ಕರ್ನಾಟಕ; ಜೂನ್ನಲ್ಲಿ ಶೇ 61ರಷ್ಟು ಮಳೆ ಕೊರತೆ, ಜುಲೈನಲ್ಲಿ?
ಬೆಂಗಳೂರು, ಜೂನ್ 26; ಸರ್ಕಾರಿ ದಾಖಲೆಗಳ ಪ್ರಕಾರ ಜೂನ್ 1 ರಿಂದ ಸೆಪ್ಟೆಂಬರ್ 30ರ ತನಕ ನೈಋತ್ಯ ಮುಂಗಾರು ಹಂಗಾಮಿನ ಮಳೆ ಸುರಿಯುತ್ತದೆ. ಆದರೆ ಜೂನ್ 26 ಬಂದರೂ ಈ ಬಾರಿ ಮಳೆಯ ಸುಳಿವಿಲ್ಲ. ಮಳೆಗಾಲದಲ್ಲಿ ಅಬ್ಬರಿಸುವಂತಹ ಮಳೆ ಇನ್ನೂ ಯಾವ ಜಿಲ್ಲೆಯಲ್ಲಿಯೂ ಸುರಿದಿಲ್ಲ. ಹಳ್ಳ, ನದಿಗಳಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಜಲಾಶಯಗಳು ಖಾಲಿಯಾಗಿದ್ದು, ಬರದ ಛಾಯೆ ಆವರಿಸಿದೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಕರ್ನಾಟಕದಲ್ಲಿನ ಜೂನ್ ತಿಂಗಳ ಮಳೆ ಕೊರತೆಯ ಬಗ್ಗೆ ವರದಿಯೊಂದನ್ನು ನೀಡಿದೆ. ಮೇ ತಿಂಗಳಿನಲ್ಲಿ ನೀಡಿದ ವರದಿಯಲ್ಲೇ ಜೂನ್ನಲ್ಲಿ ಮಳೆ ಕೊರತೆ ಆಗಲಿದೆ ಎಂದು ಹೇಳಿತ್ತು. ಜುಲೈ ತಿಂಗಳಿನಲ್ಲಿ ರಾಜ್ಯ ಹವಾಮಾನ ಹೇಗಿರಲಿದೆ?, ಎಷ್ಟು ಮಳೆಯಾಗಲಿದೆ ಎಂಬ ಮುನ್ಸೂಚನೆ ಎರಡು ದಿನದಲ್ಲಿ ಬಿಡುಗಡೆಯಾಗಲಿದೆ.

ಜೂನ್ನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿತ್ತು. ಅದರಂತೆ ಈ ತಿಂಗಳು ಮಳೆಯ ಕೊರತೆ ಉಂಟಾಗಿ, ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಕುಡಿಯುವ ನೀರಿಗಾಗಿ ಸಹ ಜನರು ಪರಿತಪಿಸುವ ಪರಿಸ್ಥಿತಿ ಬಂದಿದೆ. ಜುಲೈನಲ್ಲಿ ಉತ್ತಮವಾಗಿ ಮಳೆಯಾಗಲಿ ಎಂದು ಜನರು ಪ್ರಾರ್ಥಿಸುತ್ತಿದ್ದಾರೆ.
ಎಷ್ಟು ಮಳೆಯ ಕೊರತೆ?; ಭಾರತೀಯ ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಜೂನ್ 1 ರಿಂದ 25ರ ತನಕ ರಾಜ್ಯಾದ್ಯಂತ ವಾಡಿಕೆಯಂತೆ 160 ಮಿ. ಮೀ. ಮಳೆಯಾಗಬೇಕಿತ್ತು. ಆದರೆ ಕೇವಲ 63 ಮಿ. ಮೀ. ಮಳೆಯಾಗಿದ್ದು, ಶೇ 61ರಷ್ಟು ಮಳೆ ಕೊರತೆ ಆಗಿದೆ. ಅದರಲ್ಲೂ ಹೆಚ್ಚು ಮಳೆಯಾಗುವ ಮಲೆನಾಡು ಭಾಗದಲ್ಲಿಯೇ ಶೇ 77ರಷ್ಟು ಮಳೆ ಕೊರತೆ ಕಂಡುಬಂದಿದೆ.
ಕರಾವಳಿ ಭಾಗದಲ್ಲಿ ಶೇ 66, ಉತ್ತರ ಕರ್ನಾಟಕ ಭಾಗದಲ್ಲಿ ಶೇ 58, ದಕ್ಷಿಣ ಕರ್ನಾಟಕದಲ್ಲಿ ಶೇ 22ರಷ್ಟು ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದೆ. ಜೂನ್ನಲ್ಲಿ ಮಳೆ ಕೊರತೆಯಾದ ಕಾರಣ ರೈತರು ಕಂಗಾಲಾಗಿದ್ದಾರೆ. ಬಿರುಸು ಪಡೆಯಬೇಕಿದ್ದ ಕೃಷಿ ಚಟುವಟಿಕೆಗಳಿಗೆ ಭಾರೀ ಹಿನ್ನಡೆ ಉಂಟಾಗಿದೆ.
ಶುಕ್ರವಾರದಿಂದ ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮಳೆಯಾಗುತ್ತಿದೆ. ಅಲ್ಲದೇ ಉತ್ತರಾಖಂಡ, ಮುಂಬೈ, ನವದೆಹಲಿ, ಅಸ್ಸಾಂ ಮುಂತಾದ ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಎರಡು ಚಂಡಮಾರುತದ ಪರಿಣಾಮದ ಬಳಿಕ ದೇಶದಲ್ಲಿ ನೈಋತ್ಯ ಮುಂಗಾರು ಮಳೆಯು ಆರಂಭಗೊಂಡಿದೆ ಎಂಬ ಸೂಚನೆ ಸಿಕ್ಕಿದೆ.
ಜುಲೈ ತಿಂಗಳಿನಲ್ಲಿ ಭಾರತದಲ್ಲಿ ಎಷ್ಟು ಮಳೆಯಾಗಲಿದೆ?, ಕರ್ನಾಟಕದಲ್ಲಿಯೂ ಮಳೆ ಕೊರತೆ ಆಗಲಿದೆಯೇ? ಎಂಬ ವರದಿಯನ್ನು ಭಾರತೀಯ ಹವಾಮಾನ ಇಲಾಖೆ ಜೂನ್ 28ರಂದು ಬಿಡುಗಡೆ ಮಾಡಲಿದೆ. ಜೂನ್ನಲ್ಲಿ ಮಳೆ ಕಡಿಮೆಯಾಗಲಿದೆ. ಜುಲೈ ಮತ್ತು ಆಗಸ್ಟ್ನಲ್ಲಿ ವಾಡಿಕೆಯಷ್ಟು ಮಳೆಯಾಗಲಿದೆ ಎಂದು ಏಪ್ರಿಲ್ ತಿಂಗಳಿನಲ್ಲಿ ಐಎಂಡಿ ವರದಿ ಹೇಳಿತ್ತು.
ಯೆಲ್ಲೋ ಅಲರ್ಟ್ ಮುಂದುವರಿಕೆ; ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಜೂನ್ 27ರ ತನಕ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದ್ದು, ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿ ಭಾಗದಲ್ಲಿ ಗಂಟೆಗೆ 44 ರಿಂದ 48 ಕಿ. ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ, ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಎಚ್ಚರಿಕೆ ನೀಡಲಾಗಿದೆ.
ಶನಿವಾರ ಮತ್ತು ಭಾನುವಾರ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿಯೂ ಮಳೆಯಾಗಿದೆ. ಮುಂದಿನ 48 ಗಂಟೆಗಳಲ್ಲಿ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ಉತ್ತಮ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ಎರಡು ದಿನಗಳ ಕಾಲ ಮಳೆಯ ಮುನ್ಸೂಚನೆ ಇಲ್ಲ. ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಸೋಮವಾರ ಸಾಧಾರಣ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರದಿಂದ ಉತ್ತಮ ಮಳೆಯಾಗುತ್ತಿದೆ. ಕಾರವಾರ, ಅಂಕೋಲಾ, ಕುಮುಟಾ, ಹೊನ್ನಾವರ ಮತ್ತು ಭಟ್ಕಳ ತಾಲೂಕಿನಲ್ಲಿ ಮಳೆಯಾಗಿದೆ.












Click it and Unblock the Notifications