಡ್ಡಿ, ಆಂಧ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಸಂಧ್ಯಾರಾಣಿ, ಗೃಹ ಸಚಿವೆ ವಿ.ಅನಿತಾ ಅವರು ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ವಿವಿಧ ಬಸ್ ನಿಗಮದ ಅಧಿಕಾರಿಗಳ ಜೊತೆಗೆ ಶಾಂತಿನಗರದಲ್ಲಿ ಸಭೆ ನಡೆಸಿದರು.
ಆಂಧ್ರ ಸಚಿವರು ಶಕ್ತಿ ಯೋಜನೆ, ಉಚಿತ ಬಸ್ ಸಂಚಾರ, ಜನರ ಸ್ಪಂದನೆ ಬಗ್ಗೆ ನಿರ್ವಾಹಕರು ಮತ್ತು ಚಾಲಕರಿಂದ ಮಾಹಿತಿ ಪಡೆದರು. ಖದ್ದು ಜನರನ್ನು ನೆರೆ ರಾಜ್ಯದ ಸಚಿವರು ಮಾತನಾಡಿದರು. ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ 'ಶಕ್ತಿ' ಬಗ್ಗೆ ಆಂಧ್ರ ಸಚಿವರು ಹೇಳಿದ್ದೇನು?
ಆಂಧ್ರಪ್ರದೇಶ ಸಾರಿಗೆ ಸಚಿವ ರಾಮ್ ಪ್ರಸಾದ್ ರೆಡ್ಡಿ ಅವರು ಪ್ರತಿಕ್ರಿಯಿಸಿ, ಕರ್ನಾಟಕದಲ್ಲಿ ಶಕ್ತಿ ಯೋಜನೆಯ ಜಾರಿಯಿಂದ ಮಹಿಳೆಯರಿಗೆ ಬಹಳ ಉಪಯೋಗ ಆಗಿದೆ. ಸಾಕಷ್ಟು ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ನಮ್ಮ ರಾಜ್ಯ ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಘೋಷಣೆ ಮಾಡಿದ್ದೇವು.

ಇದೀಗ ಘೋಷಣೆಯಂತೆ ಯೋಜನೆ ಜಾರಿ ಮಾಡಬೇಕಿದೆ. ಕರ್ನಾಟಕದಲ್ಲಿ ಶಕ್ತಿ ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಸಿಎಂ ಚಂದ್ರಬಾಬು ನಾಯ್ಡು ಅವರ ಸೂಚನೆ ಮೇರೆಗೆ ಕರ್ನಾಟಕದಲ್ಲಿ ಅಧ್ಯಯನ ನಡೆಸಲು ಬಂದಿರುವುದಾಗಿ ಅವರು ತಿಳಿಸಿದರು.
ಶಕ್ತಿ ಯೋಜನೆ ಅನುಷ್ಠಾನ, ನಿರ್ವಹಣೆ ಕುರಿತು ಚರ್ಚೆ ಮಾಡಿ ಜಾರಿಗೆ ತರುತ್ತೇವೆ. ಈ ಯೋಜನೆಯ ಸದುಪಯೋಗದ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಮಾಸಿಕ ಗರಿಷ್ಠ 1500 ರೂ. ಉಳಿತಾಯ: ಗೃಹ ಸಚಿವೆ ವಿ.ಅನಿತಾ
ಚುನಾವಣೆ ಸಮಯದಲ್ಲಿ ಶಕ್ತಿ ಯೋಜನೆ ಜಾರಿಗೆ ತರುವುದಾಗಿ ಜನರಿಗೆ ಭರವಸೆ ನೀಡಿದ್ದೆವು. ಸೂಪರ್ 6ರಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯು ಸೇರಿತ್ತು. ಇದರ ಪೂರ್ವಾಪರ ವಿಚಾರಿಸಲು, ಅಭ್ಯಸಿಸಲು ಮೂವರು ಸಚಿವರ ಇಲ್ಲಿಗೆ ಬಂದಿರುವುದಾಗಿ ಗೃಹ ಸಚಿವೆ ವಿ.ಅನಿತಾ ತಿಳಿಸಿದ್ದಾರೆ.
ಇಂದು ಕರ್ನಾಟಕದಲ್ಲಿ ಮಹಿಳೆಯರು ಮತ್ತು ಕಂಡಕ್ಟರ್ ಗಳ ಜೊತೆ ಮಾತುಕತೆ ನಡೆಸಿದ್ದೇವೆ. ಸಾಕಷ್ಟು ಮಹಿಳೆಯರು ಈ ಯೋಜನೆಯಿಂದ ಉಪಯೋಗ ಪಡೆಯುತ್ತಿದ್ದಾರೆ ಎಂದಿದ್ದಾರೆ. ಯೋಜನೆಯಿಂದ ಬಸ್ ಚಾರ್ಜ್ನ 1000 ದಿಂದ 1500 ರೂಪಾಯಿವರೆಗೆ ಹಣ ಉಳಿತಾಯವಾಗುತ್ತಿದೆ ಎಂದು ನಮ್ಮ ಬಳಿ ಹೇಳಿಕೊಂಡಿದ್ದಾರೆ ಎಂದರು.
ಒಬ್ಬ ಮಹಿಳೆ ನನ್ನ ಬಳಿ ಆಧಾರ್ ಕಾರ್ಡ್ ಇದೆ ಅಂದ್ರೆ ನಮ್ಮ ಬಳಿ ಶಕ್ತಿ ಇದೆ ಎಂದರ್ಥವೆಂದು ಹೆಮ್ಮೆಯಿಂದ ತಿಳಿಸಿದ್ದಾರೆ. ಮಹಿಳೆಯರು ಮಾತ್ರವೇ ಬಸ್ ಗಳಲ್ಲಿ ಪ್ರಯಾಣ ಮಾಡುತ್ತಿಲ್ಲ. ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಿದ್ದೇನೆ ಎಂದು ಹೇಳಿದರು.












Click it and Unblock the Notifications