ಬದುಕಿದ್ದವರನ್ನು ಸಾಯಿಸಿದ್ದು 'ಶೋಭೆ' ತರುವಂಥದ್ದಲ್ಲ...
ಮಂಗಳೂರು, ಜುಲೈ 19: ಸಂಸದೆ ಶೋಭಾ ಕರಂದ್ಲಾಜೆ ಅವರು ಕೇಂದ್ರ ಗೃಹ ಸಚಿವರಿಗೆ ಬರೆದ ಪತ್ರವೊಂದು ಇದೀಗ ವಿವಾದಕ್ಕೆ ಹಾಗೂ ಆಕ್ಷೇಪಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಕೊಲೆಯಾದ ಹಿಂದೂ ಸಂಘಟನೆಗಳ ಕಾರ್ಯಕರ್ತರ ಪಟ್ಟಿಯ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
ಶರತ್ ಮಡಿವಾಳ ಕೊಲೆ ಪ್ರಕರಣ ಏನಾಯ್ತು ಸ್ವಾಮಿ?
ಗಂಭೀರವಾದ ಹಲ್ಲೆಯಾಗಿ ಈಗಲೂ ಜೀವಂತ ಇರುವವರು, ವೈಯಕ್ತಿಕ ಕಾರಣದಿಂದ ಕೊಲೆಯಾದವರು, ಅಪಘಾತಕ್ಕೆ ಈಡಾದವರ ಹೆಸರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ ಎಂಬ ವಿಚಾರ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆಗೆ ಸಂಬಂಧಿಸಿದಂತೆ ಕರಾವಳಿಯಲ್ಲಿ ಎನ್ ಐಎ ಘಟಕ ಆರಂಭಿಸುವಂತೆಯೂ ಶೋಭಾ ಕೇಂದ್ರಕ್ಕೆ ಪತ್ರ ಬರೆದಿದ್ದರು.
ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟು ಇಪ್ಪತ್ಮೂರು ಮಂದಿ ಕೊಲೆಯಾಗಿದ್ದು, ಮೂರು ವರ್ಷಗಳಲ್ಲಿ ಆರು ಮಂದಿ ಹಲ್ಲೆಗೊಳಗಾಗಿದ್ದರೆ ಎಂದು ಉಲ್ಲೇಖ ಮಾಡಲಾಗಿದೆ. ಆದರೆ ಹತ್ಯೆಯಾಗಿದ್ದಾರೆ ಎಂದು ಸಂಸದೆ ಉಲ್ಲೇಖಿಸಿರುವ ಪಟ್ಟಿಯಲ್ಲಿ ಎಡವಟ್ಟುಗಳಾಗಿವೆ.
ಪಟ್ಟಿಯಲ್ಲಿ ಮೊದಲನೇ ಹೆಸರು ಮೂಡಬಿದ್ರೆಯ ಅಶೋಕ್ ಪೂಜಾರಿ ಎಂದಾಗಿದ್ದು, ಅವರು 2015ರ ಸೆಪ್ಟೆಂಬರ್ 20ರಂದು ಕೊಲೆಯಾಗಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಆದರೆ ಅಶೋಕ್ ಪೂಜಾರಿ ಹಲ್ಲೆಗೊಳಗಾಗಿದ್ದು ನಿಜ. ಆದರೆ ಬದುಕುಳಿದಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ: ಶೋಭಾ ಕರಂದ್ಲಾಜೆ
ಮೂಡಬಿದ್ರೆ ಸಮೀಪದ ಹಂಡೇಲು ಎಂಬಲ್ಲಿ ಆ ಘಟನೆ ನಡೆದಿತ್ತು. ಬೈಕಿನಲ್ಲಿ ತೆರಳುತ್ತಿದ್ದ ವಾಸು ಆಚಾರ್ಯ ಮತ್ತು ಅಶೋಕ್ ಆಚಾರ್ಯ ಮೇಲೆ ತಲವಾರಿನಿಂದ ತಂಡವೊಂದು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿತ್ತು. ಆದರೆ ಇಬ್ಬರೂ ಗಂಭೀರ ಗಾಯಗೊಂಡಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದರು.
ಪಟ್ಟಿಯಲ್ಲಿ ಕಾರ್ತಿಕ್ ರಾಜ್ ಪ್ರಕರಣ
ಇಡೀ ರಾಜ್ಯದಲ್ಲೇ ಭಾರೀ ಸುದ್ದಿಯಾಗಿದ್ದ ಕೊಣಾಜೆಯ ಕಾರ್ತಿಕ್ ರಾಜ್ ಪ್ರಕರಣ ಕೂಡ ಸಂಸದೆ ಶೋಭಾರ ಪಟ್ಟಿಯಲ್ಲಿದೆ. ಆದರೆ ಕಾರ್ತಿಕ್ ರಾಜ್ ಹತ್ಯೆ ಕೌಟುಂಬಿಕ ಕಲಹದಿಂದ ನಡೆದಿರುವುದು ಎಂದು ಬಯಲಾದ ಮೇಲೆ ಎಲ್ಲರೂ ಸುಮ್ಮನಾಗಿದ್ದರು.
ಶೋಭಾ ಕರಂದ್ಲಾಜೆಯವರಿಗೆ ಮತೀಯ ಸಂಘಟನೆಗಳಿಂದ ಜೀವಬೆದರಿಕೆ
ಕಾರ್ತಿಕ್ ರಾಜ್ ಸಹೋದರಿಯೇ ಹತ್ಯೆಯ ರೂವಾರಿ ಎಂದು ಬಂಧಿತಳಾಗಿ, ಆಕೆಯ ಜೊತೆ ಸೇರಿಕೊಂಡು ಹತ್ಯೆ ಮಾಡಿದ ಗೌತಮ್ ಮತ್ತು ಗೌರವ್ ಎಂಬ ಇಬ್ಬರು ಆರೋಪಿಗಳು ಇಂದಿಗೂ ಜೈಲಿನಲ್ಲೇ ಇದ್ದಾರೆ. ಹೀಗಿದ್ದರೂ ಆ ಪ್ರಕರಣ ಕೂಡ ಸೇರಿಸಲಾಗಿದೆ.
ಸಂಘಟನೆಗಳಲ್ಲಿ ಗುರುತಿಸಿಕೊಳ್ಳದವರನ್ನು ಕೂಡ ಹಿಂದೂ ಕಾರ್ಯಕರ್ತರೆಂದು ಉಲ್ಲೇಖಿಸಲಾಗಿದೆ ಎಂದು ಹಲವರು ಕಿಡಿಕಾರಿದ್ದಾರೆ.