ಉಪ ಲೋಕಾಯುಕ್ತ ಪದಚ್ಯುತಿ, ಉಲ್ಟಾ ಹೊಡೆದ ಸರ್ಕಾರ!
ಬೆಂಗಳೂರು, ಡಿಸೆಂಬರ್ 22 : ಉಪ ಲೋಕಾಯುಕ್ತ ಸುಭಾಷ್ ಬಿ. ಅಡಿ ಅವರ ಪದಚ್ಯುತಿ ವಿಚಾರದಲ್ಲಿ ಕರ್ನಾಟಕ ಸರ್ಕಾರ ಉಲ್ಟಾ ಹೊಡೆದಿದೆ. 'ಉಪ ಲೋಕಾಯುಕ್ತ ಪದಚ್ಯುತಿ ನಿರ್ಣಯವನ್ನು ವಿಧಾನಸಭಾಧ್ಯಕ್ಷರು ಇನ್ನು ಒಪ್ಪಿಕೊಂಡಿಲ್ಲ' ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಮತ್ತು ಅಡ್ವೊಕೇಟ್ ಜನರಲ್ ಎಂ. ಆರ್. ನಾಯಕ್ ಅವರ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಜಯಚಂದ್ರ ಅವರು, 'ಹೈಕೋರ್ಟ್ನಲ್ಲಿ ಎಜಿ ಮಂಡಿಸಿದ ವಾದ ಸರಿ ಇದೆ. ಉಪಲೋಕಾಯುಕ್ತರ ಪದಚ್ಯುತಿಗೆ ಸ್ಪೀಕರ್ ಒಪ್ಪಿಗೆ ನೀಡಿಲ್ಲ' ಎಂದು ಸ್ಪಷ್ಟಪಡಿಸಿದರು. [ಉಪ ಲೋಕಾಯುಕ್ತ ಕೆಲಸಕ್ಕೆ ಅಡ್ಡಿ ಇಲ್ಲ]

'ವಿಧಾನಸಭೆ ಕಲಾಪದಲ್ಲಿ ಒಂದೇ ದಿನ ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತ ಪದಚ್ಯುತಿ ನಿರ್ಣಯವನ್ನು ಮಂಡನೆ ಮಾಡಿದ್ದರಿಂದ ಗೊಂದಲ ಉಂಟಾಗಿದೆ. ಲೋಕಾಯುಕ್ತರ ಪದಚ್ಯುತಿಗೆ ಸ್ಪೀಕರ್ ಒಪ್ಪಿಗೆ ನೀಡಿದ್ದಾರೆ. ಉಪ ಲೋಕಾಯುಕ್ತ ಪದಚ್ಯುತಿಗೆ ಒಪ್ಪಿಗೆ ನೀಡಿಲ್ಲ' ಎಂದು ಜಯಚಂದ್ರ ಹೇಳಿದರು. [ಉಪ ಲೋಕಾಯುಕ್ತರ ಪದಚ್ಯುತಿ]
ನಿರ್ಧಾರ ಸ್ಪೀಕರ್ಗೆ ಬಿಟ್ಟಿದ್ದು : 'ಉಪ ಲೋಕಾಯುಕ್ತರ ಪದಚ್ಯುತಿ ವಿಚಾರ ಸ್ಪೀಕರ್ ಮುಂದೆ ಇದೆ. ಪ್ರಸ್ತಾವವನ್ನು ಒಪ್ಪುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ. ಪದಚ್ಯುತಿ ಬಗ್ಗೆ ನೀಡಿರುವ ದಾಖಲೆಗಳನ್ನು ನೋಡಿ ಅವರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ' ಎಂದು ಜಯಚಂದ್ರ ವಿವರಿಸಿದರು. [ಲೋಕಾಯುಕ್ತ ಪದಚ್ಯುತಿ ನಿರ್ಣಯ ಹೇಗೆ?]
ಹೈಕೋರ್ಟ್ಗೆ ಅರ್ಜಿ : ತಮ್ಮ ವಿರುದ್ಧ ಪದಚ್ಯುತಿ ನಿರ್ಣಯ ಮಂಡನೆ ಮಾಡಿರುವುದನ್ನು ಪ್ರಶ್ನಿಸಿ ಉಪ ಲೋಕಾಯುಕ್ತ ಸುಭಾಷ್ ಬಿ ಅಡಿ ಅವರು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಉಪ ಲೋಕಾಯುಕ್ತರು ಕಾರ್ಯ ನಿರ್ವಹಿಸಬಹುದು ಎಂದು ಕರ್ನಾಟಕ ಸರ್ಕಾರ ಕೋರ್ಟ್ಗೆ ಲಿಖಿತ ಹೇಳಿಕೆ ನೀಡಿದೆ. ಕೋರ್ಟ್ ವಿಚಾರಣೆಯನ್ನು ಜನವರಿಗೆ ಮುಂದೂಡಿದೆ.












Click it and Unblock the Notifications