ಏನಿದು, ಬಿಜೆಪಿಯ ಚೀನಾ ಸೋಲಿಸಿ-ಭಾರತ ಗೆಲ್ಲಿಸೋಣ ಅಭಿಯಾನ?
ಬೆಂಗಳೂರು, ಜೂ. 14: ಕೊರೊನಾವೈರಸ್ ತಂದಿಟ್ಟಿರುವ ಲಾಕ್ಡೌನ್ ಹಿನ್ನೆಲೆಯಲ್ಲಿ ತಂತ್ರಜ್ಞಾನದ ಮೂಲಕ ಜನರಿಗೆ ತನ್ನ ಸಾಧನೆ ತೋರಿಸಲು ಕೇಂದ್ರ ಎನ್ಡಿಎ ಸರ್ಕಾರ ಮುಂದಾಗಿದೆ. ಕೇಂದ್ರದಲ್ಲಿ ಎರಡನೇ ಅವಧಿಯ ಮೊದಲ ವರ್ಷ ಪೂರೈಸಿರುವ ಕೇಂದ್ರ ಸರ್ಕಾರ ಡಿಜಿಟಲ್ ತಂತ್ರಜ್ಞಾನದ ಮೊರೆ ಹೋಗಿದೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ವರ್ಚುವಲ್ ರಾಲಿ ಮಾಡಲು ರಾಷ್ಟ್ರೀಯ ಬಿಜೆಪಿ ತೀರ್ಮಾನ ಮಾಡಿದೆ.
ಇದೇ ಹಿನ್ನೆಲೆಯಲ್ಲಿ "ಕರ್ನಾಟಕ ಜನಸಂವಾದ' ವರ್ಚುವಲ್ ಅಭಿಯಾನದ ಮಾಡಲು ಕೇಂದ್ರ ಬಿಜೆಪಿ ತೀರ್ಮಾನ ಮಾಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು, ದೆಹಲಿಯಿಂದ ರಾಜ್ಯದ ಜನೆತೆಯನ್ನು ಉದ್ದೇಶಿಸಿ ಇಂದು (ಜೂ.14) ಸಂಜೆ "ಕರ್ನಾಟಕ ಜನಸಂವಾದ' ವರ್ಚುವಲ್ ರಾಲಿ ಭಾಷಣವನ್ನು ಮಾಡಲಿದ್ದಾರೆ. ಸಂಜೆ 6 ಗಂಟೆಗೆ ಆರಂಭವಾಗಲಿರುವ ರಾಲಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುಖ್ಯ ಅತಿಥಿಯಾಗಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಅಧ್ಯಕ್ಷರಾಗಿ ಬೆಂಗಳೂರಿನ ಬಿಜೆಪಿ ಕಚೇರಿಯಿಂದ ರಾಲಿಯಲ್ಲಿ ಭಾಗಿಯಾಗಲಿದ್ದಾರೆ.

20 ಲಕ್ಷ ಜನರನ್ನು ತಲುಪುವ ಗುರಿ
ಫೇಸ್ಬುಕ್, ಯೂಟ್ಯೂಬ್ ಸಾಮಾಜಿಕ ಜಾಲತಾಣಗಳು ಸೇರಿದಂತೆ ವೆಬೆಕ್ಸ್, ಸ್ಥಳೀಯ ಮಾಧ್ಯಮಗಳ ಮೂಲಕ ರಾಜ್ಯದ 20 ಲಕ್ಷಕ್ಕೂ ಅಧಿಕ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇಯ ಅವಧಿಯ ಮೊದಲ ವರ್ಷದ ಸಾಧನೆಗಳನ್ನು ಜನರಿಗೆ ತಿಳಿಸುವ ಗುರಿ ಹೊಂದಲಾಗಿದೆ.
ಜೊತೆಗೆ ಸದ್ಯದ ಸ್ಥಿತಿಯಲ್ಲಿ ಕೊರೊನಾ ವೈರಸ್ ವಿರುದ್ಧದ ಹೋರಟದಲ್ಲಿ ಜನರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ, ಜಾಗೃತಿ ಕುರಿತು ಹಲವು ಮಾಹಿತಿಗಳನ್ನು ನಡ್ಡಾ ಕೊಡಲಿದ್ದಾರೆ. ಜನಸಂವಾದದ ಮೂಲಕ ದೇಶ, ರಾಜ್ಯದಲ್ಲಿ ನಿಧಾನವಾಗಿ ಹರಡುತ್ತಿರುವ ಕೊರೊನಾ ವೈರಸ್ ಬದುಕಿನ ಒಂದು ಭಾಗವನ್ನಾಗಿ ಮಾಡಿಕೊಂಡು ಜೀವಿಸುವುದು ಹೇಗೆ ಎನ್ನುವುದನ್ನು ಮನವರಿಕೆ ಮಾಡಿಕೊಡುವ ಜನಜಾಗೃತಿ ಅಭಿಯಾನವನ್ನು ಬಿಜೆಪಿ ಆರಂಭಿಸಲಿದೆ.

ಸಮರ್ಥ ನಾಯಕತ್ವ
ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ರಾಜ್ಯ ಬಿಜೆಪಿಯ 37 ಸಂಘಟನಾತ್ಮಕ ಜಿಲ್ಲೆಗಳಲ್ಲಿ 37 ಜಾಗೃತಿ ಅಭಿಯಾನಗಳನ್ನು ನಡೆಸಲು ಬಿಜೆಪಿ ತಯಾರಿ ಮಾಡಿಕೊಂಡಿದೆ. 311 ಮಂಡಲ ರಾಲಿ, ರಾಜ್ಯ ಘಟಕದ ವಿವಿಧ 5 ಮೋರ್ಚಾಗಳಿಂದ 115 ರಾಲಿನಡೆಸಲು ಬಿಜೆಪಿ ಉದ್ದೇಶಿಸಿದೆ. ರಾಜ್ಯಾದ್ಯಂತ 600ಕ್ಕೂ ಹೆಚ್ಚು ರಾಲಿಗಳ ಮೂಲಕ 1 ಕೋಟಿಗೂ ಅಧಿಕ ಜನರನ್ನು ತಲುಪುವ ಗುರಿಯನ್ನು ಬಿಜೆಪಿ ಹೊಂದಿದೆ.

ವಲಸೆ ಕಾರ್ಮಿಕರು
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಲಾಕ್ಡೌನ್ನಿಂದಾಗಿ ದೇಶದಲ್ಲಿ ಕೋಟ್ಯಂತರ ಜನರು ಕೆಲಸ ಕಳೆದುಕೊಂಡಿದ್ದಾರೆ. ವಲಸೆ ಕಾರ್ಮಿಕರು ತವರಿಗೆ ಮರಳಿದ್ದು ಅವರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ವಿವರಣೆ ಕೊಡುತ್ತಾರೆ ಎನ್ನಲಾಗಿದೆ.
ಸಣ್ಣ, ಅತಿ ಸಣ್ಣ, ಗೃಹ ಕೈಗಾರಿಕೆಗಳಿಗೆ ಆದ್ಯತೆ ನೀಡಿ ಉದ್ಯೋಗ ಒದಗಿಸುವ ಕಡೆಗೆ ಗಮನ ನೀಡಲಾಗಿದೆ. ರೈತ, ಕಾರ್ಮಿಕ, ಮಹಿಳೆ, ವಾಹನ ಚಾಲಕರು, ನೇಕಾರರು, ಮೊದಲಾದ ಫಲಾನುಭವಿಗಳ ಸಭೆ ನಡೆಯಲಿದೆ. ಅವರಿಗೆ ಕೋವಿಡ್ ಹಿನ್ನಲೆಯಲ್ಲಿ ಕೊಟ್ಟಿರುವ 20 ಲಕ್ಷ ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ನೀಡಿರುವ ಬಗ್ಗೆ ಇದೇ ವೇಳೆ ಮಾಹಿತಿ ನೀಡಲಾಗುವುದು.

ಚೀನಾಕ್ಕೆ ಕಡಿವಾಣ
ಚೀನಾ ಗಡಿಯಲ್ಲಿ ಮತ್ತೆ ಸಮಸ್ಯೆ ಸೃಷ್ಟಿಸಿದೆ. ಜೊತೆಗೆ ಇಡೀ ಜಗತ್ತಿಗೇ ಮಾರಣಾಂತಿಕ ವೈರಸ್ ಹರಡಿಸಿರುವ ದೇಶವನ್ನು ಆರ್ಥಿಕವಾಗಿ ಶಕ್ತಗುಂದಿಸುವ ಕುರಿತು ಪ್ರಧಾನಿ ಮಾಹಿತಿ ಕೊಡುತ್ತಾರಂತೆ. ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಿ ಅವರ ವಿರುದ್ಧ ಆರ್ಥಿಕ ಯುದ್ಧದಲ್ಲಿ ಗೆಲುವು ಸಾಧಿಸುವುದು, ಮೇಕ್ ಇನ್ ಇಂಡಿಯಾ ಹಾಗೂ ಮೇಡ್ ಇನ್ ಇಂಡಿಯಾವನ್ನು ಬೆಂಬಲಿಸಲು ಜನರ ಗಮನ ಸೆಳೆಯಲು ಬಿಜೆಪಿ ಗುರಿ ಹೊಂದಿದೆ.
ಗುಡಿ ಕೈಗಾರಿಕೆ, ಸಣ್ಣ ಕೈಗಾರಿಕೆ, ಸ್ಥಳೀಯವಾಗಿ ಉತ್ಪಾದನೆಯಾಗುವ ವಸ್ತು, ಉಪಕರಣಗಳನ್ನು ಖರೀದಸಲು ಪ್ರತ್ಸಾಹಿಸುವ ಮೂಲಕ ದೇಶದ ಆರ್ಥಿಕತೆಯನ್ನು ಬಲಪಡಿಸುವುದು ಅಭಿಯಾನದ ಮುಖ್ಯ ಗುರಿ. ಇದೇ ಉದ್ದೇಶದಿಂದ ಜೂನ್ 14ರ ಸಂಜೆ 7 ರಿಂದ 8 ಗಂಟೆವರೆಗೆ ಚೀನಾ ಸೋಲಿಸಿ-ಭಾರತ ಗೆಲ್ಲಿಸೋಣ ಅಭಿಯಾನ ನಡೆಸಲು ಭಾರತೀಯ ಜನತಾ ಪಕ್ಷ ಉದ್ದೇಶಿಸಿದೆ. ರಾಜ್ಯದ 58 ಸಾವಿರ ಬೂತ್ಗಳ 50 ಲಕ್ಷಕ್ಕೂ ಹೆಚ್ಚು ಮನೆಗಳಲ್ಲಿ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸ್ವದೇಶಿ ಅಭಿಯಾನದ ಪ್ರತಿಜ್ಞಾ ಸಂಕಲ್ಪ ತೆಗೆದುಕೊಳ್ಳುವ ಕಾರ್ಯಕ್ರಮ ಕೂಡ ನಡೆಯಲಿದೆ.












Click it and Unblock the Notifications