HD Deve Gowda: ನನ್ನಪ್ಪನ ಮೊದಲ ಹೆಂಡತಿಗೆ 4 ಜನ ಮಕ್ಕಳು, ನಾನು ಎರಡನೇ ಹೆಂಡತಿಯ ಮಗ: ಹೆಚ್ ಡಿ ದೇವೇಗೌಡ
ಬೆಂಗಳೂರು, ಜೂನ್ 23: ನನ್ನ ಕಾಲಿಗೆ ನೋವು ಇರಬಹುದು, ಆದರೆ ತಲೆಗೆ ನೋವಿಲ್ಲ. ನಮ್ಮ ತಾಯಿ ಯಾವ ಎದೆ ಹಾಲು ಕುಡಿಸಿ ಸಾಕಿದ್ಲು ಗೊತ್ತಿಲ್ಲ. ನನ್ನ ತಾಯಿ ಈಶ್ವರನ ಭಕ್ತೆ, ಅವರ ಮಗ ನಾನು. ಮಾತೃ ದೇವೋಭವ, ಪಿತೃ ದೇವೋಭವ ಎನ್ನುತ್ತೇವೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಹೇಳಿದರು. ನನ್ನ ತಂದೆಯ ಮೊದಲ ಪತ್ನಿಗೆ ನಾಲ್ಕು ಮಕ್ಕಳು. ಅವರೆಲ್ಲರೂ ತೀರಿ ಹೋದರು. ಆಮೇಲೆ ನನ್ನ ದೊಡ್ಡಮ್ಮ ಕೂಡ ತೀರಿ ಹೋದರು. ನಾನು ಎರಡನೇ ಹೆಂಡತಿಯ ಮೊದಲನೇ ಮಗ. ನನಗೆ ಕಾಲು ನೋವು ಇರಬಹುದು. ಆದ್ರೆ ಪಾರ್ಲಿಮೆಂಟ್ ನಲ್ಲಿ ಹೋರಾಟ ಮಾಡುವ ಶಕ್ತಿ ಇದೆ. ಪ್ರಧಾನಮಂತ್ರಿಗಳನ್ನು ಒಪ್ಪಿಸುವ ಶಕ್ತಿಯಿದೆ ಎಂದು ದೇವೇಗೌಡರು ಹೇಳಿದರು.
ನಾಡಿನ ಸಂತಶ್ರೇಷ್ಟರ ಸಾನ್ನಿಧ್ಯದಲ್ಲಿ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ ಅವರಿಗೆ ಶ್ರೀ ಗಂಗ ಸಾಮ್ರಾಟ ಶ್ರಿಪುರುಷ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಮಾತನಾಡಿ, ಕರ್ನಾಟಕ ರಾಜ್ಯ ಎದುರಿಸುತ್ತಿರುವ ಜ್ವಲಂತ ನೀರಾವರಿ ಸಮಸ್ಯೆಗಳನ್ನು ಬಗೆಹರಿಸುವ ಶಕ್ತಿ ಇರುವುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾತ್ರ. 93ರ ಈ ಇಳಿ ವಯಸ್ಸಿನಲ್ಲಿ ನಾನು ಏನು ಮಾಡಬಲ್ಲೇ? ಆದರೆ ನಾನು ಒಂದು ಮಾತು ಹೇಳುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೇನೆ. ನರ್ಮದಾ ನದಿ ನೀರು ವಿಚಾರಕ್ಕೆ ಟ್ರಿಬ್ಯೂನಲ್ ಗೆ ಪತ್ರ ಬರೆದಿದ್ದಾರೆ. ನಾನು ಯಾರ ಬಗ್ಗೆಯೂ ಟೀಕೆ ಮಾಡಲ್ಲ. ಟ್ರಿಬ್ಯೂನಲ್ ಗೆ ಪತ್ರ ಬರೆದು ಕರ್ನಾಟಕದಲ್ಲಿ ನೀರಿನ ಸಮಸ್ಯೆ ಇಲ್ಲ ಅಂತ ಹೇಳಿದ್ದಾರೆ. ಅದಕ್ಕೆ ನಾನು ಪತ್ರ ಬರೆದಿದ್ದೇನೆ ಎಂದರು.

ಆಂಧ್ರಪ್ರದೇಶದ ಮುಖ್ಯಮಂತ್ರಿ ನನ್ನ ಜೊತೆಗೆ ಮಾತಾಡಿದರು. ಗೋದಾವರಿ ನದಿ ನೀರಿನಲ್ಲಿ ನಮಗೂ ಪಾಲು ಸಿಗಬೇಕು. ನನ್ನ ನಾಡಿನ ಸಮಸ್ಯೆಗಳು ಪರಿಹಾರ ಕಾಣಬೇಕು. ನನ್ನ ಜನರು ತಲೆತಲಾಂತರದಿಂದ ಅನುಭವಿಸೋದನ್ನು ಈ ಆತ್ಮ ನೋಡುತ್ತದೆ. ನಾನು ನರಕದಲ್ಲಿರುತ್ತೇನೋ, ಸ್ವರ್ಗದಲ್ಲಿರುತ್ತೇನೋ ಗೊತ್ತಿಲ್ಲ. ಆದರೆ, ನನ್ನ ಆತ್ಮ ನೋಡುತ್ತಿರುತ್ತದೆ. ಹೀಗಾಗಿ ಪ್ರಧಾನಿಗಳಿಗೆ ಪತ್ರ ಬರೆದಿದ್ದೇನೆ. ಗೋದಾವರಿ ನೀರಿಗೆ, ಮಹದಾಯಿ ನೀರು ಯೋಜನೆ ಆಗಬೇಕು. ಚಳ್ಳಕೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಕೋಲಾರದಂತಹ ಬಯಲು ಪ್ರದೇಶಗಳಿಗೆ ನೀರು ಸಿಗಬೇಕು. ರಾಜ್ಯಸಭೆಯಲ್ಲಿ ನನ್ನ ಹೋರಾಟ ಇನ್ನೊಂದು ಕಾಲ ವರ್ಷ ಇರಬಹುದು. ಆದ್ದರಿಂದ ಎಲ್ಲರೂ ಇವತ್ತು ನನನ್ನು ಎತ್ತಿಕೊಂಡು ಬಂದು ಕೂರಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಲ್ಲಾ ಸ್ವಾಮೀಜಿಗಳು ಆಶೀರ್ವಚನ ನೀಡಿ ದೇವೇಗೌಡರನ್ನು ಆಶೀರ್ವದಿಸಿದರು. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಸುಪ್ರೀಂ ಕೋರ್ಟ್ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ, ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದ ಗೌಡ, ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ದೇವೆಗೌಡರ ಕುಟುಂಬ ಸದಸ್ಯರು, ಅಸಂಖ್ಯಾತ ಅಭಿಮಾನಿಗಳು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಅಪರೂಪದ ಛಾಯಾಚಿತ್ರ ಪ್ರದರ್ಶನ
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಈ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ದೇವೇಗೌಡರ ಅಪರೂಪದ ಛಾಯಾಚಿತ್ರಗಳ ಪ್ರದರ್ಶನವನ್ನು ಉದ್ಘಾಟಿಸಿದರು. ದೇವೇಗೌಡರ ಜೀವಿತಾವಧಿಯ ಬಹುತೇಕ ಎಲ್ಲಾ ಚಿತ್ರಗಳ ಅಮೂಲ್ಯ ಸಂಗ್ರಹ ಅದಾಗಿತ್ತು. ಸಚಿವ ಕುಮಾರಸ್ವಾಮಿ ಅವರು ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ದೇವೇಗೌಡರು ತಮ್ಮ ಭಾಷಣದಲ್ಲಿ, ನಮ್ಮ ನಡುವಿನ ರೈತನ ಮಗ ಇಷ್ಟು ಎತ್ತರಕ್ಕೆ ಹೋಗಿದ್ದಾನೆ ಎನ್ನುವುದನ್ನು ಆ ಚಿತ್ರಗಳು ಹೇಳುತ್ತವೆ. ಈ ಸಂಸ್ಥೆಯ ಅನುಮತಿ ಪಡೆದು ಇನ್ನೊಂದೆರಡು ದಿನಗಳ ಕಾಲ ಪ್ರದರ್ಶನ ಮುಂದುವರಿಸಲು ಸಾಧ್ಯವೇ ಎಂದು ಮನವಿ ಮಾಡಿದರು.












Click it and Unblock the Notifications