ಆರ್ಸಿಇಪಿಗೆ ಸಹಿ ಹಾಕದ ಮೋದಿ; ಕರ್ನಾಟಕ ಬಿಜೆಪಿ ಸ್ವಾಗತ
ಬೆಂಗಳೂರು, ನವೆಂಬರ್ 05 : ಭಾರತದ ಪ್ರಧಾನಿ ನರೇಂದ್ರ ಮೋದಿ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿದ್ದಾರೆ. ಕರ್ನಾಟಕ ಬಿಜೆಪಿ ಪ್ರಧಾನಿಗಳ ನಡೆಯನ್ನು ಸ್ವಾಗತಿಸಿದೆ.
ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಭಾರತದ ತೀರ್ಮಾನವನ್ನು ಭಾರತೀಯ ಜನತಾ ಪಕ್ಷ ಕರ್ನಾಟಕ ಸಂಭ್ರಮದಿಂದ ಸ್ವಾಗತಿಸುತ್ತದೆ ಎಂದು ಹೇಳಿದ್ದಾರೆ.
ವಾಸ್ತವಿಕ ಘಟ್ಟದಲ್ಲಿ ತನ್ನ ದೇಶದ ರೈತರ, ಬಡವರ ಮತ್ತು ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಹಿತಾಸಕ್ತಿಗಳನ್ನು ರಕ್ಷಿಸಲು ಪ್ರಧಾನಿ ನರೇಂದ್ರ ಮೋದಿಯವರು ಯಾವ ಮಟ್ಟಕ್ಕಾದರೂ ಹೋಗುತ್ತಾರೆ ಎಂದು ಈ ನಿರ್ಧಾರ ತೋರಿಸುತ್ತದೆ.

2009ರಲ್ಲಿ ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟದೊಂದಿಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಮಾಡಿಕೊಂಡ ಮುಕ್ತ ವ್ಯಾಪಾರ ಒಪ್ಪಂದ, ಸಮಾನತೆಯ ತತ್ವಕ್ಕೆ ವಿರೋಧ ವಾಗಿತ್ತು ಎಂದು ಕರ್ನಾಟಕ ಬಿಜೆಪಿ ಹೇಳಿದೆ.
ಈ ಪ್ರಮಾದದಿಂದ ಇಲ್ಲಿಯ ತನಕ ಆಗಿದ್ದು ಹಾನಿಯೇ ಹೊರತು ಬೇರೆನೂ ಅಲ್ಲ. ಆದರೆ, ಈ ಬಾರಿ ನಮ್ಮ ನೆಚ್ಚಿನ ಪ್ರಧಾನಿ ಮೋದಿಯವರು ಅಂತರ ರಾಷ್ಟ್ರೀಯ ಚಾಣಾಕ್ಷ, ಕುಟಿಲ ಸಂಧಾನಗಳಿಗೆ ಮಣಿಯದೇ ದೇಶದ ಆತಂಕ ಮತ್ತು ಸವಾಲುಗಳನ್ನು ಒಕ್ಕೂಟದ ರಾಷ್ಟ್ರಗಳಿಗೆ ಮನನ ಮಾಡಿಕೊಡಲು ಪ್ರಯತ್ನಿಸಿದ್ದಾರೆ.
ಆದರೆ, ಒಪ್ಪದಿದ್ದಾಗ ದೇಶದ ಹಿತಾಸಕ್ತಿಗಳನ್ನು ರಾಜಿ ಮಾಡಿಕೊಳ್ಳದೆ ಒಡಂಬಡಿಕೆಯಿಂದ ಹೊರಬಂದಿರುವುದು ನವ ಭಾರತದ ಆತ್ಮ ಶಕ್ತಿ ಸಂಕೇತವಾಗಿದೆ. ಭಾರತದ ನೆಚ್ಚಿನ ಪ್ರಧಾನಿ ಮೋದಿಯವರ ಈ ಐತಿಹಾಸಿಕ ನಿರ್ಧಾರವನ್ನು ಸ್ವಾಗತಿಸುತ್ತೇನೆ ಮತ್ತು ಅವರನ್ನು ಅಭಿನಂದಿಸುತ್ತೇನೆ ಎಂದು ಕಟೀಲ್ ಹೇಳಿದ್ದಾರೆ.
ಪ್ರತಿಪಕ್ಷ ಕಾಂಗ್ರೆಸ್ ಮತ್ತು ವಿವಿಧ ಸಂಘಟನೆಗಳು ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದಕ್ಕೆ ಸಹಿ ಹಾಕಬಾರದು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದವು.












Click it and Unblock the Notifications