ಅವಕಾಶ ಸಿಕ್ಕದರೆ ಮುಸ್ಲಿಂ ಸಮುದಾಯದವರು ಮುಖ್ಯಮಂತ್ರಿ ಯಾಕಾಗಬಾರದು: ಎಚ್.ಡಿ ಕುಮಾರಸ್ವಾಮಿ
ಕೋಲಾರ, ನವೆಂಬರ್ 22: ''ಸಾಮಾಜಿಕ ನ್ಯಾಯ ನೀಡಲು ಈಗಾಗಲೇ ದಲಿತ ಸಮುದಾಯದವರಿಗೆ ಡಿಸಿಎಂ ಮಾಡುತ್ತೇನೆಂದು ಘೋಷಣೆ ಮಾಡಿದ್ದೇನೆ. ಮಹಿಳೆಯರ ಸಬಲೀಕರಣಕ್ಕಾಗಿ ಅವರ ಏಳಿಗೆಗಾಗಿ ಅಗತ್ಯ ಬಿದ್ದರೆ ಜೆಡಿಎಸ್ ಮಹಿಳಾ ಡಿಸಿಎಂ ಅಗತ್ಯ ಎಂದರೆ ಅದಕ್ಕೂ ಸಿದ್ದವಿದ್ದೇವೆ. ಅದೇ ರೀತಿ ಅವಕಾಶ ಸಿಕ್ಕದರೆ ಮುಸ್ಲಿಂ ಸಮುದಾಯದವರು ಮುಖ್ಯಮಂತ್ರಿ ಯಾಕಾಗಬಾರದು'' ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಕೋಲಾರದಲ್ಲಿ ಮಂಗಳವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ದಲಿತ ಸಮುದಾಯದವರಿಗೆ ಡಿಸಿಎಂ ಸ್ಥಾನ ನೀಡುತ್ತೇನೆಂದು ಈಗಾಗಲೇ ಹೇಳಿದ್ದೇನೆ. ನಾನು ದಲಿತ ಸಮುದಾಯದ ಮತಗಳನ್ನು ಸೆಳೆಯಲು ಹೀಗೆ ಹೇಳಿಲ್ಲ. ಆ ಸಮುದಾಯದ ಸಮಸ್ಯೆಗಳನ್ನು ಆಲಿಸಿದ ಮೇಲೆ ಸಾಮಾಜಿಕ ನ್ಯಾಯ ಒದಗಿಸಲು ಹೇಳಿದ್ದೇನೆ. ಹಾಗೇ ಮಹಿಳೆಯರ ಸಮಸ್ಯೆಗಳನ್ನು ಆಲಿಸಿದ ಬಳಿಕ ಅವರ ಸಬಲೀಕರಣಕ್ಕಾಗಿ ಡಿಸಿಎಂ ಸ್ಥಾನ ಕೊಡಲು ಬದ್ದನಾಗಿದ್ದೇನೆ. ಮೈತ್ರಿ ಸರ್ಕಾರದಲ್ಲಿ ಪರಮೇಶ್ವರ್ ಅತ್ತು ಕರೆದು ಡಿಸಿಎಂ ಆದರೂ, ಅಧಿಕಾರ ಚಲಾವಣೆ ಮಾಡೋಕೆ ಆಗಿರಲಿಲ್ಲ, ಗೋವಿಂದ ಕಾರಜೋಳ ಅದೇ ಪರಿಸ್ಥಿತಿಯಾಗಿತ್ತು, ಆದ್ರೆ ನಮ್ಮ ಪಕ್ಷದಲ್ಲಿ ಹೆಬ್ಬೆಟ್ಟಿನ ಉಪಮುಖ್ಯಮಂತ್ರಿ ಇರುವುದಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡುವವರನ್ನು ಡಿಸಿಎಂ ಮಾಡುತ್ತೇವೆ.
ಕಲ್ಯಾಣ ಕರ್ನಾಟಕ ಭಾಗದಲ್ಲೂ ಜನತಾ ದಳಕ್ಕೆ ಶಕ್ತಿ ಹೆಚ್ಚಿದೆ. ಕುಮಾರಸ್ವಾಮಿ ಹೋದ್ರೆ ಜನ ಸೇರುತ್ತಾರೆ. ಆದ್ರೆ, ಮತವಾಗಲ್ಲ ಅಂತ ಇತ್ತು ಈ ಭಾರಿ ಅದು ಬದಲಾಗಲಿದೆ. ನಿನ್ನೆ ರೈತ ಮಕ್ಕಳಿಗೆ ವಧು ಸಿಕ್ತಿಲ್ಲ ಅಂತ ಓರ್ವ ರೈತ ಧನಂಜಯ ಕುಮಾರ್ ಪತ್ರ ಮೂಲಕ ಮನವಿ ಕೊಟ್ಟಿದ್ದ, ಹೀಗಾಗಿ ರೈತ ಚೈತನ್ಯ ಎಂಬ ಯೋಜನೆ ತರುತ್ತೆವೆ. ರೈತರಿಗೆ ಅನುಕೂಲವಾಗುವ ಯೋಜನೆ ತರುತ್ತೆವೆ ಎಂದರು.

ಏಕಾಏಕಿ ಕುಮಾರಸ್ವಾಮಿ ದಲಿತ ಸಿಎಂ ಘೋಷಣೆ ಮಾಡಿದ್ರು ಅಂತ ಚರ್ಚೆ ಆಗ್ತಿದೆ, ನಿನ್ನೆ ನರಸಾಪುರ ದಲಿತರು ನನ್ನನ್ನು ಭೇಟಿಯಾಗಿ ಅವರ ಸಮಸ್ಯೆ ಹೇಳಿಕೊಂಡಿದ್ದರು. ಚಾಮರಾಜನಗರ ನೀರನ್ನು ಮುಟ್ಟಿದ್ರು ಅದ್ಕೆ ನೀರು ಶುದ್ಧೀಕರಿಸಬೇಕು ಅಂತ ಹೇಳ್ತಿದ್ದಾರೆ. ದಲಿತರ ನಿರ್ಲಕ್ಷ್ಯ ಆಗ್ತಿರೋ ಬಗ್ಗೆ ಯುವಕರು ಮಾತಾಡಿದ್ರು, ಅದಕ್ಕೆ ದಲಿತರಿಗೆ ಉಪಮುಖ್ಯಮಂತ್ರಿ ಮಾಡ್ತೇನೆ ಅಂತ ಹೇಳಿದೆ. ಇದರಲ್ಲಿ ರಾಜಕೀಯ ಉದ್ದೇಶ ಇಲ್ಲ. ದಲಿತರಿಗೆ ಒಳ್ಳೆಯದಾಗಬೇಕು ಎಂಬ ಉದ್ದೇಶ ಮಾತ್ರ ಇದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಪಂಚರತ್ನ ಶುರುಮಾಡಿದ್ದು ಮತವನ್ನು ಪಡೆಯಲು ಅಲ್ಲ. ನಾನು ವೈಯಕ್ತಿಕವಾಗಿ ಎಷ್ಟು ಅಂತ ಸಹಾಯ ಮಾಡಲು ಸಾಧ್ಯ.? ಮನೆ ಬಳಿ ಸಮಸ್ಯೆ ಅಂತ ಸಾಕಷ್ಟು ಜನ ಬರುತ್ತಾರೆ. ವೈಯಕ್ತಿಕವಾಗಿ ಸಹಾಯ ಮಾಡಲು 50 ಲಕ್ಷದಿಂದ ಒಂದು ಕೋಟಿ ಹಣ ಬೇಕು, ಅದಕ್ಕೆ ಅಧಿಕಾರಕ್ಕೆ ಬಂದ್ರೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕೊಡಲು ಸಾಧ್ಯ ಎಂದರು.
ಇನ್ನೂ ನಿನ್ನೆ ಶಾಲೆಗೆ ಹೋಗುವ ಮಕ್ಕಳು ಬಂದು ನೀವು ಸಿಎಂ ಆಗ್ಬೇಕು ಎಂದರು. ಆರತಿ ಮಾಡಿದಾಗ ದಕ್ಷಿಣೆ ಕೊಟ್ಟಾಗ ದುಡ್ಡು ಬೇಡ ಒಳ್ಳೆ ಶಾಲೆ ಮಾಡಿ ಅಂತ ಮಕ್ಕಳು ಹೇಳಿದ್ರು, ಮುಂದೆ ದುಡ್ಡು ಕೊಟ್ಟು ಮತ ಪಡೆಯೋದನ್ನು ಜನ ನಿಷೇಧ ಮಾಡಿತ್ತಾರೆ. ಐದು ವರ್ಷಗಳ ಆಡಳಿತ ಸಿಕ್ಕರೆ ಇನ್ಮುಂದೆ ಜನರು ಹಣವನ್ನು ಪಡೆಯಬಾರದು, ಈ ರೀತಿಯ ಜನರ ಅಭಿವೃದ್ಧಿ ಮಾಡುತ್ತೆನೆ ಎಂದು ತಿಳಿಸಿದರು.

ಒಬ್ರು ಮೂರು ತಲೆಮಾರಿಗಾಗುವಷ್ಟು ದುಡ್ಡು ಮಾಡಿದ್ರು ಅಂತ ಹೇಳಿದ್ರು. ಈ ಹಣ ಯಾವುದು ಅಂದ್ರೆ ಕೆಸಿ ವ್ಯಾಲಿ, ಎತ್ತಿನಹೊಳೆ ಹಣ. ಈ ಮಾತು ಹೇಳಿದಾಗ ಕೂದಲು ಸ್ವಲ್ಲ ಇತ್ತು, ಇದೀಗ ಅದು ಉದುರಿಹೋಗಿದೆ. ಅಷ್ಟಿದ್ರೆ ಚುನಾವಣೆ ಮುಗಿಯೂದ್ರೊಳಗೆ ಎತ್ತಿನ ಹೊಳೆ ಮುಗಿಸಲಿ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಗೆ ಸವಾಲು ಹಾಕಿದರು.
ಕೋಲಾರದಲ್ಲಿ ಯಾರೇ ಸ್ಪರ್ಧೆ ಮಾಡಿದ್ರೂ ಸಿಎಂಆರ್ ಶ್ರೀನಾಥ್ ಅವರೇ ನಮ್ಮ ಅಭ್ಯರ್ಥಿ
ಇನ್ನೂ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆಂದು ಹೇಳಲಾಗುತ್ತಿದೆ. ಆದ್ದರಿಂದ ಜೆಡಿಎಸ್ ಅಭ್ಯರ್ಥಿಯನ್ನು ಬದಲಾವಣೆ ಮಾಡುತ್ತಾರೆಂಬ ಊಹಾಪೋಹಗಳು ಹರಿದಾಡುತ್ತಿದ್ದವು. ಆದ್ರೆ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಯಾರೇ ಸ್ಪರ್ಧೆ ಮಾಡಿದ್ರು ನಮ್ಮ ಅಭ್ಯರ್ಥಿಯನ್ನು ಬದಲಾವಣೆ ಮಾಡುವುದಿಲ್ಲ. ಈ ಹಿಂದೆ ಘೋಷಣೆ ಮಾಡಿದಂತೆ ಸಿಎಂಆರ್ ಶ್ರೀನಾಥ್ ಅವರೇ ನಮ್ಮ ಪಕ್ಷದ ಅಭ್ಯರ್ಥಿ ಎಂದು ಕುಮಾರಸ್ವಾಮಿ ಮತ್ತೊಮ್ಮೆ ಪುನರುಚ್ಚರಿಸಿದರು.
ಅಲ್ಲದೆ ಕೋಲಾರ ಕ್ಷೇತ್ರದಲ್ಲಿ ಯಾತ್ರೆ ವೇಳೆ ಒಂದು ಲಕ್ಷಕ್ಕೂ ಅಧಿಕ ಮಂದಿಯನ್ನು ಭೇಟಿ ಮಾಡಿದ್ದೇನೆ. ಇನ್ನು ಕೋಲಾರ - ಚಿಕ್ಕಬಳ್ಳಾಪುರ ಕ್ಷೇತ್ರದ ಎಲ್ಲಾ ಅಭ್ಯರ್ಥಿಗಳು ಫೈನಲ್ ಆಗಿದ್ದಾರೆ. ಕೆಜಿಎಫ್ ಕ್ಷೇತ್ರದಲ್ಲಿ ರಮೇಶ್ ಬಾಬು ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ. ಹಾಗಾಗಿ ಕೆಜಿಎಫ್ ಕ್ಷೇತ್ರದಲ್ಲೂ ಸಭೆ ಮಾಡಲಾಗುವುದು ಎಂದರು.












Click it and Unblock the Notifications