ಎಂಟಿಬಿ ನಾಗರಾಜ್ ಸ್ವತಂತ್ರ ಸ್ಪರ್ಧೆ ಹೇಳಿಕೆ: ಇಕ್ಕಟ್ಟಿನಲ್ಲಿ ಬಿಜೆಪಿ
Recommended Video
ಬೆಂಗಳೂರು, ಆಗಸ್ಟ್ 30: ಅನರ್ಹ ಶಾಸಕ ಎಂಟಿಬಿ ನಾಗರಾಜ್ ಹೊಸಕೋಟೆಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಹೇಳಿರುವುದು ಬಿಜೆಪಿಯಲ್ಲಿ ಗೊಂದಲ ಸೃಷ್ಟಿಸಿದೆ.
ಯಾಕೆಂದರೆ ಎಂಟಿಬಿ ನಾಗರಾಜ್ ಕಾಂಗ್ರೆಸ್ ರಾಜೀನಾಮೆ ಕೊಟ್ಟು ಬಿಜೆಪಿ ಸೇರ್ಪಡೆಯಾಗುತ್ತಾರೆ ಎನ್ನುವ ಸುದ್ದಿಗಳು ಹರಿದಾಡಿತ್ತು. ಈಗ ಏಕಾಏಕಿಯಾಗಿ ಸ್ವತಂತ್ರ ಸ್ಪರ್ಧೆ ಮಾಡುವ ವಿಚಾರ ಎಲ್ಲರಲ್ಲೂ ಗೊಂದಲ ಮೂಡಿಸಿದೆ.
ಹಾಗಾದರೆ ಮುಂಬರುವ ಚುನಾವಣೆಯಲ್ಲಿ ಹೊಸಕೋಟೆಯಲ್ಲಿ ಬಿಜೆಪಿಯು ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆಯೇ ಎನ್ನುವುದು ಮತ್ತೊಂದು ಕುತೂಹಲವಾಗಿದೆ. ಆ ಪ್ರದೇಶದಲ್ಲಿ ಬಚ್ಚೇಗೌಡ ಅವರ ಮಗನನ್ನು ನಿಲ್ಲಿಸುವ ಕುರಿತು ಆಲೋಚನೆಯೂ ಇದೆ.
ಹಾಗಾದರೆ ಎಂಟಿಬಿ ನಾಗರಾಜ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ನಿಂತರೂ ಬಿಜೆಪಿ ಬೆಂಬಲ ನೀಡಲಿದೆಯೇ ಅಥವಾ ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆಯೇ ಎನ್ನುವುದು ಸಧ್ಯದ ಕುತೂಹಲವಾಗಿದೆ.
ಎಂಟಿಬಿ ನಾಗರಾಜ್ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರ ವಿರುದ್ಧ ಗುಡುಗಿದ್ದಾರೆ. ನಾವು ಕಟ್ಟಿದ ಕಾಂಗ್ರೆಸ್ ಮನೆಯಲ್ಲಿ ಸಿದ್ದರಾಮಯ್ಯ ಸಂಸಾರ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಶರತ್ ಬಚ್ಚೇಗೌಡಗೆ ಟಿಕೆಟ್ ತಪ್ಪಿಸುವುದು ಸುಲಭವಿಲ್ಲ ಹೊಸಕೋಟೆಯಲ್ಲಿ ಬಚ್ಚೇಗೌಡ ಬಿಜೆಪಿಯನ್ನು ಅರಳಿಸಿದ್ದಾರೆ. ಹಾಗಾಗಿ ಅವರ ಮಗ ಶರತ್ ಬಚ್ಚೇಗೌಡ ಅವರಿಗೆ ಬಿಜೆಪಿ ಟಿಕೆಟ್ ತಪ್ಪಿಸುವುದು ಎಂಟಿಬಿಗೆ ಸುಲಭ ಸಾಧ್ಯವಿಲ್ಲ, ಹಾಗಾಗಿ ಪಕ್ಷೇತರವಾಗಿ ಚುನಾವಣೆಗೆ ಸ್ಪರ್ಧೆ ಮಾಡುವ ನಿರ್ಣಯಕ್ಕೆ ಬಂದಿರುವ ಸಾಧ್ಯತೆ ಇದೆ.
ಎಂಟಿಬಿ ನಾಗಾರಾಜ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡರೆ ಬಚ್ಚೇಗೌಡ ಅವರಿಗೆ ನೋವುಂಟು ಮಾಡಿದಂತಾಗುತ್ತದೆ.
ಒಂದೊಮ್ಮೆ ಬಚ್ಚೇಗೌಡ ಅವರ ಮಾತಿಗೆ ಸಮ್ಮತಿ ಸೂಚಿಸಿದರೆ ಎಂಟಿಬಿ ಅವರು ಪಕ್ಷೇತರರಾಗಿ ನಿಂತು ಗೆಲುವು ಸಾಧಿಸುವುದರಲ್ಲಿ ಎರಡು ಮಾತಿಲ್ಲ ಎನ್ನುವ ಭಯವೂ ಕಾಡುತ್ತಿದೆ.

ಸಿದ್ಧಾಂತವಿದ್ದರೆ ರಮೇಶ್ ಕುಮಾರ್ ಅವರನ್ನು ಉಚ್ಚಾಟಿಸಲಿ
ಕಾಂಗ್ರೆಸ್ಗೆ ತತ್ವ ಸಿದ್ದಾಂತ ಇದ್ದರೆ, ಮೊದಲು ಪಕ್ಷ ದಿಂದ ರಮೇಶ್ಕುಮಾರ್ ಅವರನ್ನ ಉಚ್ಚಾಟನೆ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡರಿಗೆ ಬಹಿರಂಗ ಸವಾಲು ಎಸೆದರು.

ಮೈತ್ರಿ ಸರ್ಕಾರ ಬೀಳಲು ಕಾಂಗ್ರೆಸ್, ಜೆಡಿಎಸ್ ಇಬ್ಬರು ನಾಯಕರೇ ಕಾರಣ
ಮೈತ್ರಿ ಸರ್ಕಾರ ಬೀಳಲು ಕಾಂಗ್ರೆಸ್, ಜೆಡಿಎಸ್ನ ಇಬ್ಬರು ನಾಯಕರೇ ಕಾರಣ. ನಾನು ಸಚಿವನಾಗಿದ್ದ ಸಮಯದಲ್ಲಿ ವಸತಿ ಇಲಾಖೆಯಲ್ಲಿ ಎಚ್.ಡಿ ಕುಮಾರಸ್ವಾಮಿ, ಎಚ್.ಡಿ ರೇವಣ್ಣ ಮೂಗು ತೂರಿಸುತ್ತಿದ್ದರು. ಹೀಗಾಗಿ ಸರಿಯಾಗಿ ಕೆಲಸಗಳು ಆಗುತ್ತಿರಲಿಲ್ಲ. ರಾಜೀನಾಮೆ ನೀಡುವುದಾಗಿ ನಮ್ಮ ನಾಯಕರ ಬಳಿ ಮೂರು ಬಾರಿ ಹೇಳಿದ್ದೆ. ಈ ಬಗ್ಗೆ ಅವರು ತಲೆಕೆಡಿಸಿಕೊಳ್ಳಲಿಲ್ಲ ಎಂದು ಆರೋಪಿಸಿದರು.

ಮೂಲ ಕಾಂಗ್ರೆಸಿಗರು ನಾವು , ಮಾತನಾಡೋದು ಇವರು
ನಾವು ಮೂಲ ಕಾಂಗ್ರೆಸ್ಸಿಗರು ನಮ್ಮ ಬಗ್ಗೆ ಮಾತನಾಡುವ ಇವರು. ಅಧಿಕಾರಕ್ಕಾಗಿ ಕಾಂಗ್ರೆಸ್ಗೆ ಬಂದವರು. ನಾವು ಕಟ್ಟಿದ ಕಾಂಗ್ರೆಸ್ ಮನೆಯಲ್ಲಿ ಇವರು ಸಂಸಾರ ಮಾಡುತ್ತಿದ್ದಾರೆ, ಜೆಡಿಎಸ್ ನಲ್ಲಿ ದೇವೇಗೌಡ ಅವರಿಂದ ಅಧಿಕಾರ ಸಿಗಲಿಲ್ಲ ಎಂದು ನಾವು ಕಟ್ಟಿದ ಕಾಂಗ್ರೆಸ್ ಮನೆಯಲ್ಲಿ ಬಂದು ನಮ್ಮ ಬಗ್ಗೆ ಮಾತನಾಡುತ್ತಾರೆ.

ಉಪ ಚುನಾವಣೆಯಲ್ಲಿ ಡಿಕೆಶಿ ನನ್ನ ವಿರುದ್ಧ ತೊಡೆ ತಟ್ಟಲಿ
ಉಪ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಬಂದು ನನ್ನ ಕ್ಷೇತ್ರದಲ್ಲಿ ತೊಡೆ ತಟ್ಟಲಿ, ಇಂತಹ ತೊಡೆ ತಟ್ಟುವವರನ್ನ ನಾನು ನೋಡಿದ್ದೇನೆ. ಮುಂದಿನ ದಿನಗಳಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರ ಬಗ್ಗೆ ಹೇಳುತ್ತೇನೆ ಎಂದು ಎಂಟಿಬಿ ನಾಗರಾಜ್ ತಿಳಿಸಿದರು.

ಮಧ್ಯಂತರ ಚುನಾವಣೆ ಸಧ್ಯಕ್ಕಿಲ್ಲ
ನ್ಯಾಯಾಲಯಕ್ಕಿಂತ ದೊಡ್ಡದು ಈ ದೇಶದಲ್ಲಿ ಯಾವುದೂ ಇಲ್ಲ. ನ್ಯಾಯಾಲಯಕ್ಕೆ ತಲೆ ಬಾಗುತ್ತೇನೆ. ಕೊನೆಯದಾಗಿ ಎರಡು ಉದ್ದೇಶಗಳಿವೆ ಒಂದು ರಾಜಕೀಯ ನಿವೃತ್ತಿ, ಇನ್ನೊಂದು ನನಗೆ ಯಾರ ಹಂಗೂ ಬೇಡ ಎಂದು ಕಾರ್ಯಕರ್ತರ ಅಭಿಪ್ರಾಯ ಪಡೆದು ಸ್ವತಂತ್ರವಾಗಿ ಸ್ಪರ್ಧೆ ಮಾಡಲು ನಿರ್ಧರಿಸುತ್ತೇನೆ. ಮಧ್ಯಂತರ ಚುನಾವಣೆ ಸದ್ಯಕ್ಕೆ ಬರುವುದಿಲ್ಲ. ಕೇಂದ್ರದಲ್ಲಿ ಸ್ಥಿರವಾದ ಸರ್ಕಾರ ಇದೆ, ರಾಜ್ಯದಲ್ಲಿ ಈಗ ಪ್ರಾರಂಭವಾಗಿದೆ ಎಂದು ಹೇಳಿದರು.












Click it and Unblock the Notifications