ಹ್ಯಾರೀಸ್ ಪುತ್ರನಿಂದ ಹಲ್ಲೆ : ಯಾರು, ಏನು ಹೇಳಿದರು?
Recommended Video
ಬೆಂಗಳೂರು, ಫೆಬ್ರವರಿ 18 : ಬೆಂಗಳೂರಿನ ಶಾಂತಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹ್ಯಾರೀಸ್ ಪುತ್ರ ಮೊಹಮ್ಮದ್ ನಲಪಾಡ್ ಯುವಕನ ಮೇಲೆ ಹಲ್ಲೆ ನಡೆಸಿದ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.
ನಗರದ ಯುಬಿ ಸಿಟಿಯಲ್ಲಿರುವ ರೆಸ್ಟೋರೆಂಟ್ನಲ್ಲಿ ಶನಿವಾರ ರಾತ್ರಿ ಮೊಹಮ್ಮದ್ ನಲಪಾಡ್ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಯುವಕ ವಿದ್ವತ್ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹ್ಯಾರೀಸ್ ಪುತ್ರ ಮೊಹಮ್ಮದ್ ನಲಪಾಡ್ ಉಚ್ಚಾಟನೆ
ಬೆಂಗಳೂರು ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದ ಮೊಹಮ್ಮದ್ ನಲಪಾಡ್ ಹ್ಯಾರೀಸ್ ಅವರನ್ನು 6 ವರ್ಷಗಳ ಅವಧಿಗೆ ಪಕ್ಷದ ಸದಸ್ಯತ್ವದಿಂದ ಉಚ್ಛಾಟನೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಆದೇಶ ಹೊರಡಿಸಿದ್ದಾರೆ.
ಶಾಂತಿನಗರ ಶಾಸಕ ಹ್ಯಾರೀಸ್ ಪುತ್ರನ ಮೇಲೆ ಹಲ್ಲೆ ಪ್ರಕರಣ
ಮೊಹಮ್ಮದ್ ನಲಪಾಡ್ ಅವರು ಹಲ್ಲೆ ನಡೆಸಿರುವ ಬಗ್ಗೆ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. 'ಅಪರಾಧಿಗಳು ಯಾರೇ ಆಗಿದ್ದರೂ ಅವರಿಗೆ ಕಾನೂನಿನ ಅನ್ವಯ ಶಿಕ್ಷೆಯಾಗಲಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟ್ ಮಾಡಿದ್ದಾರೆ.
ಮೊಹಮ್ಮದ್ ನಲಪಾಡ್ ತಲೆಮರೆಸಿಕೊಂಡಿದ್ದು, ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಕೃತ್ಯದ ಬಗ್ಗೆ ಯಾರು ಏನು ಹೇಳಿದರು ಚಿತ್ರಗಳಲ್ಲಿ ನೋಡಿ.....
ಸೌಜನ್ಯದಿಂದ ವರ್ತಿಸಬೇಕು
'ಜನ ಪ್ರತಿನಿಧಿಗಳ ಮಕ್ಕಳು ಸೌಜನ್ಯದಿಂದ ವರ್ತಿಸಬೇಕು. ಹ್ಯಾರೀಸ್ ಮಗ ಅಮಾಯಕನ ಮೇಲೆ ಮಾಡಿದ ಹಲ್ಲೆ ಖಂಡನೀಯ. ಕಾಂಗ್ರೆಸ್ ಪಕ್ಷದಿಂದ ಅವರನ್ನು ಉಚ್ಚಾಟನೆ ಮಾಡಿರುವುದು ದೊಡ್ಡ ನಾಟಕ. ಚುನಾವಣೆ ಸಮೀಪದಲ್ಲಿದೆ ಹೀಗಾಗಿ ಉಚ್ಛಾಟನೆ ಗಿಮಿಕ್ ಮಾಡಿದ್ದಾರೆ. ಕೆಲವು ದಿನಗಳ ನಂತರ ಮತ್ತೇ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ. ಪೊಲೀಸರು ಪ್ರಭಾವಕ್ಕೆ ಒಳಗಾಗದೇ ಹ್ಯಾರೀಸ್ ಪುತ್ರನನ್ನು ಬಂಧಿಸಬೇಕು' ಎಂದು ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದಾರೆ.
ಕಾನೂನು ಕ್ರಮ ಕೈಗೊಳ್ಳಬೇಕು
'ಯಾವುದೇ ಪಕ್ಷದ ನಾಯಕರ ಮಕ್ಕಳಾಗಿರಲಿ. ಅದು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾವುದೇ ಪಕ್ಷವಾಗಿರಲಿ ನಾಯಕರ ಮಕ್ಕಳು ಗೂಂಡಾಗಿರಿ ಮಾಡಿದ್ದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಕಾನೂನು ಎಲ್ಲರಿಗೂ ಒಂದೇ' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ್ ಹೇಳಿದರು.
|
ತಪ್ಪು ಯಾರು ಮಾಡಿದ್ದರೂ ಶಿಕ್ಷೆಯಾಗಲಿದೆ
'ಯಾರು ತಪ್ಪು ಮಾಡಿದ್ದರೂ ಶಿಕ್ಷೆಯಾಗಲಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟ್ ಮಾಡಿದ್ದಾರೆ.
ಪೊಲೀಸರಿಗೆ ಸೂಚನೆ ನೀಡಿದ್ದೇನೆ
'ಕಬ್ಬನ್ ಪಾರ್ಕ್ ಪೊಲೀಸರಿಗೆ ಇಂದು ಸಂಜೆಯೊಳಗೆ ಮೊಹಮ್ಮದ್ ನಲಪಾಡ್ ಬಂಧಿಸುವಂತೆ ಸೂಚನೆ ನೀಡಿದ್ದೇನೆ. ಸಂಜೆಯೊಳಗೆ ಬಂಧಿಸದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ವಿದ್ವತ್ ಅವರ ಮುಖ ಊದಿಕೊಂಡಿದೆ' ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಜನಸಾಮಾನ್ಯರ ಮೇಲೆ ಹಲ್ಲೆ ಮಾಡಬಾರದು
'ವಿದ್ವತ್ ತಂದೆ ಜೊತೆ ಮಾತನಾಡಿದ್ದೇನೆ. ಆತ ನನಗೆ ಪರಿಚಿತ, ಚಿಕ್ಕಂದಿನಿಂದಲೂ ಆತನನ್ನುನೋಡಿದ್ದೇನೆ. ರಾಜಕಾರಣಿ ಗಳು ಜನರ ರಕ್ಷಣೆಗೆ ಇದ್ದಾರೆ. ರಾಜಕಾರಣಿಗಳ ಮಕ್ಕಳು ಜನಸಾಮಾನ್ಯರ ಮೇಲೆ ಹಲ್ಲೆ ನಡೆಸಬಾರದು. ಹ್ಯಾರೀಸ್ ನನ್ನ ಸ್ನೇಹಿತ ಆದರೆ, ಅವರ ಮಗ ಮಾಡಿರುವ ಕೃತ್ಯವನ್ನು ನಾನು ಖಂಡಿಸುತ್ತೇನೆ' ಎಂದು ಸಂಸದ ಪಿ.ಸಿ.ಮೋಹನ್ ಹೇಳಿದರು.
|
ಕಾನೂನಿನ ಮುಂದೆ ಎಲ್ಲರೂ ಒಂದೇ
'ಕಾನೂನಿನ ಮುಂದೆ ಎಲ್ಲರೂ ಸಮಾನರು' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕಾನೂನು ಸುವ್ಯವಸ್ಥೆ ಸರಿ ಇಲ್ಲ
'ಶಾಸಕರ ಮಗ ಒಬ್ಬ ಅಮಾಯಕನ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಿದ್ದಾನೆ. ಶಾಸಕರ ಪುತ್ರ ಎಂಬ ಅಹಂನಿಂದ ಆಸ್ಪತ್ರೆಯಲ್ಲೂ ಹಲ್ಲೆ ನಡೆಸಿದ್ದಾರೆ. ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಹಲ್ಲೆಗೊಳಗಾದವನ ವಿರುದ್ದವೇ ಪೊಲೀಸರು ಷಡ್ಯಂತ್ರ ರೂಪಿಸುತ್ತಿದ್ದಾರೆ. ಪೊಲೀಸರು ಶಾಸಕ ಹ್ಯಾರೀಸ್ ಕೈಗೊಂಬೆಯಾಗಿದ್ದಾರೆ' ಎಂದು ಬಿಜೆಪಿ ನಾಯಕ ಆಯನೂರು ಮಂಜುನಾಥ್ ಹೇಳಿದ್ದಾರೆ.
ರಾಜಕೀಯಕ್ಕೆ ಸಂಬಂಧವಿಲ್ಲದ ವಿಚಾರ
'ಹ್ಯಾರೀಸ್ ಮಗನ ಗೂಂಡಾಗಿರಿ ಪ್ರಕರಣ ಅದು ಅವರ ವೈಯಕ್ತಿಕ ವಿಷಯ. ಇದು ಹ್ಯಾರೀಸ್ ಅವರ ರಾಜಕೀಯಕ್ಕೆ ಸಂಬಂಧವಿಲ್ಲದ ವಿಚಾರ. ಶಾಸಕ ಹ್ಯಾರೀಸ್ ಅವರ ವಿಷಯಕ್ಕೆ ಸಂಬಂಧಿಸಿದ್ದಾದರೆ ರಾಜಕೀಯ ಏನ್ನಬಹುದಿತ್ತು. ಆದರೆ, ಕಾನೂನು ಬಾಹಿರ ವರ್ತನೆ ಯಾರು ಮಾಡಿದರೂ ತಪ್ಪು ಅದನ್ನು ಒಪ್ಪಲು ಸಾಧ್ಯವಿಲ್ಲ' ಎಂದು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಟಿ ಭಾವನ ಹೇಳಿದ್ದಾರೆ.
|
ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ
'ಮೊಹಮ್ಮದ್ ನಲಪಾಡ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಹೇಳಿದ್ದಾರೆ