ಮೋದಿ ಎನ್ನುವ 'ಭ್ರಮೆ' ಬಿಡಿ: ಬಿಎಸ್ವೈ ಹೇಳಿಕೆಯ ಅರ್ಥವಾದರೂ ಏನು?
ಎರಡು ದಿನಗಳ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ದಾವಣಗೆರೆಯಲ್ಲಿ ಮುಕ್ತಾಯಗೊಂಡಿದೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಹೇಗೆ ಗಟ್ಟಿಗೊಳಿಸಬೇಕು ಮತ್ತು ಚುನಾವಣೆಯನ್ನು ಎದುರಿಸುವ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಸವಿಸ್ತಾರವಾಗಿ ಮಾತನಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ವಿರೋಧ ಪಕ್ಷಗಳು ಬಲವೃದ್ದನೆಗೊಳ್ಳುತಿರುವ ಬಗ್ಗೆ ಯಡಿಯೂರಪ್ಪನವರು ಸ್ವಪಕ್ಷೀಯರಿಗೆ ಬುದ್ದಿಮಾತನ್ನು ಹೇಳಿದ್ದಾರೆ. ಭ್ರಮೆಯಲ್ಲಿ ಇರಬೇಡಿ, ಎಲ್ಲಾ ಉಪಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳಿ ಎನ್ನುವ ಬೋಧನೆಯನ್ನು ಮಾಡಿದ್ದಾರೆ.
ತಮ್ಮ ರಾಜ್ಯ ಪ್ರವಾಸದ ಬಗ್ಗೆ ಇದ್ದ ಗೊಂದಲವನ್ನು ತಿಳಿಗೊಳಿಸಿರುವ ಯಡಿಯೂರಪ್ಪನವರು, "ನಾನೊಬ್ಬನೇ ರಾಜ್ಯ ಪ್ರವಾಸಕ್ಕೆ ಹೋಗುತ್ತಿಲ್ಲ. ನನ್ನ ಜೊತೆಗೆ ಪಕ್ಷದ ಅಧ್ಯಕ್ಷರು ಇರುತ್ತಾರೆ, ಆಯಾಯ ಸಂಸದರು, ಶಾಸಕರು, ಪರಿಷತ್ ಸದಸ್ಯರು, ಸ್ಥಳೀಯ ಮುಖಂಡರು ಇರುತ್ತಾರೆ" ಎಂದು ಬಿಎಸ್ವೈ ಹೇಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಯಡಿಯೂರಪ್ಪನವರು ಹಾಡಿಹೊಗಳಿದರೂ, ಅವರ ಹೆಸರೇ ಗೆಲುವಿನ ಮಂತ್ರ ಎನ್ನುವ ಭ್ರಮೆ ಇಟ್ಟುಕೊಳ್ಳಬೇಡಿ ಎನ್ನುವ ಮಾತನ್ನಾಡಿದ್ದಾರೆ. ಇಷ್ಟು ದಿನ ಮೋದಿ, ಅಮಿತ್ ಶಾ ಜಪವನ್ನೇ ಮಾಡುತ್ತಿದ್ದ ರಾಜ್ಯ ಬಿಜೆಪಿಯವರು, ಬಿಎಸ್ವೈ ಹೇಳಿಕೆಯನ್ನು ಯಾವ ರೀತಿ ಅರ್ಥೈಸಿಕೊಳ್ಳುತ್ತಾರೆ ಎನ್ನುವುದನ್ನು ನೋಡಬೇಕಿದೆ. ಮುಂದೆ ಓದಿ...

ದಾವಣಗೆರೆಯ ಕಾರ್ಯಕಾರಿಣಿಯಲ್ಲಿ ಮಾತನಾಡುತ್ತಿದ್ದ ಯಡಿಯೂರಪ್ಪ
ದಾವಣಗೆರೆಯ ಕಾರ್ಯಕಾರಿಣಿಯಲ್ಲಿ ಮಾತನಾಡುತ್ತಿದ್ದ ಯಡಿಯೂರಪ್ಪ, "ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಬಹುಮತ ಪಡೆಯುವುದು ಕಷ್ಟ ಆಗದು. ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾಗಬೇಕೆಂಬ ಅಪೇಕ್ಷೆ ಜನರಲ್ಲಿದೆ. ಆದರೆ ಕರ್ನಾಟಕದಲ್ಲಿ ಅಷ್ಟು ಸುಲಭವಾದ ಪರಿಸ್ಥಿತಿ ಇಲ್ಲ. ಹಾಗಾಗಿ, ನಾವು ಎಚ್ಚರಿಕೆಯಿಂದ ಹೆಜ್ಜೆಯನ್ನಿಡಬೇಕಿದೆ" ಎನ್ನುವ ಮಾತನ್ನು ಬಿಎಸ್ವೈ ಹೇಳಿದ್ದಾರೆ.

ಮೋದಿಯವರ ಹೆಸರು ಅಸೆಂಬ್ಲಿ ಚುನಾವಣೆಯಲ್ಲಿ ವರ್ಕೌಟ್ ಆಗುವುದಿಲ್ಲ
"ಲೋಕಸಭಾ ಚುನಾವಣೆ ಬೇರೆ ಮತ್ತು ಅಸೆಂಬ್ಲಿ ಚುನಾವಣೆಯ ವಿಚಾರಗಳು ಬೇರೆ ಬೇರೆ ಇರುತ್ತದೆ. ಲೋಕಸಭಾ ಚುನಾವಣೆಗೆ ಮೋದಿಯವರ ಹೆಸರನ್ನು ಬಳಸಿ ಗೆಲುವು ಸಾಧಿಸಬಹುದು. ಆದರೆ, ರಾಜ್ಯದ ಚುನಾವಣೆಯಲ್ಲಿ ಇದು ವರ್ಕೌಟ್ ಆಗುವುದು ಕಷ್ಟ. ಹಾಗಾಗಿ ಮೋದಿ ಎನ್ನುವ ಭ್ರಮೆಯಲ್ಲಿ ಇರಬೇಡಿ"ಎಂದು ಯಡಿಯೂರಪ್ಪನವರು ಪಕ್ಷದ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ರಾಜ್ಯದ ವಿಚಾರಕ್ಕೆ ಬಂದಾಗ ಕಾಂಗ್ರೆಸ್ ಶಕ್ತಿಯುತಗೊಳ್ಳುತ್ತಾ ಸಾಗುತ್ತಿದೆ
"ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ನಾವು ಮತ್ತೆ ಗೆಲ್ಲುತ್ತೇವೆ, ಯಾಕೆಂದರೆ ಮೋದಿಯವರಿಗೆ ಪರ್ಯಾಯವಾಗಿ ದೇಶದ ರಾಜಕಾರಣದಲ್ಲಿ ಇನ್ನೊಂದು ಹೆಸರು ಇಲ್ಲ. ಆದರೆ, ರಾಜ್ಯದ ವಿಚಾರಕ್ಕೆ ಬಂದಾಗ ಕಾಂಗ್ರೆಸ್ ಶಕ್ತಿಯುತಗೊಳ್ಳುತ್ತಾ ಸಾಗುತ್ತಿದೆ. ಹಾಗಾಗಿ, ಸ್ಥಳೀಯ ಸಮಸ್ಯೆಗಳನ್ನು ಆಧರಿಸಿ ನಾವು ಜನರ ಮುಂದೆ ಹೋಗಬೇಕಿದೆ. ಹಾಗಾಗಿ ರಾಜ್ಯ ಪ್ರವಾಸ ಮಾಡುವ ನಿರ್ಧಾರಕ್ಕೆ ಬಂದಿದ್ದೇನೆ"ಎಂದು ಯಡಿಯೂರಪ್ಪ ಹೇಳಿದ್ದಾರೆ.
ಗಣೇಶ ಚತುರ್ಥಿಯ ನಂತರ ಯಡಿಯೂರಪ್ಪನವರು ಪ್ರವಾಸ ಮಾಡಲು ನಿರ್ಧರಿಸಿದ್ದರು. ಇದಾದ ಮೇಲೆ, ರಾಜ್ಯಾಧ್ಯಕ್ಷರ ಜೊತೆಗೆ ಪ್ರವಾಸ ಹೋಗುವುದಾಗಿ ಸ್ಪಷ್ಟ ಪಡಿಸಿದ್ದರು.
Recommended Video

ಮೋದಿ ಜಪ, ಮೋದಿ ಹೆಸರು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡು ಹೋದರೆ, ಫಲ ಕೊಡುವುದಿಲ್ಲ
ಪರೋಕ್ಷವಾಗಿ, ಮುಂಬರುವ ರಾಜ್ಯದ ಅಸೆಂಬ್ಲಿ ಚುನಾವಣೆಯಲ್ಲಿ ಪ್ರಚಾರದ ಹೊಣೆಯನ್ನು ತಾನು ವಹಿಸಿಕೊಳ್ಳುತ್ತೇನೆ ಎಂದು ಹೇಳಿರುವ ಬಿಎಸ್ವೈ, ನಾಲ್ಕು ತಂಡಗಳಾಗಿ ರಾಜ್ಯ ಪ್ರವಾಸ ಮಾಡುವುದಾಗಿ ಹೇಳಿದ್ದಾರೆ. ಆ ಮೂಲಕ, ರಾಜ್ಯದ ಚುನಾವಣೆಯಲ್ಲಿ ಮೋದಿ ಜಪ, ಮೋದಿ ಹೆಸರು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡು ಹೋದರೆ, ಫಲ ಕೊಡುವುದಿಲ್ಲ ಎಂದು ಬಿಎಸ್ವೈ ಹೇಳಿದ್ದಾರೆ. ಬಿಜೆಪಿಯ ರಾಜ್ಯ ನಾಯಕರು ಯಾವರೀತಿ ಇದನ್ನು ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.












Click it and Unblock the Notifications