ಮೋದಿಯವರ ಅವಧಿಯಲ್ಲಿ 135 ಲಕ್ಷ ಕೋಟಿ ಸಾಲ; ಇದೇ ಅವರ ಕೀರ್ತಿ: ಸಿದ್ದರಾಮಯ್ಯ ಬಿಚ್ಚಿಟ್ಟ ಅಂಕಿ ಅಂಶಗಳು ಇಲ್ಲಿದೆ.
ಬೆಂಗಳೂರು, ನವೆಂಬರ್ 09: 1947 ರಿಂದ 2014 ರವರೆಗೂ ಭಾರತ ದೇಶದ ಸಾಲ ಇದ್ದದ್ದು ಕೇವಲ 54 ಲಕ್ಷ ಕೋಟಿ. ಮೋದಿ ಪ್ರಧಾನಿ ಆದ 10 ವರ್ಷಗಳಲ್ಲಿ ದೇಶದ ಸಾಲ 185 ಲಕ್ಷ ಕೋಟಿಗೆ ಏರಿಕೆಯಾಗಿದೆ. ಕೇವಲ ಮೋದಿ ಒಬ್ಬರು ತಮ್ಮ ಅವಧಿಯಲ್ಲಿ 135 ಲಕ್ಷ ಕೋಟಿ ಸಾಲ ಮಾಡಿಟ್ಟಿದ್ದಾರೆ. ಇದೆಲ್ಲವನ್ನೂ ತೀರಿಸುವ ಜವಾಬ್ದಾರಿ ಭಾರತೀಯರ ತಲೆಗೆ ಬಂದಿದೆ. ಇದೇ ಮೋದಿಯವರ ಕೀರ್ತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಕಿ ಅಂಶಗಳನ್ನ ಬಿಚ್ಚಿಟ್ಟಿದ್ದಾರೆ.
ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿ ನಮ್ಮ ನಿಮ್ಮ ಬದುಕಿನ ಸಮಸ್ಯೆಗಳ ಬಗ್ಗೆ ಯಾವತ್ತೂ ಮಾತಾಡಿಲ್ಲ. ಜಾತಿ-ಧರ್ಮದ ಹೆಸರಿನಲ್ಲಿ ಭಾರತೀಯರನ್ನು ಪರಸ್ಪರ ಕಚ್ಚಾಡಿಸಿ, ವಿಭಜನೆ ಮೂಲಕ ರಾಜಕಾರಣ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಅದಕ್ಕೇ ರಾಹುಲ್ ಗಾಂಧಿಯವರು ಭಾರತ್ ಜೋಡೋ ಮೂಲಕ ಭಾರತೀಯರ ಮನಸ್ಸು-ಹೃದಯಗಳನ್ನು ಬೆಸೆಯುವ "ಭಾರತ್ ಜೋಡೋ" ಚಳವಳಿಯನ್ನು ಮುನ್ನಡೆಸಿದ್ದಾರೆ.

ರೈತರ ಬದುಕನ್ನು ಮಾರಣ ಹೋಮ ಮಾಡುವ ಕರಾಳ ಕಾಯ್ದೆಗಳನ್ನು ಮೋದಿ ಸರ್ಕಾರ ಜಾರಿಗೆ ತಂದಿತು. ದೇಶಾದ್ಯಂತ ರೈತರು ನಡೆಸಿದ ವಿರೋಚಿತ ಹೋರಾಟಕ್ಕೆ ಶರಣಾಗಿ ಮೋದಿ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ವಾಪಾಸ್ ಪಡೆಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ರೈತರ ಬದುಕಿಗೆ ಕರಾಳತೆ ಸೃಷ್ಟಿಸಿದ ಮೋದಿ ಸರ್ಕಾರ ಮತ್ತೊಂದು ಕಡೆ ಸಂವಿಧಾನ ಬದಲಾಯಿಸುವ ಹುನ್ನಾರ ನಡೆಸುತ್ತಾ ಇಡೀ ದೇಶದ ಶ್ರಮಿಕ ಮತ್ತು ದುಡಿಯುವ ವರ್ಗಗಳ ಬದುಕಿನ ಅವಕಾಶಗಳನ್ನು ಹೊಸಕಿ ಹಾಕುವ ಹುನ್ನಾರವನ್ನೂ ನಡೆಸುತ್ತಿದೆ. ಬಿಜೆಪಿ ಸಂಸದ ಅನಂತ ಕುಮಾರ ಹೆಗ್ಡೆ ಯವರು ಬಿಜೆಪಿ ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲಿಕ್ಕೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದರು. ಈ ಹೇಳಿಕೆಯನ್ನು ಪ್ರಧಾನಿ ಮೋದಿ ಅಲ್ಲಗಳೆಯಲಿಲ್ಲ.
ಇದೇ ಮೋದಿಯವರಿಗೆ ಅಚ್ಛೆ ದಿನ್ ಆಗಿದ್ದರೆ, ನಮಗೆ ನಿಮಗೆ, ಭಾರತೀಯರೆಲ್ಲರಿಗೆ ಇವರು ಅತ್ಯಂತ ಕೆಟ್ಟ ದಿನಗಳನ್ನು ತಂದಿದ್ದಾರೆ. ಮೋದಿಯವರು ಭಾರತೀಯರ ಪಾಲಿಗೆ ತಂದ ಕೆಟ್ಟ ದಿನಗಳ ಬಗ್ಗೆ ಯಾವತ್ತೂ ಅವರ ಮನ್ ಕಿ ಬಾತ್ ನಲ್ಲಿ ಮಾತಾಡುವುದಿಲ್ಲ. ರಾಜ್ಯದಲ್ಲೂ ಅಧಿಕಾರ ನಡೆಸಿದ ಬಿಜೆಪಿ ಸರ್ಕಾರ ಕೇವಲ ಲೂಟಿ ಮಾಡಿ ಮನೆ ಸೇರಿದ್ದು ಬಿಟ್ಟರೆ ಅಭಿವೃದ್ಧಿ ಕಡೆ ತಲೆ ಹಾಕಿ ಕೂಡ ಮಲಗಲಿಲ್ಲ.
ಬಿಜೆಪಿ ತನ್ನ ಅವಧಿಯಲ್ಲಿ ಇಡೀ ಸಂಡೂರಿಗೆ ಒಂದೇ ಒಂದು ಮನೆ ಕಟ್ಟಿ ಕೊಡಲಿಲ್ಲ. ಇದನ್ನೆಲ್ಲಾ ನಾನು ಪ್ರಶ್ನಿಸುತ್ತೇನೆ ಎನ್ನುವ ಕಾರಣಕ್ಕೆ, ಮೋದಿ ರಾಜ್ಯಕ್ಕೆ ಮಾಡಿರುವ ಅನ್ಯಾಯಗಳ ವಿರುದ್ಧ ಬೆಂಗಳೂರಿನಿಂದ ದೆಹಲಿವರೆಗೂ ಹೋಗಿ ಹೋರಾಟ ಮಾಡಿದೆವು ಎನ್ನುವ ಕಾರಣದಿಂದ ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ತೊಂದರೆ ಕೊಡುತ್ತಿದೆ.
ಇದಕ್ಕೆಲ್ಲಾ ಉತ್ತರ ಕೊಡುವ ಕಾಲ ಬಂದಿದೆ. ಈ ಉಪ ಚುನಾವಣೆಯಲ್ಲಿ ಮೂರಕ್ಕೆ ಮೂರೂ ಕ್ಷೇತ್ರಗಳಲ್ಲಿ ನಾವು , ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಭೇರಿ ಬಾರಿಸುತ್ತಾರೆ. ಸಂಡೂರಿನಲ್ಲಿ ಅನ್ನಪೂರ್ಣಮ್ಮ ಅವರನ್ನು 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದರೆ ನನಗೆ ದೊಡ್ಡ ಶಕ್ತಿ ಬರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.












Click it and Unblock the Notifications